ರಸ್ತೆ ಡಾಮರು ಆಗದ ಹಿನ್ನೆಲೆ: ಚುನಾವಣೆ ಬಹಿಷ್ಕಾರ ನಿರ್ಧಾರ
Team Udayavani, Mar 31, 2019, 2:47 PM IST
ಕಲ್ಲುಗುಡ್ಡೆ : ನೂಜಿಬಾಳ್ತಿಲ ಗ್ರಾಮದ ಬಹು ವರ್ಷಗಳ ಬೇಡಿಕೆಯ 2ನೇ ವಾರ್ಡ್ನ ಬದಿಬಾಗಿಲು, ಒರುಂಬಾಲು, ಲಾವತ್ತಡ್ಕ ರಸ್ತೆಗೆ ಡಾಮರು ಹಾಕಿಲ್ಲವೆಂದು ಆರೋಪಿಸಿರುವ ಆ
ಭಾಗದ ಜನತೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ನೂಜಿಬಾಳ್ತಿಲ ಗ್ರಾಮದ 2ನೇ ವಾರ್ಡ್ ಗೆ ಸಂಬಂಧಪಟ್ಟ ಬದಿಬಾಗಿಲು, ಒರುಂಬಾಲು, ಲಾವತ್ತಡ್ಕ ಸಂಪರ್ಕಿಸುವ ಸುಮಾರು 6 ಕಿ.ಮೀ. ರಸ್ತೆ ತೀರಾ ದುರಾವಸ್ಥೆಯಿಂದ ಕೂಡಿದೆ. ಈ ರಸ್ತೆಗೆ ಡಾಮರು ಕಾಮಗಾರಿ ನಡೆಸಬೇಕೆಂದು
ಹಲವು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಗ್ರಾಮಸಭೆಗಳಲ್ಲಿ ಮನವಿ ಮಾಡುತ್ತಾ ಬರಲಾಗುತ್ತಿದೆ. ಭರವಸೆ ಮಾತ್ರ ದೊರೆತಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಹಾಗಾಗಿ ಈ ಬಾರಿ ಮತದಾನ ಬಹಿಷ್ಕರಿಸುವ ದಿಟ್ಟ ನಿರ್ಧಾರಕ್ಕೆ ಬರಲಾಗಿದೆ ಎನ್ನುತ್ತಾರೆ ಈ ಭಾಗದ ಜನತೆ.
ಈ ರಸ್ತೆ ಮಳೆಗಾಲದಲ್ಲಿ ಕೆಸರುಮಯ, ಬೇಸಗೆ ಕಾಲದಲ್ಲಿ ದೂಳುಮಯವಾಗಿದ್ದು, ವಾಹನ ಸಂಚಾರಕ್ಕೆ ಅಸಾಧ್ಯವಾಗುತ್ತಿದೆ ಎಂದು ಆರೋಪಿಸಿರುವ ಈ ಭಾಗದ ಜನತೆ ಬಹು ಬೇಡಿಕೆಯ ರಸ್ತೆಯನ್ನು ಬಳಸಿಕೊಂಡು 75ರಿಂದ 100 ಮನೆಗಳು ಇಲ್ಲಿವೆ. ಮಾ. 31ರಂದು ಈ ಭಾಗದ ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಪೂರ್ವಭಾವಿ ಸಭೆ ನಡೆಸುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ರಸ್ತೆಗೆ ಡಾಮರು
ಹಾಕುವಂತೆ ಒತ್ತಾಯಿಸಿ ಇಲ್ಲಿಯ ಜನತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು, ಅದು ಈಡೇರಿಲ್ಲ ಎಂದು 2018ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಜನರೇ ರಸ್ತೆ ದುರಸ್ತಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ವಿವಿಧ ಪಕ್ಷಗಳ ಮುಖಂಡರು ಆಗಮಿಸಿ ದುರಸ್ತಿ ಮಾಡುವ ಭರವಸೆ ನೀಡಿದ್ದರು. ಈವರೆಗೂ ಈಡೇರಿಲ್ಲದ ಹಿನ್ನೆಲೆಯಲ್ಲಿ ಈ ಬಾರಿ ಮತ್ತೂಮ್ಮೆ ಚುನಾವಣೆ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಚುನಾವಣೆ ಬಹಿಷ್ಕಾರ ಸ್ಪಷ್ಟ
ನಮ್ಮ ಭಾಗದ ಬಹುಬೇಡಿಕೆಯ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಲ್ಲಿ ಆಗ್ರಹಿಸಲಾಗಿದ್ದು, ಕಳೆದ
ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಿರುತ್ತೇವೆ. ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಸ್ಪಷ್ಟವಾಗಿ
ಗ್ರಾಮಸ್ಥರೆಲ್ಲ ನಿರ್ಧರಿಸಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ರವಿವಾರ ನಡೆಯಲಿದೆ.
– ಶ್ರೀಧರ ಕಂಪ, ಗ್ರಾಮಸ್ಥರು
ಡಾಮರು ಕಾಮಗಾರಿ ನಡೆಯಬೇಕಾದ ಬದಿಬಾಗಿಲು-ಲಾವತಡ್ಕ ರಸ್ತೆ.