‘ಸವರ್ಣದೀರ್ಘಸಂಧಿ’ ಹೇಳುತ್ತಿರುವ ‘ಚಾಲಿಪೋಲಿಲು’ ನಿರ್ದೇಶಕ!
Team Udayavani, Aug 8, 2019, 5:08 AM IST
ಕೋಸ್ಟಲ್ವುಡ್ನಲ್ಲಿ ಚಾರಿತ್ರಿಕ ದಾಖಲೆ ಬರೆದ ಸಿನೆಮಾ ಎಂಬ ಗೌರವಕ್ಕೆ ಪಾತ್ರವಾದದ್ದು ‘ಚಾಲಿಪೋಲಿಲು’. ಬರೋಬ್ಬರಿ 511 ದಿನಗಳ ನಿರಂತರ ಪ್ರದರ್ಶನ ಕಾಣುವ ಮೂಲಕ ಈ ಸಿನೆಮಾವನ್ನು ಸ್ಯಾಂಡಲ್ವುಡ್ ಕೂಡ ಬೆರಗುಕಣ್ಣಿನಿಂದ ನೋಡಿತ್ತು. ಅದಕ್ಕೆ ಕಾರಣ ಚಿತ್ರದ ನಿರ್ದೇಶಕ ವೀರೇಂದ್ರ ಶೆಟ್ಟಿ.
ಪ್ರಕಾಶ್ ಪಾಂಡೇಶ್ವರ ನಿರ್ಮಾಣದಲ್ಲಿ ಮೂಡಿಬಂದ ‘ಚಾಲಿಪೋಲಿಲು’ ಸಿನೆಮಾ ಮೂಲಕ ತುಳು ಸಿನೆಮಾ ಲೋಕಕ್ಕೆ ಹೊಸ ಭವಿಷ್ಯ ಒದಗಿಸಿದ್ದು ವೀರೇಂದ್ರ ಶೆಟ್ಟಿ. ಅಂತಹ ಭರವಸೆಯ ನಿರ್ದೇಶಕ ಚಾಲಿಪೋಲಿಲು ಸಿನೆಮಾದ ಬಳಿಕ ಎಲ್ಲಿಗೆ ಹೋಗಿದ್ದರು? ಯಾವ ಸಿನೆಮಾದಲ್ಲಿದ್ದಾರೆ? ಯಾವ ಸಿನೆಮಾ ಮಾಡುತ್ತಾರೆ? ಸಿನೆಮಾವನ್ನೇ ಮರೆತುಬಿಟ್ಟರಾ? ಉದ್ಯಮ ಆರಂಭಿಸಿದ್ದಾರಾ? ಹೀಗೆ ನಾನಾ ತರದ ಪ್ರಶ್ನೆಗಳಿಗೆ ಕಾರಣರಾದರು. ಉತ್ತರ ಮಾತ್ರ ದೊರಕುತ್ತಿರಲಿಲ್ಲ.
ಆದರೆ ಕೆಲವು ವರ್ಷದ ಅನಂತರ ಈಗ ವೀರೇಂದ್ರ ಶೆಟ್ಟಿ ಮತ್ತೆ ಕಾಣಿಸಿಕೊಂಡಿದ್ದಾರೆ. ‘ಚಾಲಿಪೋಲಿಲು’ ಸಮಯದಲ್ಲಿದ್ದ ವೀರೇಂದ್ರ ಶೆಟ್ಟಿ ಈಗ ಬಹುತೇಕ ಚೇಂಜ್ ಆಗಿದ್ದಾರೆ. ಹೇರ್ ಸ್ಟೈಲ್ ಅಂತೂ ಬದಲಾಗಿದೆ. ಅಕ್ಕರೆಯಿಂದ ಮಾತನಾಡಿಸುವ ಪ್ರೀತಿ ಬದಲಾಗಲಿಲ್ಲ. ಸಿನೆಮಾದ ಬಗ್ಗೆಯೇ ಮಾತನಾಡುವ ಅವರ ಶೈಲಿಯಲ್ಲಿಯೂ ಬದಲಾವಣೆ ಇಲ್ಲ. ತುಳು ಸಿನೆಮಾದಲ್ಲಿ ಎದುರಾಗಿರುವ ಹಲವು ಅನಿವಾರ್ಯ ಪರಿಸ್ಥಿತಿಗಳ ಕುರಿತಾದ ವೇದನೆ ಅವರ ಮಾತಿನಲ್ಲೇ ಪ್ರತಿಧ್ವನಿಸುತ್ತಿತ್ತು. ವಿಶೇಷವೆಂದರೆ ತುಳು ಸಿನೆಮಾದ ಮೂಲಕ ಸಾಧನೆಯ ಶಿಖರವೇರಿದ ವೀರು ಈಗ ಕನ್ನಡ ಸಿನೆಮಾ ದಲ್ಲಿದ್ದಾರೆ. ಅದರಲ್ಲಿಯೂ ನಿರ್ದೇಶಕನಾಗುವ ಜತೆಗೆ ನಾಯಕ ನಟನಾಗಿದ್ದಾರೆ.
ಎಳೆ ವಯಸ್ಸಿನಲ್ಲೇ ಸಿನೆಮಾ ವೀಕ್ಷಿಸುವ ಆಸಕ್ತಿ ನನ್ನನ್ನು ಸಿನೆಮಾ ನಿರ್ದೇಶಕನ ಸ್ಥಾನದತ್ತ ಕರೆತಂದಿತು. ಕೆಮರಾ ಹಿಂದೆ ನಿರ್ದೇಶಕನಾಗಿ ಕೆಲಸ ಮಾಡಿದ ನನಗೆ ಕೆಮರಾ ಮುಂದೆ ಈಗ ನಾಯಕ ನಟನಾಗಿ ಕೆಲಸ ಮಾಡುವ ಅವಕಾಶ ದೊರೆತಿದೆ ಎಂಬುದು ಖುಷಿಯ ಸಂಗತಿ ಎನ್ನುತ್ತಾರೆ ಅವರು.
