ತುಳುನಾಡಿನ ಬೆಳ್ಳಿ ಹೆಜ್ಜೆಯಲ್ಲಿ ಸಂಜೀವ ದಂಡಕೇರಿ!
Team Udayavani, Aug 9, 2018, 3:06 PM IST
ಸ್ಯಾಂಡಲ್ವುಡ್ ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ನೇತೃತ್ವದಲ್ಲಿ `ಬೆಳ್ಳಿ ಹೆಜ್ಜೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅಂದರೆ, ಸ್ಯಾಂಡಲ್ವುಡ್ ನಲ್ಲಿ ದುಡಿದ ಹಿರಿಯರನ್ನು ಗೌರವಿಸಿ ಅವರ ಬಾಲ್ಯದ ದಿನಗಳಿಂದ ಸಾಧನೆಯ ಹೆಜ್ಜೆಯನ್ನು ಜನರ ಮುಂದೆ ಪ್ರಸ್ತುತಪಡಿಸುವುದು ಇದರ ಉದ್ದೇಶ. ಇಂತಹುದೇ ಪರಿಕಲ್ಪನೆಯನ್ನು ಈಗ ಕೋಸ್ಟಲ್ವುಡ್ನಲ್ಲಿ ಪರಿಚಯಿಸಲಾಗುತ್ತಿದೆ.
ಚಲನಚಿತ್ರ ಅಕಾಡೆಮಿಯ ನೆರವಿನೊಂದಿಗೆ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಆಶ್ರಯದಲ್ಲಿ `ತುಳುನಾಡಿನ ಬೆಳ್ಳಿ ಹೆಜ್ಜೆಗಳು’ ಎಂಬ ವಿನೂತನ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ತೆರೆದುಕೊಳ್ಳುತ್ತಿವೆ. ಇದರಂತೆ ಮುಂದೆ ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮಗಳು ನಡೆಯಲಿದೆ. ಮಂಗಳೂರು ಪುರಭವನದಲ್ಲಿಯೇ ಈ ಕಾರ್ಯಕ್ರಮ ಆಯೋಜನೆಗೆ ಉದ್ದೇಶಿಸಲಾಗಿದೆ. ತುಳುಚಿತ್ರರಂಗದಲ್ಲಿ ಈ ಹಿಂದೆ ದುಡಿದು ಸಾಕಷ್ಟು ಹೆಸರು ಪಡೆದ ಸಾಧಕ ಹಿರಿಯರನ್ನು ಗೌರವಿಸಿ, ಸಮ್ಮಾನಿಸಿ ಅವರ ಜೀವನಗಾಥೆಯನ್ನು ಅವರ ಮಾತಿನಿಂದಲೇ ಜನರ ಮುಂದಿಡುವ ವಿನೂತನ ಕಾರ್ಯಕ್ರಮ ಇದಾಗಿದೆ.
ಝೀ ಕನ್ನಡದಲ್ಲಿ ಬರುತ್ತಿದ್ದ ‘ವೀಕೆಂಡ್ ವಿದ್ ರಮೇಶ್’ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಡೆಯುವ ಮೊದಲ ಕಾರ್ಯಕ್ರಮ ಮುಂದಿನ ತಿಂಗಳಿನಿಂದ ಮಂಗಳೂರಿನಲ್ಲಿ ಆರಂಭವಾಗಲಿದೆ. ವಿಶೇಷವೆಂದರೆ ‘ಬಯ್ಯಮಲ್ಲಿಗೆ’ ಖ್ಯಾತಿಯ ಖ್ಯಾತ ರಂಗಕರ್ಮಿ ಹಾಗೂ ಸಿನೆಮಾ ಸಾಧಕರಾದ ಡಾ| ಸಂಜೀವ ದಂಡಕೇರಿ ಅವರು ಮೊದಲ ಕಾರ್ಯಕ್ರಮದ ಸಮ್ಮಾನ ಸ್ವೀಕರಿಸಲಿದ್ದಾರೆ.