ಲಂಡನ್ನಲ್ಲಿ ಉಗ್ರರ ಅಟ್ಟಹಾಸಕ್ಕೆ 7 ಬಲಿ; ಪೊಲೀಸರಿಂದ ಕಾರ್ಯಾಚರಣೆ
Team Udayavani, Jun 5, 2017, 3:45 AM IST
ಲಂಡನ್: ಭಯೋತ್ಪಾದಕರ ಸಾಫ್ಟ್ ಟಾರ್ಗೆಟ್ ಆಗಿದೆಯೇ ಲಂಡನ್? ಹೌದು, ಎನ್ನುತ್ತಿವೆ ತಿಂಗಳಲ್ಲೇ ನಡೆದ ಎರಡು ಭಯೋತ್ಪಾದನಾ ದಾಳಿಗಳು. ಇನ್ನು ನಾಲ್ಕು ದಿನಗಳಲ್ಲಿ ಇಂಗ್ಲೆಂಡ್ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಎರಡೂ ದಾಳಿಗಳು ಆತಂಕಕ್ಕೆ ಕಾರಣವಾಗಿವೆ.
ಇಂಗ್ಲೆಂಡ್ ರಾಜಧಾನಿಯ ಖ್ಯಾತ ಸ್ಥಳ ಲಂಡನ್ ಬ್ರಿಡ್ಜ್ ಮತ್ತು ಹತ್ತಿರದ ಮಾರುಕಟ್ಟೆಯಲ್ಲಿ ಮೂವರು ಉಗ್ರರು ಚಾಕುವಿನಿಂದ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ಏಳು ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಹನ್ನೆರಡು ದಿನಗಳ ಹಿಂದೆ, ಅಂದರೆ ಮೇ 22 ರಂದು ಮ್ಯಾಂಚೆಸ್ಟರ್ನ ಸಂಗೀತ ಸಂಜೆಯಲ್ಲಿ ನಡೆದ ಆತ್ಮಾಹುತಿ ದಾಳಿಯಿಂದ 22 ಮಂದಿ ಅಸುನೀಗಿದ್ದರು.
ದೇಹಕ್ಕೆ ಹುಸಿ ಆತ್ಮಾಹುತಿ ಜಾಕೆಟ್ ತೊಟ್ಟಿದ್ದ ಈ ಮೂವರು ಮೊದಲಿಗೆ ತಮ್ಮ ಕೈಯಲ್ಲಿದ್ದ ದೊಡ್ಡ ಚಾಕುವಿನಿಂದ ಕಂಡ ಕಂಡವರ ಮೇಲೆಲ್ಲಾ ದಾಳಿ ನಡೆಸಿದ್ದಾರೆ. ಬಳಿಕ, ಲಂಡನ್ ಬ್ರಿಡ್ಜ್ ಮೇಲೆ ಹೋಗುತ್ತಿದ್ದ ಪಾದಚಾರಿಗಳ ಮೇಲೆ ತಾವು ತಂದಿದ್ದ ವ್ಯಾನ್ ಹತ್ತಿಸಿದ್ದಾರೆ. ಈ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 48 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಲಂಡನ್ನ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ. ಜತೆಗೆ ಉಗ್ರರು ಉಳಿದಿದ್ದರೆನ್ನಲಾದ ಅಪಾರ್ಟ್ಮೆಂಟ್ನ ಮೇಲೂ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇವಲ ಎಂಟು ನಿಮಿಷಗಳ ಅಂತರದಲ್ಲಿ ಎರಡೂ ಕಡೆಗಳಲ್ಲಿ ದಾಳಿ ನಡೆದಿದೆ. ಶನಿವಾರ ರಾತ್ರಿ(ಇಂಗ್ಲೆಂಡ್ ಕಾಲಮಾನ) 10 ಗಂಟೆ ವೇಳೆಗೆ ಈ ದಾಳಿ ನಡೆದಿದೆ. ವ್ಯಾನ್ನಲ್ಲಿ ಬಂದ ಮೂವರೂ ದುಷ್ಕರ್ಮಿಗಳು, “ಅಲ್ಲಾಹುಗಾಗಿ ಈ ದಾಳಿ’ ಎಂದು ಕೂಗುತ್ತಾ ಮುನ್ನಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಲಂಡನ್ನ ಈ ಸ್ಥಳ ಭಾರೀ ಪ್ರಸಿದ್ಧಿ ಪಡೆದಿದ್ದು, ವಾರಾಂತ್ಯದ ಪಾರ್ಟಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಅಲ್ಲದೆ ಇಲ್ಲಿ ಹಲವಾರು ರೆಸ್ಟೋರೆಂಟ್ಗಳು, ಪಬ್, ಕ್ಲಬ್ಗಳಿವೆ. ಹೀಗಾಗಿಯೇ ಈ ಸ್ಥಳವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಶಸ್ತ್ರಧಾರಿ ಪೊಲೀಸರು ಮೂರು ಮಂದಿಯನ್ನೂ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬೋರೋಗ್ ಮಾರುಕಟ್ಟೆಯಲ್ಲಿ ಇವರನ್ನು ಹತ್ಯೆ ಮಾಡಲಾಗಿದ್ದು, ಅವರು ಆತ್ಮಾಹುತಿ ಬಾಂಬರ್ಗಳಂತೆ ಕೋಟ್ ತೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಕೋಟ್ನಲ್ಲಿ ಯಾವುದೇ ಬಾಂಬ್ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ದಾಳಿಯ ಬಗ್ಗೆ ಸುಳಿವು ಸಿಗುತ್ತಿದ್ದಂತೆ, ಬ್ರಿಡ್ಜ್ ಮತ್ತು ಮಾರುಕಟ್ಟೆಯಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯಿಂದಾಗಿ ಕೆಲವರು ಮನೆ ಸೇರಲು ಸಾಧ್ಯವಾಗಿಲ್ಲ. ಇಂಥವರಿಗೆ ಸ್ಥಳೀಯ ಜನ ತಮ್ಮ ಮನೆಗಳಲ್ಲಿಯೇ ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ, ಮನೆ ಸೇರದವರ ಕುಟುಂಬಗಳು ರಾತ್ರಿಯಿಡೀ ತಮ್ಮವರಿಗಾಗಿ ಹುಡುಕಾಟ ನಡೆಸಿವೆ. ಈ ಘಟನೆಯನ್ನು ನಾವು ಭಯೋತ್ಪಾದನಾ ದಾಳಿ ಎಂದೇ ಪರಿಗಣಿಸಲಿದ್ದೇವೆ. ಇದರ ಆಧಾರದ ಮೇಲೆಯೇ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಚುನಾವಣೆ ಮುಂದೂಡಿಕೆ ಇಲ್ಲ
ಜೂ.8 ರಂದು ಇಂಗ್ಲೆಂಡ್ನಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. ದಾಳಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಮುಂದೂಡಿಕೆಯ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. ಆದರೆ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಮೇ ಸ್ಪಷ್ಟಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾನುವಾರ ಯುಕಿಪ್ ಬಿಟ್ಟು ಉಳಿದೆಲ್ಲಾ ಪಕ್ಷಗಳು ಪ್ರಚಾರ ಕಾರ್ಯ ಕೈಬಿಟ್ಟಿದ್ದವು. ಸೋಮವಾರದಿಂದ ಮತ್ತೆ ಪ್ರಚಾರ ಆರಂಭಿಸುವುದಾಗಿ ಈ ಪಕ್ಷಗಳು ಹೇಳಿವೆ.
