ಗಿರಿಗಿಟ್ ಟೀಮ್ ಮಾಡಲಿದೆ ಸರ್ಕಸ್!
Team Udayavani, Feb 6, 2020, 5:31 AM IST
ತುಳು ಸಿನೆಮಾ ರಂಗದಲ್ಲಿ ಚಾರಿತ್ರಿಕ ದಾಖಲೆ ಬರೆದ ಹಾಗೂ ಇತ್ತೀಚೆಗೆ 150ರ ಸಂಭ್ರಮವನ್ನು ದಾಖಲಿಸಿ ಸಾಗುತ್ತಿರುವ “ಗಿರಿಗಿಟ್’ ಚಿತ್ರ ತಂಡದ ಮುಂದಿನ ಸಿನೆಮಾ ಯಾವುದು? ಎಂಬ ಪ್ರಶ್ನೆ ಕೋಸ್ಟಲ್ವುಡ್ ಅಂಗಳದಲ್ಲಿ ಕೇಳಿಬರುತ್ತಿತ್ತು. ಈ ಬಗ್ಗೆ ಎಲ್ಲೂ ಕೂಡ ಗುಟ್ಟುಬಿಡದ ಸಿನೆಮಾ ತಂಡ ಇದೀಗ 150ರ ಸಿನೆಮಾ ಗೌಜಿಯ ಸಡಗರದಲ್ಲಿ ಹೊಸ ಸಿನೆಮಾದ ಬಗ್ಗೆ ಅನೌನ್ಸ್ ಮಾಡಿದೆ.
ಅಂದ ಹಾಗೆ; ಗಿರಿಗಿಟ್ ಸಿನೆಮಾ ಮಾಡಿದ ತಂಡದಿಂದಲೇ ಮುಂದೆ ರೆಡಿ ಆಗಲಿರುವ ಸಿನೆಮಾ “ಸರ್ಕಸ್’. ನಿರ್ದೇಶಕ ರೂಪೇಶ್ ಶೆಟ್ಟಿ ಅವರೇ ಸರ್ಕಸ್ ಸಿನೆಮಾದ ಟೈಟಲ್ ಬುಧವಾರ ಪ್ರಕಟಿಸಿದ್ದಾರೆ. ಗಿರಿಗಿಟ್ ತಂಡದಲ್ಲಿ ಇದ್ದ ಬಹುತೇಕ ಕಲಾವಿದರು ಹಾಗೂ ತಾಂತ್ರಿಕ ವರ್ಗ ಈ ಸಿನೆಮಾದಲ್ಲಿ ಇರಲಿದ್ದಾರೆ ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ. ಹೀಗಾಗಿ ಕೋಸ್ಟಲ್ವುಡ್ನಲ್ಲಿ ಇನ್ನೊಂದು ಬಹುನಿರೀಕ್ಷೆಯ ಸಿನೆಮಾ ಸೆಟ್ಟೇರುವ ಎಲ್ಲ ಸಿದ್ಧತೆ ನಡೆದಿದೆ ಎಂಬುದು ಪಕ್ಕಾ ಆಗಿದೆ.
ಒಂದೊಮ್ಮೆ “ಗಿರಿಗಿಟ್-2′ ಸಿನೆಮಾ ನಿರ್ಮಾಣ ಮಾಡುವ ಚಿತ್ರತಂಡ ಪ್ಲ್ಯಾನ್ ಮಾಡಿತ್ತಾದರೂ ಅದನ್ನು ಸದ್ಯಕ್ಕೆ ಕೈಬಿಟ್ಟು, ಇದೀಗ “ಸರ್ಕಸ್’ ಆಡಲು ರೆಡಿಯಾಗಿದೆ. ಈ ಮಧ್ಯೆ ಕನ್ನಡ ಸಿನೆಮಾ ಮಾಡುವ ಬಗ್ಗೆಯೂ ಗಿರಿಗಿಟ್ ಟೀಮ್ ಲೆಕ್ಕ ಹಾಕಿತ್ತಾದರೂ ಅದನ್ನೂ ಸದ್ಯಕ್ಕೆ ಕೈಬಿಟ್ಟು “ಸರ್ಕಸ್’ ಮೊದಲು ಮಾಡಲು ಚಿತ್ರತಂಡ ನಿರ್ಧರಿಸಿದೆ.
