ಜೆಡಿಎಸ್ ಶಾಸಕರಿಗೆ ವಿಪ್ ಜಾರಿ
Team Udayavani, Jul 18, 2019, 3:00 AM IST
ಬೆಂಗಳೂರು: ಗುರುವಾರ ಸದನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸುವ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ಅಧ್ಯಕ್ಷರೂ ಆಗಿರುವ ಎಚ್.ಡಿ.ಕುಮಾರಸ್ವಾಮಿಯವರು ವಿಪ್ ಜಾರಿ ಮಾಡಿದ್ದು, ಜುಲೈ 18 ರಂದು ಗುರುವಾರದಂದು ಬೆಂಗಳೂರಿನ ವಿಧಾನಸೌಧದ ಮೊದಲನೇ ಮಹಡಿಯ ವಿಧಾನಸಭೆ ಸದನದಲ್ಲಿ ನಾನು “ವಿಶ್ವಾಸಮತದ’ ನಿರ್ಣಯ ಮಂಡಿಸಲಿದ್ದು, ಜೆಡಿಎಸ್ ಪಕ್ಷದ ವಿಧಾನಸಭೆ ಸದಸ್ಯರಾದ ತಾವು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು.
ವಿಶ್ವಾಸಮತದ ಚರ್ಚೆ ಪ್ರಾರಂಭವಾದ ದಿನದಿಂದ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ತಾವು ಸದನದಲ್ಲಿ ಹಾಜರಿರಬೇಕು ಎಂದು ಈ ಮೂಲಕ ಸಚೇತನ (ವಿಪ್) ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. “ನಾನು ಸದನದಲ್ಲಿ ವಿಶ್ವಾಸಮತ ಮಂಡಿಸುವ ಸಂದರ್ಭದಲ್ಲಿ ತಾವು ಖುದ್ದು ಹಾಜರಿದ್ದು, ವಿಶ್ವಾಸಮತದ ಪರವಾಗಿ ಮತ ನೀಡಬೇಕು.
ಹಾಗೇನಾದರೂ ತಾವು ಗೈರು ಹಾಜರಾದಲ್ಲಿ ಅಥವಾ ಹಾಜರಾಗಿ ಮತ ಚಲಾಯಿಸದಿದ್ದಲ್ಲಿ ಅಥವಾ ವಿಪ್ ಉಲ್ಲಂ ಸಿ ಮತ ಚಲಾಯಿಸಿದಲ್ಲಿ ಪಕ್ಷಾಂತರ ನಿಷೇಧ ಕಾನೂನಿನಡಿಯಲ್ಲಿ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ಸಂವಿಧಾನದ ಆನುಚ್ಚೇದ-10ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.