14 ದಿನದೊಳಗೆ ಶೂಟಿಂಗ್ ಮುಕ್ತಾಯಗೊಳಿಸಿದ ಬೆಲ್ಚಪ್ಪ !
Team Udayavani, Apr 4, 2019, 12:25 PM IST
ರಜನೀಶ್ ದೇವಾಡಿಗ ನಿರ್ದೇಶನದ “ಬೆಲ್ಚಪ್ಪ’ ಸಿನೆಮಾ ಎಲ್ಲ ಹಂತದ ಸಿದ್ಧತೆಗಳೊಂದಿಗೆ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಲಕ್ಷ್ಮೀಶ ಶೆಟ್ಟಿ ಛಾಯಾಗ್ರಹಣದಲ್ಲಿ ಅರವಿಂದ ಬೋಳಾರ್, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಸುಕನ್ಯಾ, ಆಶಾ ಮಾರ್ನಾಡ್, ಪ್ರವೀಣ್ ಮರ್ಕಮೆ, ಜ್ಞಾನೇಶ್ ಮುಂತಾದವರ ತಾರಾಗಣದಲ್ಲಿ ಸಿನೆಮಾ ಅದ್ದೂರಿಯಾಗಿ ರೆಡಿಯಾಗಿದೆ. ಕಾಮಿಡಿ ಗೆಟಪ್ನಲ್ಲಿಯೇ ಮೂಡಿಬಂದ ಈ ಸಿನೆಮಾ ಕೋಸ್ಟಲ್ವುಡ್ನಲ್ಲಿ ಹೊಸ ಪ್ರಯತ್ನ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಚಿತ್ರದ ನಿರ್ದೇಶಕ ರಜನೀಶ್ ದೇವಾಡಿಗ ಮುಖ್ಯ ತಾರಾಗಣದಲ್ಲಿರುವ ಈ ಸಿನೆಮಾದಲ್ಲಿ ಯಶಸ್ವಿ ದೇವಾಡಿಗ ಜತೆಯಾಗಿದ್ದಾರೆ.
ಅಂದಹಾಗೆ, ವಿವಿಧ ಸೀರಿಯಲ್ಗಳ ಮೂಲಕ ಮನೆಮಾತಾಗಿದ್ದ ರಜನೀಶ್ “ಪ್ರೀತಿಯಿಂದ’, ಪಾಂಡುರಂಗ ವಿಠಲ’ ಸಹಿತ ವಿವಿಧ ಧಾರಾವಾಹಿ ಮಾಡಿದ್ದರು.
ಆ ಬಳಿಕ ಕನ್ನಡದಲ್ಲಿ “ನಾನು ಹೇಮಂತ ಅವಳು ಸೇವಂತಿ’ ಸಿನೆಮಾ ಕೂಡ ಮಾಡಿದ್ದರು. ಬಳಿಕ ಇತ್ತೀಚೆಗೆ ತೆರೆಕಂಡ “ಕೋರಿ ರೊಟ್ಟಿ’ ಸಿನೆಮಾಕ್ಕೂ ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ರಜನೀಶ್ ಅವರಿಗೆ ಇದು ಮೂರನೇ ಸಿನೆಮಾ. ಅತೀ ಕಡಿಮೆ ದಿನದಲ್ಲಿ ಸಿನೆಮಾದ ಚಿತ್ರೀಕರಣ ನಡೆಸಿದ್ದು, ಈ ಸಿನೆಮಾದ ಹೆಚ್ಚುಗಾರಿಕೆ. 4 ಹಾಡು ಹಾಗೂ 1 ಸಾಹಸ ದೃಶ್ಯಗಳು ಈ ಚಿತ್ರದಲ್ಲಿದೆ.
ವಿಶೇಷವೆಂದರೆ ಈ ಎಲ್ಲ ದೃಶ್ಯಗಳು ಕೇವಲ 14 ದಿನದಲ್ಲಿಯೇ ಶೂಟಿಂಗ್ ಆಗಿದೆ. ಜತೆಗೆ ಹೊಸ ರೀತಿಯ ಸ್ಟಡಿ ಕ್ಯಾಮ್ ಬಳಸಿಕೊಂಡು ಸಿನೆಮಾ ರೆಡಿ ಮಾಡಲಾಗಿದೆ ಎಂಬುದು ಕೂಡ ಬೆಲ್ಚಪ್ಪನ ಹಿರಿಮೆ.