ಬಹ್ರೈನ್ನಲ್ಲಿ ಎನ್ನಾರೈಗಳ ಜತೆ ರಾಹುಲ್ ಮಾತು
Team Udayavani, Jan 9, 2018, 6:40 AM IST
ಮನಾಮಾ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಹ್ರೈನ್ ಪ್ರವಾಸ ಸೋಮವಾರ ಆರಂಭವಾಗಿದ್ದು, ಅಲ್ಲಿನ ಎನ್ನಾರೈಗಳ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ.
ಭಾರತೀಯ ಮೂಲದವರ ಜಾಗತಿಕ ಸಂಸ್ಥೆ(ಜಿಒಪಿಐಒ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, “ನಾನು ಎಲ್ಲರನ್ನೂ ಒಗ್ಗೂಡಿಸುವಂಥ ಆಶಯವಿರುವ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ವಹಿಸಿದ್ದೇನೆ. ಭಾರತದ ಕಲ್ಪನೆಯನ್ನು ಸಾಕಾರಗೊಳಿಸಬೇಕೆಂದರೆ ಎನ್ನಾರೈಗಳ ಪಾತ್ರವೂ ಬಹುಮುಖ್ಯ. ನಾವೆಲ್ಲರೂ ಒಂದಾಗಿ ಭಾರತದಲ್ಲಿ ಅಹಿಂಸೆಯನ್ನು ಮರಳಿ ತರಬೇಕು. ದೇಶವನ್ನು ಗಂಭೀರ ಸಮಸ್ಯೆಯಿಂದ ಹೊರತರಬೇಕು. ಗಾಂಧಿ, ಅಂಬೇಡ್ಕರ್, ನೆಹರೂ ಮುಂತಾದ ಅತ್ಯುನ್ನತ ನಾಯಕರೆಲ್ಲರೂ ಒಂದು ಕಾಲದಲ್ಲಿ ಎನ್ನಾರೈಗಳೇ ಆಗಿದ್ದರು’ ಎಂದರು. ಇದೇ ವೇಳೆ ಉದ್ಯೋಗ ಸೃಷ್ಟಿಯಲ್ಲಿ ಸರಕಾರದ ವೈಫಲ್ಯವು ಅಲ್ಲಿನ ಜನರಲ್ಲಿ ಆಕ್ರೋಶ ಹುಟ್ಟುಹಾಕುತ್ತಿದೆ ಎಂದೂ ಆರೋಪಿಸಿದರು. ಇದಕ್ಕೂ ಮುನ್ನ ಅವರು ಬಹ್ರೈನ್ ಪ್ರಧಾನಿ ಪ್ರಿನ್ಸ್ ಸಲ್ಮಾನ್ ಬಿನ್ ಹಮಸ್ ಅಲ್-ಖಲೀಫಾರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.