BJP ಜಗಳ ಮತ್ತಷ್ಟು ತಾರಕಕ್ಕೆ; ವಿಪಕ್ಷ ಸ್ಥಾನದಿಂದ ಈಶ್ವರಪ್ಪಗೆ ಕೊಕ್?
Team Udayavani, Jan 12, 2017, 12:28 PM IST
ಬೆಂಗಳೂರು:ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಣಕ್ಕೆ ಸಡ್ಡು ಹೊಡೆದಿರುವ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ನಡುವಿನ ಜಗಳ ಈಗ ತಾರಕಕ್ಕೇರಿದೆ. ಈಶ್ವರಪ್ಪಗೆ ಶಿಷ್ಯ, ಮಾಜಿ ಮೇಯರ್ ವೆಂಕಟೇಶ್ ಮೂರ್ತಿಗೆ ಬಿಜೆಪಿಯಿಂದ ಗೇಟ್ ಪಾಸ್ ಕೊಟ್ಟ ಬೆನ್ನಲ್ಲೇ, ಬ್ರಿಗೇಡ್ ಮುಂದಾಳು ಈಶ್ವರಪ್ಪಗೆ ಬಿಸಿ ಮುಟ್ಟಿಸಲು ಬಿಎಸ್ ವೈ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ ಮಾಧ್ಯಮಗಳಲ್ಲಿ ಈ ವರದಿ ಪ್ರಸಾರವಾಗುತ್ತಿದ್ದಂತೆಯೇ, ಸಂಜೆ ನಡೆಯುವ ಎಂಎಲ್ ಸಿಗಳ ಸಭೆಗೆ ಆಗಮಿಸುವಂತೆ ಬಿಎಸ್ ಯಡಿಯೂರಪ್ಪ ಅವರು ಕೆಎಸ್ ಈಶ್ವರಪ್ಪಗೆ ಆಹ್ವಾನ ನೀಡಿರುವ ಬೆಳವಣಿಗೆ ನಡೆದಿದೆ.
ಗುರುವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆ ಸಿದ್ಧತೆ ಹಿನ್ನೆಲೆ ನೆಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಎಂಎಲ್ ಸಿಗಳ ಸಭೆ ಕರೆದಿದ್ದಾರೆ. ಆದರೆ ಈ ಸಭೆಗೆ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪಗೆ ಆಹ್ವಾನ ಇಲ್ಲ ಎಂದು ವರದಿ ವಿವರಿಸಿದೆ.
ಸಂಜೆ 7ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಯಣ್ಣ ಬ್ರಿಗೇಡ್ ಜೊತೆ ಗುರುತಿಸಿಕೊಂಡಿರುವ ಕೆಎಸ್ ಈಶ್ವರಪ್ಪ ಅವರನ್ನು ಮೇಲ್ಮನೆ ವಿಪಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ವಿಧಾನಪರಿಷತ್ ನಲ್ಲಿ ಕೆಎಸ್ ಈಶ್ವರಪ್ಪ ಸೇರಿ 25 ಮಂದಿ ಬಿಜೆಪಿ ಎಂಎಲ್ ಸಿಗಳಿದ್ದಾರೆ. ಅದರಲ್ಲಿ ಮೇಲ್ಮನೆ ಸಭಾಪತಿ ಡಿಎಚ್ ಶಂಕರಮೂರ್ತಿ ಸೇರಿದಂತೆ 24 ಎಂಎಲ್ ಸಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ ಈಶ್ವರಪ್ಪಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೇಳಲಾಗುತ್ತಿದೆ.