ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾದ ‘ಬೊಗಸೆಯಲ್ಲಿ ಮಳೆ’
Team Udayavani, Apr 3, 2019, 1:29 PM IST
ಕೆಲವೊಂದು ಘಟನೆಗಳನ್ನು ಓದಿದಾಗ ಅದು ನಮ್ಮ ಕಣ್ಣ ಮುಂದೆ ನಡೆದಂತೆಯೇ ಭಾಸವಾಗುತ್ತದೆ. ನಾವೂ ಆ ಘಟನೆಗಳಲ್ಲಿ ಒಂದು ಪಾತ್ರವಾಗಿರುವಂತೆ ಅನಿಸುತ್ತದೆ. ಅಂತಹದೇ ಕೆಲವು ಘಟನೆಗಳನ್ನು ಪೋಣಿಸಿ ಸಿದ್ಧಪಡಿಸಿದ ಪುಸ್ತಕವೇ ‘ಬೊಗಸೆಯಲ್ಲಿ ಮಳೆ’. ಸಿಕ್ಕಿಯೂ ಸಿಕ್ಕದಂತೆ ಕೈ ಜಾರುವ ಲೇಖಕ ಯಾವತ್ತೂ ನಮ್ಮನ್ನು ಕಾಡುತ್ತಾ ಹೋಗುತ್ತಾನೆ. ಬೊಗಸೆಯಲ್ಲಿ ಮಳೆಯ ಕರ್ತೃ ಜಯಂತ ಕಾಯ್ಕಿಣಿ ಹಾಗೆ ಕಾಡುವ ಲೇಖಕರಲ್ಲಿ ಒಬ್ಬರು.
ಘಟನೆ 1
ಪ್ರಪಂಚದ ನಕಾಶೆಯನ್ನು ಹಿಡಿದು ನೋಡಿದರೆ ಯಾವ ದೇಶದ ನಕಾಶೆಯೂ ಚಿತ್ರವತ್ತಾಗಿ ಕ್ರಮಬದ್ಧವಾಗಿ ಇಲ್ಲ. ಎಲ್ಲವೂ ಮಕ್ಕಳು ಆಟದಲ್ಲಿ ಮಾಡಿದ ಚಿತ್ರ ವಿಚಿತ್ರ ಚಪಾತಿಗಳಂತಿವೆ ಅಥವಾ ಹುಳು ತಿಂದ ತರಗೆಲೆಗಳಂತೆ.ಆದರೂ ಆಯಾ ದೇಶದ ಪ್ರಜೆಗೆ ತನ್ನ ದೇಶದ ನಕಾಶೆಯೇ ಅತ್ಯಂತ ಆಪ್ತವಾದ, ಕಣ್ಣಿಗೆ ಹಿಗ್ಗು ತರುವಂತಹ ಆಕೃತಿಯಾಗಿರುತ್ತದೆ.
ಭಾವನಾತ್ಮಕವಾಗಿ ನಮಗೆ ಇಷ್ಟವಾದದ್ದು ತಂತಾನೆ ಕಣ್ಣಿಗೂ ಸುಂದರವಾಗಿ ಮಾನವೀಯವಾಗುವುದು ನಮ್ಮ ದೈನಿಕದ ಪವಾಡಗಳಲ್ಲೊಂದು.
ಘಟನೆ 2
ರಥಬೀದಿಯ ಎಷ್ಟೋ ವೈಶಿಷ್ಟ್ಯಗಳಲ್ಲಿ ಅದರ ಬಸ್ಸ್ಟಾಂಡ್ ಕೂಡ ಒಂದು. ಏಕೆಂದರೆ ರಥಬೀದಿಯೇ ಇಲ್ಲಿ ಬಸ್ ನಿಲ್ದಾಣ. ನೀವು ಗೋಕರ್ಣಕ್ಕೆ ಬರುತ್ತಿದ್ದರೆ ನಿಮ್ಮ ಬಸ್ ಇಕ್ಕಟ್ಟಾದ ಪೇಟೆಯಲ್ಲಿ ಹೊರಳಿಕೊಂಡು ತುಸು ಸುವಿಶಾಲ ಎನ್ನುವಂಥ ಬೀದಿಯಲ್ಲಿ ನಿಂತು ಬಿಡುತ್ತದೆ. ನೀವೋ ಪ್ರಶಸ್ತವಾದ ಬಸ್ ನಿಲ್ದಾಣ ಇನ್ನೂ ಮುಂದಿದೆ ಎಂದು ಕೂತಲ್ಲಿಂದಲೇ ಪೇಟೆಯ ಅಂಗಡಿಗಳನ್ನು ನೋಡುತ್ತಿರುತ್ತೀರಿ. ಆ ಎಲ್ಲರೂ ಇಳಿಯತೊಡಗಿದ್ದು ನಿಮ್ಮ ಗಮನಕ್ಕೆ ಬಂದು ಬಸ್ ಸ್ಟಾಂಡ್ಗೆ ಹೋಗುವುದಿಲ್ಲವೇ ಎಂದು ಕೇಳುತ್ತೀರಿ. ಇದೇ ಬಸ್ ಸ್ಟಾಂಡ್ ಎಂಬ ಉತ್ತರ ಬರುತ್ತದೆ.
ಘಟನೆ 3
ಪರೀಕ್ಷಾ ಸಮಯ, ಹಾಲ್ ಟಿಕೇಟ್, ಸೀಟು ನಂಬರ್, ಯಾವುದೋ ಬೇರೆಯ ಊರಿನಲ್ಲಿ ಸೆಂಟರ್. ಅಪರಿಚಿತ ಸೂಪರ್ವೈಸರ್ಗಳು. ಉಳಿದೆಲ್ಲ ವಿದ್ಯಾರ್ಥಿಗಳು ಹೆಚ್ಚಿಗೆ ಓದಿದ್ದಾರೆ ಎಂಬ ಭಾವ. ಶಿಕ್ಷಣ ಪೂರೈಸಿ ಇಪ್ಪತ್ತು ವರ್ಷಗಳೇ ಆದರೂ ಈಗಲೂ ನಿದ್ದೆ ಎಚ್ಚರಗಳ ನಡುವೆ ಸುಳಿದು ತಣ್ಣಗೆ ಕಂಗೆಡಿಸುವ ಪರೀಕ್ಷಾ ಭೀತಿ. ಅದೊಂದು ಎಲ್ಲರನ್ನೂ ಕಾಡುವ ಸಾಮೂಹಿಕ ಸನ್ನಿ.
ಸುಶ್ಮಿತಾ ಶೆಟ್ಟಿ