ಚಾರಣ ಪ್ರಿಯರ ಸ್ವರ್ಗ ಗಡಾಯಿಕಲ್ಲು
Team Udayavani, Apr 4, 2019, 12:45 PM IST
ನಮ್ಮ ಸುತ್ತಮುತ್ತ ಹಲವಾರು ಪ್ರವಾಸಿ ಕೇಂದ್ರಗಳು ಪ್ರಾಕೃತಿಕವಾಗಿ ಸಂಪದ್ಭರಿತವಾಗಿದ್ದರೂ, ಹೆಚ್ಚಿನವರಿಗೆ ಇದು ಚಿರಪರಿಚಿತವಾಗಿರುವುದಿಲ್ಲ. ಅಂತವುಗಳಲ್ಲಿ ಗಡಾಯಿಕಲ್ಲು ಸಹಾ ಒಂದು. ತನ್ನ ದೈತ್ಯ ಆಕಾರದಿಂದಲೇ ಜನಸಾಮಾನ್ಯರನ್ನು ತನ್ನತ್ತ ಸೆಳೆಯುವ ಈ ಪ್ರದೇಶವು, ಬೆಳ್ತಂಗಡಿ ತಾಲೂಕಿನ ಪ್ರಮುಖ ಪ್ರವಾಸಿ ತಾಣವಾಗಿದೆ. ಸಾಹಸಿ ಮನೋಭಾವದ ನಮ್ಮ ನಾಲ್ವರ ಗೆಳೆಯರ ಬಳಗವು ಇಲ್ಲಿಗೆ ಭೇಟಿ ನೀಡಲು ನಿರ್ಧರಿಸಿದೆವು.
ಚಾರಣ ಪ್ರಿಯರ ಸ್ವರ್ಗ ಮಂಜೊಟ್ಟಿ ಎಂಬ ಪ್ರದೇಶದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಗಡಾಯಿಕಲ್ಲಿನ ಬುಡಕ್ಕೆ ಬಂದು ತಲುಪಿದಾಗ ಸೂರ್ಯ ನೆತ್ತಿ ಮೇಲೆ ಇದ್ದ. ಅಲ್ಲಿದ್ದ ವಿಶಿಷ್ಟ ಶೈಲಿಯ ಸ್ವಾಗತ ಗೋಪುರ ನಮ್ಮನ್ನು ಕೈ ಮುಗಿದು ಸ್ವಾಗತಿಸುತ್ತಿರುವಂತೆ ಭಾಸವಾಗುತ್ತಿತ್ತು. ಈ ಶಿಲಾ ಪರ್ವತದ ವಿಶೇಷತೆಯೇನೆಂದರೆ, ಇದು ಪ್ರತೀ ದಿಕ್ಕಿನಲ್ಲೂ ವಿಭಿನ್ನ ಆಕಾರದಲ್ಲಿ ಗೋಚರಿಸುತ್ತದೆ!!
ಗಡಾಯಿಕಲ್ಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವುದರಿಂದ ಇಲ್ಲಿ ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಚಾರಣಕ್ಕೆ ತೆರಳುವಂತಿಲ್ಲ. ನಿಗದಿತ ಶುಲ್ಕವನ್ನು ತೆತ್ತು ನಾವು ಪ್ರಕೃತಿಯ ಮಡಿಲಲ್ಲಿ ಒಂದಾಗಲು ಮುಂದಡಿಯಿಟ್ಟೆವು.
ಇದಕ್ಕೂ ಮೊದಲು ಗಡಾಯಿಕಲ್ಲಿನ ಇತಿಹಾಸದ ಬಗ್ಗೆ ಕುತೂಹಲ ಉಂಟಾಗಿ ಮಾಹಿತಿ ಸಂಗ್ರಹಿಸಿದೆವು. ಈ ಬೃಹತ್ ಬೆಟ್ಟವು ಸ್ಥಳೀಯರಿಂದ ಗಡಾಯಿಕಲ್ಲು ಎಂದು ಕರೆಯಲ್ಪಟ್ಟರೆ, ಇದರ ಪುರಾತನ ಹೆಸರು “ನರಸಿಂಹ ಗಢ’.