ಉಗ್ರರ ಮಟ್ಟ ಹಾಕದೇ ಬಿಡೆವು ಎಂದು ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಆಕ್ರೋಶದಿಂದ ಹೇಳಿಕೆ ನೀಡಿದ್ದಾರೆ. ವರ್ಷದಲ್ಲೇ ಇದು ಮೂರನೇ ಬಾರಿ ಆಗುತ್ತಿರುವ ದಾಳಿಯಾಗಿದೆ. ಇದಕ್ಕೆ ಇಸ್ಲಾಮಿಕ್ ಭಯೋತ್ಪಾದನೆಯೇ ಕಾರಣ ಎಂದು ಕಿಡಿಕಾರಿದ್ದಾರೆ. ಲಂಡನ್ ಮೇಯರ್ ಸಾದಿಕ್ ಖಾನ್ ಕೂಡ, ಲಂಡನ್ ನಗರದ ಅಮಾಯಕರ ಮೇಲೆ ಕ್ರೌರ್ಯದ ದಾಳಿ ಎಂದು ಹೇಳಿದ್ದಾರೆ.
ವಿಶ್ವಾದ್ಯಂತ ಖಂಡನೆ
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಾಗತಿಕ ನಾಯಕರೆಲ್ಲರೂ ಲಂಡನ್ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿ ದಿಗ್ಭ್ರಮೆ ತಂದಿದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ಹೇಳಿಕೆಯನ್ನು ಲಂಡನ್ ಮೇಯರ್ ಸಾದಿಕ್ ಖಾನ್ ಅವರನ್ನು ಹಳಿಯಲು ಬಳಸಿಕೊಂಡಿದ್ದಾರೆ. ಆತಂಕ ಪಡಲು ಯಾವುದೇ ಕಾರಣವಿಲ್ಲ ಎಂದು ಸಾದಿಕ್ ಖಾನ್ ಹೇಳುವ ಮೂಲಕ, ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈಗ ಉಗ್ರರು ಬಂದೂಕು, ಬಾಂಬ್ ಬಿಟ್ಟು, ಚಾಕು, ಟ್ರಕ್ಗಳಲ್ಲಿ ಬಂದು ದಾಳಿ ಮಾಡುತ್ತಿದ್ದಾರೆ. ಹಿಂದೆ ಬಂದೂಕಿನಿಂದಲೇ ಉಗ್ರರ ದಾಳಿಯಾಗುತ್ತಿತ್ತು ಎಂದು ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಂದಿದ್ದಾರೆ. ಇದಷ್ಟೇ ಅಲ್ಲ, ಇಂಥ ಘಟನೆಗಳನ್ನು ನೋಡಿದರೆ, 6 ಮುಸ್ಲಿಂ ದೇಶಗಳಿಗೆ ನಿಷೇಧ ಹೇರುವ ನಮ್ಮ ಕ್ರಮ ಸರಿಯಾದದ್ದು ಎಂದೂ ಪ್ರತಿಪಾದಿಸಿದ್ದಾರೆ.
ಲಂಡನ್ ದಾಳಿ
ಎಲ್ಲಿ?- ಲಂಡನ್ ಬ್ರಿಡ್ಜ್ ಮತ್ತು ಹತ್ತಿರದ ಮಾರ್ಕೆಟ್
ಹೇಗೆ? – ಚಾಕುವಿನಿಂದ ಇರಿದು, ವ್ಯಾನ್ ಹತ್ತಿಸಿ ಹಿಂಸಾಚಾರ
ಯಾವಾಗ? – ಶನಿವಾರ ರಾತ್ರಿ 10 ಗಂಟೆ(ಇಂಗ್ಲೆಂಡ್ ಕಾಲಮಾನ)
ಯಾರು? – ಹುಸಿ ಆತ್ಮಹತ್ಯಾ ಜಾಕೆಟ್ ಧರಿಸಿದ್ದ ಮೂವರು ಉಗ್ರರು
ಏನಾಯ್ತು? – ಏಳು ಮಂದಿ ಸಾವು, 48 ಜನಕ್ಕೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