ಸದ್ಯದ ಮಾಹಿತಿ ಪ್ರಕಾರ, ಹೊಸ ಸಿನೆಮಾಕ್ಕೂ ರೂಪೇಶ್ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ರೂಪೇಶ್ ಕನ್ನಡ ಸಿನೆಮಾದಲ್ಲಿ ಬ್ಯುಸಿಯಾಗಿರುವ ಕಾರಣದಿಂದ ಅದೆಲ್ಲ ಮುಗಿದ ಅನಂತರ ಅಂದರೆ ಎಪ್ರಿಲ್ ಅಥವಾ ಮೇ ವೇಳೆಗೆ ಹೊಸ ಸಿನೆಮಾ ರೆಡಿಯಾಗಲಿದೆ.
ಗಿರಿಗಿಟ್ ಟೀಮ್ನಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರು ಅಭಿನಯಿಸಿದ್ದರು. ಕೋಸ್ಟಲ್ವುಡ್ನಲ್ಲಿ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಟ್ರೇಲರ್-ಪೋಸ್ಟರ್-ಹಾಡಿನ ಮೂಲಕ ಸದ್ದು ಮಾಡಿದ ಗಿರಿಗಿಟ್ ಕರಾವಳಿಯ ಜತೆಗೆ ದೇಶ-ವಿದೇಶದಲ್ಲಿಯೂ ಸದ್ದು ಮಾಡಿರುವುದು ನಿಜಕ್ಕೂ ರೋಚಕ.
ಹೊಸ ಸಿನೆಮಾ “ಸರ್ಕಸ್’ ಬಗ್ಗೆ “ಕುಡ್ಲ ಟಾಕೀಸ್’ ಜತೆಗೆ ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ. “ಗಿರಿಗಿಟ್ ಕೋಸ್ಟಲ್ವುಡ್ನಲ್ಲಿ ಹೊಸ ಅಧ್ಯಾಯ ಬರೆದಿದೆ. ದೇಶ-ವಿದೇಶದಲ್ಲಿಯೂ ಉತ್ತಮ ಸ್ಪಂದನೆ ಕಂಡಿದೆ. ದ.ಕ., ಉಡುಪಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಭಾಗದಲ್ಲಿ ಉತ್ತಮ ಪ್ರದರ್ಶನ ದಾಖಲಿಸಿದೆ. ಮುಂದೆ “ಗಿರಿಗಿಟ್-2′ ಸಿನೆಮಾ ಮಾಡುವ ಬಗ್ಗೆ ಬಹುಜನರಿಂದ ಆಗ್ರಹ ಬಂದಿತ್ತು. ಇದರ ಜತೆಗೆ ಹೊಸ ತುಳು ಸಿನೆಮಾ ಮಾಡಬೇಕು ಎಂಬ ಬಗ್ಗೆಯೂ ಒತ್ತಾಸೆ ನಮ್ಮ ತಂಡಕ್ಕಿತ್ತು. ಹೀಗಾಗಿ ಹೊಸ ಸಿನೆಮಾದ ಬಗ್ಗೆಯೇ ನಾವು ಮೊದಲು ನಿರ್ಧಾರ ತೆಗೆದುಕೊಂಡು ಸರ್ಕಸ್ ಎಂಬ ಟೈಟಲ್ ಫಿಕ್ಸ್ ಮಾಡಿದ್ದೇವೆ. ಇದೇ ವರ್ಷದಲ್ಲಿ ಸಿನೆಮಾ ಬಿಡುಗಡೆ ಮಾಡಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ. ಶೈಲೇಂದ್ರ ಬಾಬು ನಿರ್ಮಾಣದ ಅದ್ದೂರಿ ಬಜೆಟ್ನ ಕನ್ನಡ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಇದೀಗ ನನಗೆ ದೊರಕಿದೆ. ಭಾವನಾ ಮೆನನ್ ಜತೆಗಿರಲಿದ್ದಾರೆ. ಈಗಾಗಲೇ ಪ್ರಥಮ ಹಂತದ ಶೂಟಿಂಗ್ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ಈ ಸಿನೆಮಾ ಶೂಟಿಂಗ್ ಮುಗಿದ ಬಳಿಕ “ಸರ್ಕಸ್’ ಶೂಟಿಂಗ್ ಮಾಡಲಾಗುತ್ತದೆ. ಗಿರಿಗಿಟ್ನ ತಂಡವೇ ಸರ್ಕಸ್ನಲ್ಲಿ ಇರಲಿದೆ’ ಎಂದರು.