ಶರಿಯಾ ಆರಂಭ
Team Udayavani, Aug 18, 2021, 7:20 AM IST
ಕಾಬೂಲ್: ಇನ್ನು ಮುಂದೆ ಮಹಿಳೆಯರಿಗೆ ಶರಿಯಾ ಕಾನೂನು ಅನ್ವಯ, ಇಸ್ಲಾಂ ವಿರುದ್ಧ ಸುದ್ದಿ ಪ್ರಕಟಿಸಲು ಮಾಧ್ಯಮಗಳಿಗೆ ನಿರ್ಬಂಧ…-ಅಫ್ಘಾನಿಸ್ಥಾನದಲ್ಲಿ “ಶರಿಯಾ’ ಆರಂಭವಾಗಿರುವುದನ್ನು ಸ್ವತಃ ತಾಲಿಬಾನ್ ಘೋಷಿಸಿದ ರೀತಿ ಇದು.
ದೇಶವು ಉಗ್ರರ ವಶವಾದ ಬಳಿಕ ಮಂಗಳವಾರ ರಾತ್ರಿ ಮೊದಲ ಪತ್ರಿಕಾಗೋಷ್ಠಿ ನಡೆಸಿದ ತಾಲಿಬಾನ್ ತನ್ನ “ಕರಾಳ ಆಡಳಿತ’ದ ಗುಟ್ಟನ್ನು ಬಿಟ್ಟು ಕೊಟ್ಟಿದೆ.
ಇನ್ನು ಮುಂದೆ ಅಫ್ಘಾನಿಸ್ಥಾನದಲ್ಲಿ ಮಹಿಳೆಯರ ಹಕ್ಕು ಎನ್ನುವುದು ಶರಿಯಾ ಕಾನೂನಿನ ಅನ್ವಯವೇ ಇರುತ್ತದೆ. ಎಲ್ಲ ಸುದ್ದಿ ಮಾಧ್ಯಮ ಸಂಸ್ಥೆಗಳು ತಮ್ಮ ಕೆಲಸವನ್ನು ಮುಂದುವರಿಸಬಹುದು. ಆದರೆ ಮೂರು ಷರತ್ತುಗಳಿವೆ. ಅವುಗಳೆಂದರೆ, ಇಸ್ಲಾಂ ಮೌಲ್ಯ ಗಳಿಗೆ ವಿರುದ್ಧವಾದ ಯಾವುದೇ ಸುದ್ದಿ ಪ್ರಕಟಿಸ ಬಾರದು, ಸುದ್ದಿಗಳು ನಿಷ್ಪಕ್ಷವಾಗಿರಬೇಕು, ರಾಷ್ಟ್ರೀಯ ಹಿತಾ ಸಕ್ತಿ ಗಳಿಗೆ ವಿರುದ್ಧವಾದ ಸುದ್ದಿ ಪ್ರಕಟ ವಾಗು ವಂತಿಲ್ಲ ಎಂದು ದೇಶವನ್ನುದ್ದೇಶಿಸಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಜಬೀಹುಲ್ಲ ಮುಜಾಹಿದ್ ಕಠಿನ ಸೂಚನೆ ನೀಡಿದ್ದಾನೆ. ಹಿಂದಿನ ಕಟ್ಟರ್ ಸಂಪ್ರದಾಯದಿಂದ ಹೊರಬಂದಂತೆ ಕಾಣುತ್ತಿರುವ ತಾಲಿಬಾನ್ ಹಲವು ಉದಾರ ನಿಲುವುಗಳನ್ನು ಪ್ರಕಟಿಸಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಮತಿ ಇದೆ ಎಂದು ಹೇಳಿದ್ದು, ಬುರ್ಖಾ ಕಡ್ಡಾಯವಲ್ಲ. ಆದರೆ ಹಿಜಬ್ (ಶಿರೋವಸ್ತ್ರ) ಕಡ್ಡಾಯ ಎಂದಿದೆ.
