ಪ್ರಕೃತಿ ಕಲಿಸುವ ಬದುಕಿನ ಪಾಠ
Team Udayavani, Jan 23, 2019, 7:57 AM IST
ಪ್ರವಾಸ ಕಥನವೆಂದರೆ ಹಾಗೇ ಅದೊಂದು ಅನುಭವ. ಹೊಸ ಹೊಸ ಸ್ಥಳಗಳನ್ನು ನೋಡಿದ ಆ ಖುಷಿಯನ್ನು ಇನ್ನೊಬ್ಬರ ಜತೆಯಲ್ಲಿ ಹಂಚಿಕೊಳ್ಳುವ ಹಂಬಲ. ಜತೆಗೆ ಸ್ಥಳಗಳ ವೈಶಿಷ್ಟ್ಯತೆ ವರ್ಣಿಸುವ ಕೂತೂಹಲ ಇವೆಲ್ಲವುಗಳ ಮಿಶ್ರಣ ಮಂಜುನಾಥ ಕಾಮತ್ ಅವರ ದಾರಿ ತಪ್ಪಿಸು ದೇವರೇ! ಕೃತಿ.
ಘಟನೆ 1
ಪಶ್ಚಿಮಘಟ್ಟದಲ್ಲಿನ ಗಂಗಾಮೂಲದ ಚಪ್ಪಟೆ ಗುಹೆಗಳು, ಕಗ್ಗತ್ತಲ ಪ್ರದೇಶವನ್ನು ನೋಡುವ ಪರಿ ಹಾಗೂ ಬೆಟ್ಟದ ಸೆರಗಿನಲ್ಲಿರುವ ಚಿಕ್ಕ ಕೊಲ್ಲಿಯಂತಹ ಪ್ರದೇಶಗಳ ವಿವರಣೆ ಲೇಖಕರ ಪ್ರಕೃತಿ ಪ್ರೀತಿಯನ್ನು ವರ್ಣಿಸುತ್ತದೆ. ಲೇಖಕರ ಹುಟ್ಟೂರಾದ ಮಾಳ ಪರಿಸರ ನಾಶದ ಕುರಿತು ವಿರೋಧಿಸಿ, ಓದುಗರನ್ನು ಜಾಗೃತಿಗೊಳಿಸುತ್ತಾರೆ.
ಘಟನೆ 2
ಮಂಗಳಮುಖಿಯರನ್ನು ನೋಡಿ ಮುಖ ತಿರುಗಿಸುವ ಕಾಲದಲ್ಲಿ ಅವರ ಭಾವನೆಗಳಿಗೆ ಸ್ಪಂದಿಸಿ, ಬೇರೆಯವರಿಗೆ ದಾರಿ ದೀಪವಾಗುವ ಸಾಲುಗಳು ಓದುಗರಲ್ಲಿ ಅನುಕಂಪ ಹುಟ್ಟಿಸುತ್ತದೆ. ಸೂಟು, ಬೂಟು ಹಾಕಿ ಬೇರೆಯವರನ್ನು ಅನುಸರಿಸುವ ಈ ಕಾಲದಲ್ಲಿ ನಮ್ಮೊಳಗೇ ನನ್ನನ್ನು ಕಾಣಬೇಕೆಂಬುವ ಪರಿ, ಸಾಧನೆಯ ಶಿಖರವೇರಲು ಹಂಬಲಿಸುತ್ತಿರುವ ಪ್ರತಿಯೊಬ್ಬರಿಗೂ ಸಾಧನೆಯ ಪಾಠವಾಗಿ ಪರಿಣಮಿಸುತ್ತದೆ. ಆಂಗುಬೆಯ ಸೂರ್ಯಾಸ್ತದ ಸವಿಯನ್ನು ಲೇಖಕರು ಅನುಭವಿಸುತ್ತಾರೆ.
ಘಟನೆ 3
ಕಾಳಿಂಗನನ್ನೇರಿ ಸವಾರಿ ಹೊರಡುವ ಲೇಖಕರು ಪ್ರತಿ ಪ್ರದೇಶಗಳ ಹೊಸತನ ಕಾಣುತ್ತಾರೆ. ಯಾರೋ ನಡೆದ ದಾರಿಯಲ್ಲಿ ನಡೆಯದೇ ಹೊಸ ದಾರಿ ಹಿಡಿದು ಖುಷಿ ಕಾಣಬೇಕು. ಅಲೆಮಾರಿತನ ಹೊಸ ಹೊಸ ಅನುಭವಗಳಿಗೆ ಮುನ್ನುಡಿಯಾಗುತ್ತದೆ.. ಅದೇ ಪ್ರಕೃತಿಯ ಹಲವು ವಿಷಯಗಳನ್ನು ಕಲಿಸಿಕೊಡುತ್ತದೆ ಎನ್ನುವುದು ಲೇಖಕರ ವಾದ.
ಪ್ರಕೃತಿಯಲ್ಲಿ ಇಂದು ಹಲವು ಸಸ್ಯ ಸಂಪನ್ಮೂಲಗಳು ವಿನಾಶದಂಚಿನಲ್ಲಿದ್ದು, ಇದರ ಬಗ್ಗೆ ನಾವು ಎಚ್ಚರವಹಿಸಬೇಕಿದೆ. ಹಳ್ಳಿಗಳ ಅಭಿವೃದ್ಧಿಯ ಬಗ್ಗೆ ಅಲೆಮಾರಿಯೂ ಕನಸು ಕಾಣುತ್ತಾನೆ.
•••ಪ್ರೀತಿ ಭಟ್ ಗುಣವಂತೆ