ನಾಳೆಯಿಂದ ಕರಾವಳಿಯಲ್ಲಿ ‘ಬೆಲ್ಚಪ್ಪ’ನ ಹವಾ!
Team Udayavani, Aug 8, 2019, 5:00 AM IST
ಜಯದುರ್ಗಾ ಪ್ರೊಡಕ್ಷನ್ನಲ್ಲಿ ಮೂಡಿ ಬಂದ ‘ಬೆಲ್ಚಪ್ಪ’ ತುಳು ಚಿತ್ರ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದೆ. ಆ.9ರಿಂದ ಉಡುಪಿ ಹಾಗೂ ಮಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ತೆರೆಕಾಣಲಿದೆ. ಕಳೆದ ಹಲವು ದಿನಗಳಿಂದ ಕೋಸ್ಟಲ್ವುಡ್ನಲ್ಲಿ ಹೊಸ ಸಿನೆಮಾ ಬರಲಿ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಇದೀಗ ಖುಷಿಯಾಗಿದೆ.
ಬೆಲ್ಚಪ್ಪ ಚಿತ್ರಕ್ಕೆ ಕಥೆ ಚಿತ್ರಕಥೆ-ಸಂಭಾಷಣೆ-ನಿರ್ದೇಶನವನ್ನು ರಜನೀಶ್ ದೇವಾಡಿಗ ಮಾಡಿದ್ದು, ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಅರವಿಂದ ಬೋಳಾರ್ ಚಿತ್ರದ ಕೇಂದ್ರ ಬಿಂದು. ಯಶಸ್ವಿ ದೇವಾಡಿಗ, ಸುಕನ್ಯ ಮುಖ್ಯ ಪಾತ್ರದಲ್ಲಿದ್ದಾರೆ. ಹಾಸ್ಯಕಲಾವಿದರಾದ ಉಮೇಶ್ ಮಿಜಾರು, ದೀಪಕ್ ರೈ ಪಾಣಾಜೆ, ಪ್ರವೀಣ್ ಮರ್ಕಮೆ, ಯಜ್ಞೇಶ್, ಆಶಾ ಮಾರ್ನಾಡು, ಸುಭಾಶ್ ಶೆಟ್ಟಿ, ಸುಬ್ಬು ಮೂಡುಬಿದರೆ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾಲ್ಕು ಹಾಡುಗಳಿದ್ದು ಸಂಗೀತ ನಿರ್ದೇಶನವನ್ನು ವಿಕ್ರಂ ಸೆಲ್ವ ಮಾಡಿದ್ದಾರೆ. ಸಾಹಿತ್ಯ ಹಾಗೂ ರಾಗ ಸಂಯೋಜನೆ ಭರತ್ ಕುಮಾರ್ ಇಂದ್ರಾಳಿ. ತುಳು ಚಿತ್ರರಂಗದಲ್ಲೇ ಮೊದಲ ಬಾರಿಗೆ ಎಂ.ಕೆ.ವಿ.ಆರ್ ಸ್ಟೆಡೆ ಸೈಕಲ್, ಸ್ಟೆಡಿ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಲಾಗಿದೆ. ಛಾಯಾಗ್ರಹಣವನ್ನು ಬಾಲಿವುಡ್ ಖ್ಯಾತಿಯ ಲಕ್ಷ್ಮೀಶ್ ಶೆಟ್ಟಿ ನಿರ್ವಹಿಸಿದ್ದಾರೆ. ಸಾಹಸದಲ್ಲಿ ಕೌರವ ವೆಂಕಟೇಶ್, ಸಂಕಲನದಲ್ಲಿ ಶ್ರೀಧರ್, ಸಹ ನಿರ್ದೇಶನದಲ್ಲಿ ಸುಬ್ಬು ಮೂಡುಬಿದರೆ, ಸಂತೋಷ್ ಶೆಟ್ಟಿ ಮಿಜಾರ್, ರಾಕೇಶ್ ದೇವಾಡಿಗ, ದಿನೇಶ್ ಹಿರಿಯಡ್ಕ, ಸಂಜು ಮಿಜಾರ್ ಸಹಕರಿಸಿದ್ದಾರೆ.