ಕುಂಟಬೈಲ್ ಕುಂಟಮ್ಮನ ಭೂಮಿಯ ಹೋರಾಟ
Team Udayavani, Jan 24, 2019, 7:17 AM IST
ಕರಾವಳಿ ಅಂದಾಕ್ಷಣ ಇಲ್ಲಿನ ಬೃಹತ್ ಕೈಗಾರಿಕೆಗಳು ನೆನಪಿಗೆ ಬರುತ್ತವೆ. ಕೃಷಿ ಭೂಮಿ ಕಳೆದುಕೊಂಡು ಅದೆಷ್ಟೋ ಕುಟುಂಬ ನೋವು ಅನುಭವಿಸುತ್ತಿವೆ. ಆದರೆ, ಕೃಷಿಕರ ಮನೆ, ಭೂಮಿ ಕಳೆದುಕೊಂಡವರ ನೋವಿಗೆ ಯಾರಿಂದಲೂ ಸ್ಪಂದನೆ ದೊರೆಯಲಿಲ್ಲ. ಮತ್ತೆ ಮತ್ತೆ ಕೃಷಿ ಭೂಮಿ ಕೈಗಾರಿಕೆಗಳ ಪಾಲಾಗುತ್ತಲೇ ಇವೆ. ಇದರ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಪ್ರತಿಭಟನೆ, ಹೋರಾಟ ಕೂಡ ನಡೆದಿದೆ. ಇವುಗಳ ಮಧ್ಯೆ ಕೆಲವು ಹೋರಾಟಗಾರರು ತಮ್ಮ ನಿರಂತರ ಹೋರಾಟದ ಮುಖೇನ ಕೃಷಿ ಭೂಮಿ ಉಳಿಸಿಕೊಂಡದ್ದೂ ಇದೆ.
ಇದೆಲ್ಲ ಕಥೆ ಇಲ್ಲಿ ಯಾಕೆ ಪ್ರಸ್ತುತ? ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ, ಕೆಲವೇ ತಿಂಗಳ ಅನಂತರ ತುಳುವಿನಲ್ಲಿ ಬರುವ ಹೊಸ ಸಿನೆಮಾವೇ ಇದಕ್ಕೆ ಉತ್ತರ ನೀಡಲಿದೆ. ಕೈಗಾರಿಕೆಗಳ ನಿರ್ಮಾಣದ ನೆಪದಲ್ಲಿ ಮಹಿಳೆಯೊಬ್ಬರಿಗೆ ಸೇರಿದ ಎಕರೆಗಟ್ಟಲೆ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ಸಂದರ್ಭದಲ್ಲಿ ಹೋರಾಟ ಮಾಡಿದ ಮಹಿಳೆಯೊಬ್ಬಳ ಕಥೆ ತುಳು ಸಿನೆಮಾ ರೂಪ ಪಡೆದುಕೊಳ್ಳಲಿದೆ.
ಅಂದಹಾಗೆ ಈ ಸಿನೆಮಾದ ಹೆಸರು ‘ಕುಂಟಬೈಲ್ ಕುಂಟಮ್ಮ’. ಈಗಾಗಲೇ ಕೆಲವು ಭಕ್ತಿ ಪ್ರಧಾನ ಚಿತ್ರಗಳನ್ನು ಮಾಡಿರುವ ಗಂಗಾಧರ ಕಿರೋಡಿಯನ್ ಅವರ ನಿರ್ದೇಶನವಿರುವ ಈ ಸಿನೆಮಾವು ಕೆಲವು ತಿಂಗಳ ಬಳಿಕ ಶೂಟಿಂಗ್ ಆರಂಭಿಸಲಿದೆ. ‘ಧರ್ಮ ಇತ್ತಿ ಮಣ್¡’, ‘ಕಾರ್ಣಿಕದ ಕೋರ್ದಬ್ಬು’, ‘ನೇಮದ ಬೂಳ್ಯ’, ‘ಪುಂಡಿಪಣವು’, ‘ಕಾರ್ಣಿಕದ ಕಲ್ಲುರ್ಟಿ’ಯಂತಹ ಚಾರಿತ್ರಿಕ ಹಿನ್ನೆಲೆಯ ಧಾರಾವಾಹಿ ಮತ್ತು ಸಿನೆಮಾಗಳನ್ನು ನೀಡಿರುವ ನಿರ್ದೇಶಕ ಬಿ.ಕೆ. ಗಂಗಾಧರ್ ಕಿರೋಡಿಯನ್ ‘ಕುಂಟಬೈಲ್ ಕುಂಟಮ್ಮ’ ಎಂಬ ಸಾಮಾಜಿಕ ತುಳು- ಕನ್ನಡ ಹಾಸ್ಯಮಯ ಚಿತ್ರ ನಿರ್ಮಾಣದ ಹೊಸ ಪ್ರಯೋಗಕ್ಕೆ ರೆಡಿಯಾಗಿದ್ದಾರೆ
••ದಿನೇಶ್ ಇರಾ