ಕ್ಷಮಾದಾನ ಘೋಷಣೆ :
ನಾವು ಎಲ್ಲರನ್ನೂ ಕ್ಷಮಿಸಿದ್ದೇವೆ. ವಿದೇಶಿ ಸೇನೆಯೊಂದಿಗೆ ಕೆಲಸ ಮಾಡಿದವರು ಮತ್ತು ಮಾಜಿ ಸೈನಿಕರ ಸಹಿತ ಯಾರ ವಿರುದ್ಧವೂ ಪ್ರತೀಕಾರ ತೀರಿಸುವುದಿಲ್ಲ. ಎಲ್ಲ ವಿದೇಶಿ ರಾಯಭಾರ ಕಚೇರಿಗಳೂ ನಮಗೆ ಬಹಳ ಮುಖ್ಯ. ಅವುಗಳಿಗೆ ನಾವು ಭದ್ರತೆ ನೀಡುತ್ತೇವೆ ಎಂದೂ ತಾಲಿಬಾನ್ ಹೇಳಿದೆ.
ಇನ್ನೊಂದೆಡೆ, ಕಾಶ್ಮೀರವನ್ನು ನಾವು ದ್ವಿಪಕ್ಷೀಯ ಮತ್ತು ಆಂತರಿಕ ವಿಚಾರ ಎಂದು ಪರಿಗಣಿಸುತ್ತೇವೆ. ಹಾಗಾಗಿ ನಾವು ಕಾಶ್ಮೀರದ ಬಗ್ಗೆ ಗಮನಹರಿಸುವುದಿಲ್ಲ ಎಂದೂ ತಾಲಿಬಾನ್ ಸ್ಪಷ್ಟಪಡಿಸಿದೆ.
ಏನಿದು ಶರಿಯಾ ಕಾನೂನು? :
ಶರಿಯಾ ಎಂದರೆ ಇಸ್ಲಾಂ ಧರ್ಮದ ಕಾನೂನು ವ್ಯವಸ್ಥೆ. ಪ್ರಾರ್ಥನೆ, ಉಪವಾಸ, ದಾನ ಸಹಿತ ಮುಸ್ಲಿಮರ ಜೀವನಕ್ರಮ ಹೇಗಿರಬೇಕೆಂದು ತಿಳಿಸುವ ಸಂಹಿತೆ. ಕೌಟುಂಬಿಕ ಕಾನೂನು, ಹಣಕಾಸು, ಉದ್ದಿಮೆ ಸಹಿತ ಪ್ರತಿಯೊಂದು ವಿಚಾರದ ಬಗ್ಗೆ ಶರಿಯಾದಲ್ಲಿ ಪ್ರಸ್ತಾವವಿರುತ್ತದೆ. ಅಪರಾಧಿಗಳಿಗೆ ಕಠಿನ ಶಿಕ್ಷೆಯನ್ನೂ ಉಲ್ಲೇಖೀಸಲಾಗಿರುತ್ತದೆ. ಕಳ್ಳತನ ಮಾಡಿದವರು, ವ್ಯಭಿಚಾರಿಗಳು ಇತ್ಯಾದಿ ಅಪರಾಧಿಗಳನ್ನು ಅತ್ಯಂತ ಕಠಿನ ಶಿಕ್ಷೆಗಳಿಂದ ದಂಡಿಸಲಾಗುತ್ತದೆ.
ಭಯ ಬಿಡಿ, ನಮ್ಮೊಂದಿಗೆ ಸೇರಿ! :
ಇಡೀ ಅಫ್ಘಾನಿಸ್ಥಾನವು ಅರಾಜಕತೆ ಮತ್ತು ಅಸ್ಥಿರತೆಯ ಭೀತಿ ಎದುರಿಸುತ್ತಿರುವಂತೆಯೇ ತನ್ನ ನಾಗರಿಕರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನಕ್ಕೆ ತಾಲಿಬಾನ್ ಕೈಹಾಕಿದೆ. ಭಯ ಬಿಟ್ಟು ಎಲ್ಲ ಸರಕಾರಿ ಉದ್ಯೋಗಿಗಳೂ ಕೆಲಸಕ್ಕೆ ಹಾಜರಾಗುವಂತೆ ಕರೆ ನೀಡಿದೆ. ವಿಶೇಷವೆಂದರೆ, ಇಸ್ಲಾಮಿಕ್ ಎಮಿರೇಟ್ಸ್ (ಅಫ್ಘಾನ್ಗೆ ತಾಲಿಬಾನಿ ಹೆಸರು) ಮಹಿಳೆಯರನ್ನು ಬಲಿಪಶುಗಳಾಗಬೇಕೆಂದು ಬಯಸುವುದಿಲ್ಲ. ಮಹಿಳೆಯರು ಕೂಡ ಶರಿಯಾ ಕಾನೂನಿನ ಪ್ರಕಾರ ನಮ್ಮ ಸರಕಾರದ ಭಾಗವಾಗಬಹುದು ಎಂದೂ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಸದಸ್ಯ ಇನಾಮುಲ್ಲಾ ಸಮನ್ಗಾನಿ ಹೇಳಿದ್ದಾನೆ.
