ಗೆಲುವಿನ ಸೂತ್ರಧಾರರು
Team Udayavani, Dec 10, 2019, 3:05 AM IST
ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಕ್ಕೂ ಬಿಜೆಪಿಯಲ್ಲಿ ಉಸ್ತುವಾರಿಗಳನ್ನು ನೇಮಿಸಲಾಗಿತ್ತು. ಕೆ.ಆರ್.ಪೇಟೆಗೆ ಬಿ.ವೈ.ವಿಜಯೇಂದ್ರ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಣಿಬೆನ್ನೂರಿಗೆ ಬಿ.ವೈ.ರಾಘವೇಂದ್ರ ಅವರನ್ನು ನೇಮಿಸಲಾಗಿತ್ತು. ಅಭ್ಯರ್ಥಿಗಳ ಗೆಲುವಿಗೆ ಉಸ್ತುವಾರಿಗಳ ಪಾತ್ರ ಪ್ರಮುಖವಾದದ್ದಾಗಿದೆ.
ಬಿ.ವೈ.ವಿಜಯೇಂದ್ರ: ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದ್ದಾರೆ. ಒಕ್ಕಲಿಗ ಸಮುದಾಯದ ಹಾಸನ ಶಾಸಕ ಪ್ರೀತಂಗೌಡರನ್ನು ಜತೆಯಾಗಿಸಿಕೊಂಡು ಲಿಂಗಾಯತ ಮತಗಳ ಜತೆಗೆ ಒಕ್ಕಲಿಗ ಮತಗಳನ್ನೂ ಬಿಜೆಪಿ ಪರ ಚಲಾವಣೆಯಾಗುವಂತೆ ಕಾರ್ಯತಂತ್ರ ರೂಪಿಸಿ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ವಾರ ಕಾಲ ವಾಸ್ತವ್ಯ ಹೂಡಿ ಸೋಲಬಹುದು ಎಂಬ ಆತಂಕವಿದ್ದ ಕ್ಷೇತ್ರವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಜಯೇಂದ್ರ ಅವರದ್ದು ಪಾತ್ರ ಪ್ರಮುಖ. ಈ ಗೆಲುವು ಹಳೇ ಮೈಸೂರು ಭಾಗದಲ್ಲಿ ತಮ್ಮ ಪುತ್ರ ನಾಯಕನಾಗಿ ಹೊರ ಹೊಮ್ಮಬೇಕು ಎಂಬ ಬಿಎಸ್ವೈ ಬಯಕೆಯ ಮೆಟ್ಟಿಲು ಹತ್ತಲು ಅವಕಾಶ ದೊರೆತಂತಾಗಿದೆ.
ಡಾ.ಸಿ.ಎನ್.ಅಶ್ವತ್ಥನಾರಾಯಣ: ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದಕ್ಕಿಸಿಕೊಟ್ಟು ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವ ಗಳಿಸಿಕೊಳ್ಳುವತ್ತ ಡಾ.ಸಿ.ಎನ್.ಅಶ್ವತ್ಥನಾರಾಯಣ ದಾಪುಗಾಲು ಹಾಕಿದ್ದಾರೆ. ಕೆ.ಆರ್.ಪೇಟೆಯಲ್ಲಿ ಉಸ್ತುವಾರಿ ವಹಿಸಿಕೊಂಡ ನಂತರ ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿಗೆ ಒಕ್ಕಲಿಗ ಸಮುದಾಯದ ಮತ ಪಡೆಯಲು ಸಾಕಷ್ಟು ಗುಪ್ತ ಸಭೆಗಳನ್ನು ನಡೆಸಿ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವಿನಿಂದ ಅಶ್ವತ್ಥನಾರಾಯಣ ಅವರಿಗೆ ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ನಾಯಕನಾಗುವ ನಿಟ್ಟಿನಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬಾಲಚಂದ್ರ ಜಾರಕಿಹೊಳಿ: ರಾಜ್ಯದ ಗಮನ ಸೆಳೆದಿದ್ದ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಬೆಂಬಲಕ್ಕೆ ಸಹೋದರರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಭೀಮಸಿ ಟೊಂಕ ಕಟ್ಟಿ ನಿಂತಿದ್ದರು. ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರಿಂದ ಬಿರುಸಿನ ಪೈಪೋಟಿ ಇದ್ದ ಕಾರಣ ಕ್ಷೇತ್ರದಾದ್ಯಂತ ಓಡಾಡುವ ಮೂಲಕ ಮತದಾರರ ಓಲೈಕೆಯಲ್ಲಿ ಯಶ ಕಂಡಿದ್ದಾರೆ. ಯಾರು ಏನೇ ಹೇಳಿದರೂ ರಮೇಶ ಜಾರಕಿಹೊಳಿ ಜಯ ನಿಶ್ಚಿತ ಎಂದು ಹೇಳುತ್ತಲೇ ಬಂದ ಸಹೋದರರು ಕೊನೆಗೂ ತಮ್ಮ ಮಾತು ಉಳಿಸಿಕೊಂಡಿದ್ದಾರೆ.