ಮಾತು ಮುಂದುವರಿಸಿದ ಅವರು ವಿದ್ಯಾರ್ಥಿ ಜೀವನದಲ್ಲಿಯೇ ಬಣ್ಣದ ಲೋಕದ ಬಗ್ಗೆ ಕನಸು ಕಟ್ಟಿದ್ದೆ. ಬಳಿಕ ಪತ್ರಕರ್ತನಾಗಿ ಸ್ವಲ್ಪ ಸಮಯ ದುಡಿದಿದ್ದೆ. ಅನಂತರ ‘ಚಾಲಿಪೋಲಿಲು’ ತುಳು ಸಿನೆಮಾವನ್ನು 2014ರಲ್ಲಿ ನಿರ್ದೇಶನ ಮಾಡುವ ಅವಕಾಶ ದೊರೆಯಿತು. ಇದು ಕೋಸ್ಟಲ್ವುಡ್ನಲ್ಲಿ ಸೂಪರ್ ಹಿಟ್ ಚಿತ್ರವಾಗಿ ಮೂಡಿಬಂದು-511ದಿನಗಳ ಕಾಲ ಪ್ರದರ್ಶನ ಕಂಡಿತು. ವಿಶೇಷವೆಂದರೆ ತುಳು ಸಿನೆಮಾ ರಂಗದಲ್ಲಿ ಈ ದಾಖಲೆಯನ್ನು ಇದುವರೆಗೆ ಯಾರೂ ಮುರಿಯಲು ಸಾಧ್ಯವಾಗಿಲ್ಲ ಎಂದು ಹೆಮ್ಮೆಯಿಂದ ಹೇಳಿದರು ವೀರೇಂದ್ರ ಶೆಟ್ಟಿ.
ದಾಖಲೆಯ ಮೇಲೆ ದಾಖಲೆ ಬರೆದ ಸಿನೆಮಾ ನಿರ್ದೇಶಕರು ಇಲ್ಲಿಯವರೆಗೆ ಎಲ್ಲಿದ್ದರು? ಎಂಬ ಪ್ರಶ್ನೆ ಕೇಳಿದಾಗ ಅವರು ಹೇಳಿದ್ದು ಹೀಗೆ.. ಚಾಲಿಪೋಲಿಲು ಸಿನೆಮಾದ ಅನಂತರ ನಾನು ಸ್ಯಾಂಡಲ್ವುಡ್ನತ್ತ ಮುಖ ಮಾಡಿ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದೇನೆ. ಸಿನೆಮಾವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ, ಸಾಕಷ್ಟು ವರ್ಕ್ಔಟ್ ಮಾಡಿದ್ದೇನೆ. ಅನೇಕ ಕಥೆಯನ್ನು ಸಿದ್ಧಪಡಿಸಿದ್ದೇನೆ. ಇದೀಗ ‘ಸವರ್ಣದೀರ್ಘ ಸಂಧಿ’ ವಿಭಿನ್ನ ಟೈಟಲ್ ಹೊಂದಿರುವ ಸಿನೆಮಾ ರೆಡಿ ಮಾಡಲಾಗಿದೆ. ಸದ್ಯ ಇದು ಪೋಸ್ಟ್ ಪ್ರೊಡಕ್ಷನ್ನಲ್ಲಿದೆ. ವಿಶೇಷ ಅಂದರೆ ಈ ಸಿನೆಮಾವನ್ನು ನಿರ್ದೇಶಿಸುವ ಜತೆಗೆ ನಾಯಕ ನಟನಾಗಿ ನಾನೇ ನಟಿಸುತ್ತಿದ್ದೇನೆ. ಈ ಚಿತ್ರದ ಮೂಲಕ ನಟಿ ಕೃಷ್ಣಾ ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿದ್ದೇನೆ. ಈಕೆ ಖ್ಯಾತ ಕಲಾವಿದ ರವಿ ಭಟ್ (ವಿನಯಾ ಪ್ರಸಾದ ಅವರ ಸಹೋದರ)ಆವರ ಮಗಳು. ‘ಮುಂಗಾರು ಮಳೆ’ ಖ್ಯಾತಿಯ ಮನೋಮೂರ್ತಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಲಯಾಳಂ ಚಿತ್ರ ‘ಉಸ್ತಾದ್ ಹೊಟೇಲ್’ ಖ್ಯಾತಿಯ ಲೋಕನಾಥನ್ ಶ್ರೀನಿವಾಸ್ ಛಾಯಾಗ್ರಹಣವಿದೆ. ಸುರೇಂದ್ರ ಬಂಟ್ವಾಳ್, ಪದ್ಮಜ ರಾವ್, ರವಿ ಭಟ್, ಅಜಿತ್ ಹನುಮಕ್ಕನವರ್, ನಿರಂಜನ್ ದೇಶಪಾಂಡೆ ಮುಂತಾದವರಿದ್ದಾರೆ. ಸುಮಾರು ಮೂರು ನಾಲ್ಕು ವರ್ಷಗಳಿಂದ ಈ ಚಿತ್ರದ ಹಿಂದೆ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ಅವರು.
– ದಿನೇಶ್ ಇರಾ