ಚೀಲದಲ್ಲಿ ತಂದು ಲಕ್ಷಾಂತರ ರೂಪಾಯಿ ಹಂಚಿದ ಜಮೀರ್
Team Udayavani, Sep 2, 2019, 3:00 AM IST
ಬೆಂಗಳೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೈಚೀಲದಲ್ಲಿ ಲಕ್ಷಾಂತರ ರೂಪಾಯಿ ನಗದು ಕೊಂಡೊಯ್ದು ನಿಧನರಾದ ತಮ್ಮ ಆಪ್ತನ ಕುಟುಂಬಕ್ಕೆ ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಮೀರ್ ಅವರ ಆಪ್ತ ಚಾಮರಾಜಪೇಟೆ ಕ್ಷೇತ್ರದ ಗೋರಿಪಾಳ್ಯದಲ್ಲಿ ಸಾವೀಗಿಡಾಗಿದ್ದರಿಂದ ಅವರ ಕುಟುಂಬಕ್ಕೆ ಪರಿಹಾರ ನೀಡಲು ನಗದನ್ನು ಕೈಚೀಲದಲ್ಲಿ ಕೊಂಡೊಯ್ದು ಸಾರ್ವಜನಿಕವಾಗಿಯೇ ಹಂಚಿಕೆ ಮಾಡಿರುವುದು ಹಲವು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸುಮಾರು 20 ಲಕ್ಷ ರೂ.ಗಳಲ್ಲಿ 500 ರೂ. ಮುಖಬೆಲೆಯ 9 ಲಕ್ಷ ಮತ್ತು 2 ಸಾವಿರ ರೂ. ಮುಖಬೆಲೆಯ 11 ಲಕ್ಷ ಇರುವ ನೋಟುಗಳ ಕಂತೆಯನ್ನು ಕೈಚೀಲದಿಂದ ತೆಗೆದು, ತಾವೇ ಎಣಿಸಿ, ಸಾವಿಗೀಡಾದ ಕುಟುಂಬದ ಸದಸ್ಯರಿಗೆ ನೀಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಜಮಿರ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರಲ್ಲದೆ, ಹಣ ನೀಡುವ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಕೆಲವು ಸೂಚನೆಯನ್ನು ನೀಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.