ಕುತೂಹಲದ ಪ್ರವೇಶ
Team Udayavani, Jun 6, 2019, 6:00 AM IST
ಕರಾವಳಿಯ ಒಂದು ನೈಜ ಘಟನೆಯನ್ನೇ ಆಧರಿಸಿಕೊಂಡು ಕಥೆಯಾಗಿ ಮಾಡಿ ಸಿನೆಮಾ ರೂಪದಲ್ಲಿ ಹೊರ ತರುವ ಚೇತನ್ ಮುಂಡಾಡಿ ಅವರ “ಪ್ರವೇಶ’ ಸಿನೆಮಾವು ತುಳು ಸಹಿತ ಎರಡು ಭಾಷೆಯಲ್ಲಿ ಹೊರ ಬರಲಿದೆ. ಚೇತನ್ ಮುಂಡಾಡಿ ಅವರು ಈ ಹಿಂದೆ ತನ್ನ “ಮದಿಪು’ ಚಿತ್ರಕ್ಕಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರತಿಭಾವಂತ. ಆದ್ದರಿಂದಲೇ ಇವ ರ ಈ ಪ್ರವೇಶ ಸಿನೆಮಾದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಕುಂದಾಪುರ ಕನ್ನಡ, ಮಂಗಳೂರು ಕನ್ನಡ, ಬೆಂಗಳೂರು ಕನ್ನಡ ಮುಂತಾದ ಪ್ರಾದೇಶಿಕ ಮಟ್ಟದ ಕನ್ನಡವನ್ನು ಈ ಸಿನೆಮಾದಲ್ಲಿ ಬಳಸಿಕೊಳ್ಳಲಾಗಿದ್ದು, ಆ ಮೂಲಕ ಒಂದು ನೈಜತೆಯನ್ನು ತರುವ ಪ್ರಯತ್ನವನ್ನೂ ನಿರ್ದೇಶಕರು ಮಾಡಿದ್ದಾರೆ.
ಚೇತನ್ ಅವರೇ ಬರೆದಿರುವ ಮೂಲಕಥೆಯನ್ನು ಖ್ಯಾತ ಸಿನೆಮಾ ಪತ್ರಕರ್ತ ಜೋಗಿ ಅವರು ವಿಸ್ತರಿಸಿದ್ದಾರೆ. ವಿ. ಮನೋಹರ್ ಅವರ ಸಂಗೀತವಿರುವ ಈ ಸಿನೆಮಾವು ಒಂದು ಧಾರ್ಮಿಕ ಭಾವನೆಯ ವಿಷಯವು ಕೋಮು ಸಾಮರಸ್ಯದಿಂದಿದ್ದ ಗ್ರಾಮದ ಸ್ವರೂಪವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಬಿಚ್ಚಿಡುತ್ತದೆ. ಕೆಜಿಎಫ್ ಸಿನೆಮಾದ ಎಡಿಟಿಂಗ್ ಮಾಡಿದ್ದ ಶ್ರೀಕಾಂತ್ ಅವರೇ ಪ್ರವೇಶವನ್ನೂ ಸಂಕಲನ ಮಾಡುತ್ತಿದ್ದಾರೆ. ಚೇತನ್ ಅವರ ಈ ಹಿಂದಿನ ಮದಿಪು ಸಿನೆಮಾವನ್ನು ಕೂಡ ಶ್ರೀಕಾಂತ್ ಎಡಿಟಿಂಗ್ ಮಾಡಿದ್ದರು. ಚಿತ್ರದ ನಾಯಕನಾಗಿ ಪೃಥ್ವಿ ಅಂಬಾರ್ ಮತ್ತು ನಾಯಕಿಯಾಗಿ ಬಿಂದು ರಕ್ಷಿದಿ ಅವರು ನಟಿಸಿದ್ದಾರೆ. ಖ್ಯಾತ ರಂಗಭೂಮಿ ನಟ ಚಂದ್ರಹಾಸ್ ಉಳ್ಳಾಲ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.