ಯೋಗೀಶ್ ಮಾಸ್ಟರ್ಗೆ ಕಿಡಿಗೇಡಿಗಳಿಂದ ಮಸಿ
Team Udayavani, Mar 13, 2017, 11:08 AM IST
ದಾವಣಗೆರೆ: ವಿವಾದಾತ್ಮಕ “ಢುಂಢಿ’ ಕೃತಿಯ ಲೇಖಕ ಯೋಗೀಶ್ ಮಾಸ್ಟರ್ ಮೇಲೆ ಭಾನುವಾರ ಸಂಜೆ ಕಿಡಿಗೇಡಿಗಳು ಮಸಿ ಸುರಿದು, ಹಲ್ಲೆ ಮಾಡಿದ್ದಾರೆ. ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪಿ.ಲಂಕೇಶ್ರ 82ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯೋಗೀಶ್ ಮಾಸ್ಟರ್ ಆಗಮಿಸಿದ್ದರು.
ಸಂಜೆ 5 ಗಂಟೆ ಸುಮಾರಿಗೆ ವೈದ್ಯಕೀಯ ವಿದ್ಯಾರ್ಥಿ ವಸತಿ ನಿಲಯದ ಬಳಿ ಹೋಟೆಲ್ನಲ್ಲಿ ಟೀ ಕುಡಿಯುತ್ತಾ ನಿಂತಿದ್ದಾಗ ನಾಲ್ಕೈದು ಬೈಕ್ಗಳಲ್ಲಿ ಬಂದ ಕಿಡಿಗೇಡಿಗಳು ಮೈ ಮೇಲೆ ಇಂಜಿನ್ ಆಯಿಲ್ ಸುರಿದಿದ್ದಾರೆ. ಜತೆಗೆ
ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಕೆಲವೇ ನಿಮಿಷಗಳಲ್ಲಿ ಪರಾರಿಯಾಗಿದ್ದಾರೆ. ಮಸಿ ಬಳಿದ ವೇಳೆ ಜೈ ಭಾರತ್ ಮಾತಾ… ಜೈ ಶ್ರೀರಾಮ್… ಎಂದು ಘೋಷಣೆ ಕೂಗಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಳಿ ನಡೆಯುತ್ತಲೇ ಯೋಗೀಶ್ ಮಾಸ್ಟರ್ ಕಾರ್ಯಕ್ರಮ ನಡೆಯುತ್ತಿದ್ದ ಕುವೆಂಪು ಭವನಕ್ಕೆ ಬಂದರು. ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, “ನನಗೆ ದಿಕ್ಕು ತೋಚದಂತಾಗಿದೆ. ನನ್ನ ಮೇಲೆ ಮಾನಸಿಕ, ದೈಹಿಕ ಹಲ್ಲೆ ಮಾಡಲಾಗಿದೆ. ಮಧ್ಯಾಹ್ನ ನನ್ನೊಂದಿಗೆ ಕೆಲವರು ಮಾತನಾಡಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಬಂದಿದ್ದ
ಅವರು, ನನ್ನ ಬರವಣಿಗೆ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಇದೇ ವೇಳೆ ನೀವು ದೊಡ್ಡ ದೊಡ್ಡ ವಿಚಾರಗಳಿಗೆ ಕೈ ಹಾಕಿದ್ದೀರಿ. ಹುಷಾರಾಗಿರಿ ಎಂದೆಲ್ಲ ಕಾಳಜಿ ವ್ಯಕ್ತಪಡಿಸಿದ್ದರು. ನನ್ನೊಂದಿಗೆ ಮಾತನಾಡಿದವರೇ ಮಸಿ ಬಳಿದಿರಬಹುದೆಂಬ ಶಂಕೆಯಿದೆ ಎಂದರು.