ಲಕ್ಷ್ಮಣ ಸವದಿ: ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ಈ ಬಾರಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾಗಿ ಕಂಡರು. ಚುನಾವಣಾ ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಲಕ್ಷ್ಮಣ ಸವದಿ ಅವರ ಹೆಸರು ಪ್ರಸ್ತಾಪ ಮಾಡುತ್ತಿದ್ದ ಮಹೇಶ ಕುಮಟಳ್ಳಿಗೆ ಕುಟುಂಬದ ಸದಸ್ಯರು ಸಹ ಬೆಂಬಲವಾಗಿ ನಿಂತು ಗೆಲುವಿನ ದಡ ಮುಟ್ಟಿಸಿದ್ದಾರೆ. ಮುಖ್ಯವಾಗಿ ಕುಮಟಳ್ಳಿ ಗೆಲುವಿನ ಮಹತ್ವದ ಜವಾಬ್ದಾರಿ ಹೊತ್ತಿದ್ದ ಲಕ್ಷ್ಮಣ ಸವದಿ, ಆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.
ಶ್ರೀನಿವಾಸ ಪಾಟೀಲ: ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರಿಗೆ ಮಗ ಶ್ರೀನಿವಾಸ ಪಾಟೀಲರ ಪ್ರಚಾರದ ಬಲ ಸಾಕಷ್ಟು ರೀತಿಯಲ್ಲಿ ನೆರವಾಯಿತು. ಇದಕ್ಕೆ ಪೂರಕವೆಂಬಂತೆ ಲಕ್ಷ್ಮಣ ಸವದಿ ಅವರ ಸಕಾಲಿಕ ಸಹಾಯವೂ ಸಿಕ್ಕಿತು. ಇದರಿಂದ ಕಾಂಗ್ರೆಸ್ನಿಂದ ಜಿಗಿದು ಬಿಜೆಪಿಗೆ ಬಂದರೂ ಶ್ರೀಮಂತ ಪಾಟೀಲರ ಗೆಲುವಿಗೆ ಯಾವುದೇ ಸಮಸ್ಯೆಯಾಗಲಿಲ್ಲ.
ಬಿ.ವೈ.ರಾಘವೇಂದ್ರ: ರಾಣಿಬೆನ್ನೂರು ಕ್ಷೇತ್ರದಲ್ಲಿ ಅರುಣಕುಮಾರ ಗೆಲುವಿನ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಕಾರ್ಯತಂತ್ರ ಬಲಿಷ್ಠವಾಗಿ ಕಾರ್ಯ ನಿರ್ವಹಿಸಿದ್ದು ಗಮನಾರ್ಹ. ಅರುಣಕುಮಾರ ಅವರಿಗೆ ಟಿಕೆಟ್ ನೀಡಿದಾಗ ಭುಗಿಲೆದ್ದಿದ್ದ ಭಿನ್ನಮತವನ್ನು ಶಮನಗೊಳಿಸುವಲ್ಲಿ ತಮ್ಮ ಚಾಣಾಕ್ಷತನ ತೋರಿದ್ದರು. ಬಳಿಕ ಗ್ರಾಮೀಣ ಭಾಗದಲ್ಲಿ ಸಣ್ಣ ಪುಟ್ಟ ಮುಖಂಡರನ್ನು ಭೇಟಿಯಾಗಿ, ಸಣ್ಣ ಜಾತಿ ಸಮುದಾಯಗಳನ್ನೂ ಅವರ ಮುಖಂಡರೊಂದಿಗೆ ಭೇಟಿ ಮಾಡಿ ಮತಸೆಳೆಯುವ ಪ್ರಯತ್ನ ಮಾಡಿದ್ದರು. ಆರ್. ಶಂಕರ್ ಅವರನ್ನು ಸೇರಿಸಿಕೊಂಡು ಕುರುಬ ಮತಬೇಟೆಯೂ ಆಡಿದ್ದರು. ಈ ಎಲ್ಲ ತಂತ್ರಗಳು “ಅರುಣೋದಯ’ಕ್ಕೆ ಸಹಕಾರಿಯಾದವು.
ಯು.ಬಿ.ಬಣಕಾರ: ಹಿರೇಕೆರೂರು ಕ್ಷೇತ್ರದ ಬಿಜೆಪಿ ಗೆಲುವಿನಲ್ಲಿ ದೊಡ್ಡ ಸಹಕಾರ ಸಿಕ್ಕಿದ್ದು ಮಾಜಿ ಶಾಸಕ ಯು.ಬಿ. ಬಣಕಾರ ಅವರದ್ದು. ಸಿಎಂ ಯಡಿಯೂರಪ್ಪ ಅವರ ಅಪ್ಪಟ ಶಿಷ್ಯರಾದ ಬಣಕಾರ, “ಪಾಟೀಲ- ಬಣಕಾರ ಇಬ್ಬರೂ ಜೋಡೆತ್ತಿನಂತೆ ಒಟ್ಟಾಗಿ ಕೆಲಸ ಮಾಡಬೇಕು’ ಎಂಬ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿದರು. ಪ್ರತಿದಿನ, ಪ್ರತಿಕ್ಷಣ ಬಿ.ಸಿ. ಪಾಟೀಲರ ಜತೆಗಿದ್ದು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.