ಮಂಗಳವಾರ ಕಾಬೂಲ್ ಹೇಗಿತ್ತು? :
- ಎಪಿ ನ್ಯೂಸ್ ಏಜೆನ್ಸಿ ಪ್ರಕಾರ ತಾಲಿಬಾನಿಗಳ ಹಿರಿಯ ಮುಖಂಡ ಅಮೀರ್ ಖಾನ್ ಮುತಖೀ ಕಾಬೂಲ್ನ ರಾಜಕಾರಣಿಗಳೊಂದಿಗೆ ಸರಕಾರ ರಚಿಸುವ ಸಂಧಾನ ಸೂತ್ರಕ್ಕೆ ಮುಂದಾಗಿದ್ದಾನೆ.
- ಕಾಬೂಲ್ ವಿಮಾನ ನಿಲ್ದಾಣದ ರನ್ ವೇ ಈಗ ವಿಮಾನಗಳ ಆಗಮನ -ನಿರ್ಗಮನಕ್ಕೆ ಸಿದ್ಧವಾಗಿದೆ. ವಿಮಾನಗಳಲ್ಲಿ ತೆರಳಲು ನೂಕುನುಗ್ಗಲು ಮಂಗಳವಾರವೂ ಕೆಲವೆಡೆ ನಡೆದಿದೆ.
- ಪ್ರಸ್ತುತ ಕಾಬೂಲ್ನ ಮೇಯರ್ ಹಾಗೂ ಆರೋಗ್ಯ ಸಚಿವರು ಕೆಲಸಕ್ಕೆ ಹಾಜರಾಗಿದ್ದಾರೆ. ಹಾಗಾಗಿ ಜನರು ಬಹಳ ಎಚ್ಚರಿಕೆ ಮತ್ತು ಹಿಂಜರಿಕೆಯಿಂದ ರಸ್ತೆಗಿಳಿದರು. ಮಹಿಳೆಯರೂ ಮನೆಯಿಂದ ಹೊರಗೆ ಬಂದಿದ್ದಾರೆ. ಹಾಗೆಂದು ಭಯ ಪೂರ್ತಿಯಾಗಿ ಹೋಗಿಲ್ಲ.
- ಕೆಲವು ಅಂಗಡಿ ಮುಂಗಟ್ಟುಗಳು ತೆರೆದಿವೆ. ಸಂಚಾರಿ ಪೊಲೀಸರು ಕರ್ತವ್ಯಕ್ಕೆ ಇಳಿದಿದ್ದಾರೆ.
- ಶಾಲೆ-ಕಾಲೇಜು ಸದ್ಯ ಆರಂಭ ಸಾಧ್ಯತೆ ಇಲ್ಲ.
- ಯಾರೂ ಕಾರುಗಳನ್ನು ಕದಿಯಬಾರದು ಮತ್ತು ವಸತಿ ಪ್ರದೇಶಗಳನ್ನು ಹಾನಿಗೊಳಿಸಬಾರದು ಎಂದು ತಾಲಿಬಾನಿಗಳ ನಾಯಕರು ತಮ್ಮ ತಂಡದವರಿಗೆ ತಿಳಿಸಿದ್ದಾರಂತೆ. ಮಿಲಿಟರಿ ಕಾರ್ಯಾಚರಣೆಯ ಮುಖ್ಯಸ್ಥ ಮುಲ್ಲಾ ಯಾಕೂಬ್ ಲೋಕಲ್ ಟಿವಿ ಟೋಲೋ ನ್ಯೂಸ್ ಮೂಲಕ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