ಇಲ್ಲಿಗೆ ಭೇಟಿಯಿತ್ತ ಟಿಪ್ಪು ಸುಲ್ತಾನ್ ಇಲ್ಲಿನ ರುದ್ರ ರಮಣೀಯ ಶಿಲಾ ಬಂಡೆಯನ್ನು ನೋಡಿ ಕೋಟೆ ಕಟ್ಟಲು ಇದುವೇ ಸೂಕ್ತ ಸ್ಥಳವೆಂದು ನಿರ್ಧರಿಸಿ, ಅಭೇದ್ಯ ಕೋಟೆಯನ್ನು ನಿರ್ಮಿಸಿದನು ಹಾಗೂ ತನ್ನ ತಾಯಿಯ ಸ್ಮರಣಾರ್ಥ “ಜಮಲಾಬಾದ್ ಕೋಟೆ’ ಎಂಬ ಹೆಸರನ್ನಿತ್ತನು. ಈ ಎಲ್ಲ ಮಾಹಿತಿಗಳಿಂದ ಪುಳಕಿತರಾದ ನಾವು ಸಮುದ್ರ ಮಟ್ಟದಿಂದ ಸುಮಾರು 1,700 ಅಡಿ ಎತ್ತರದ ಗಡಾಯಿಕಲ್ಲನ್ನು ಹತ್ತಲು ಶುರು ಮಾಡಿದೆವು. ಚಾರಣದ ಮೊದಲರ್ಧ ಕಾಡಿನ ನಡುವೆ ಸಾಗುವುದರಿಂದ ಆಯಾಸದ ಪರಿವೇ ಆಗುವುದಿಲ್ಲ. ಅನಂತರ ದ್ವಿತೀಯಾರ್ಧವು ಬೆಟ್ಟದ ಮೇಲಿನ ನಡಿಗೆಯಾದ್ದರಿಂದ 1876 ಮೆಟ್ಟಿಲುಗಳನ್ನು ಹತ್ತುವಾಗ ನಿಧಾನವಾಗಿ ಬೆವರಿಳಿಯಲು ಪ್ರಾರಂಭವಾಗುತ್ತದೆ! ಜತೆಗೆ ಬಿಸಿಲೂ ಇದ್ದುದರಿಂದ ನಾವು ಬಸವಳಿದು ಹೋದೆವು. ಈ ಹಾದಿಯಲ್ಲಿ ಟಿಪ್ಪುವಿನ ಕಾಲದ ಫಿರಂಗಿಗಳು ಕಾಣಸಿಕ್ಕಿತು.
ಮುಂದುವರಿದು ಹೋದಂತೆ ಕಡಿದಾದ ಹಾದಿಗಳು ನಿಜವಾದ ಚಾರಣಿಗನಿಗೆ ಕಠಿನ ಪರೀಕ್ಷೆ ಒಡ್ಡುತ್ತವೆ. ಮಳೆಗಾಲದಲ್ಲಿ ಈ ಮೆಟ್ಟಿಲುಗಳು ಜಾರುವುದರಿಂದ ತೀರಾ ಎಚ್ಚರಿಕೆ ಅಗತ್ಯ. ಕೊನೆಯ ಘಟ್ಟದಲ್ಲಿ ಕೋಟೆಯ ಪ್ರವೇಶ ದ್ವಾರವು ನಮಗೆ ವಿರಮಿಸಲು ಪ್ರಶಸ್ತ ಸ್ಥಳವಾಗಿ ಕಂಡಿತು.
ಈ ಅಂತಿಮ ಹಂತವನ್ನು ದಾಟಿದ ಅನಂತರ ನಮಗೆ ನಿಜಕ್ಕೂ ಅದ್ಭುತ ಲೋಕದ ದರ್ಶನವಾಯಿತು.
ಮೇಲೆ ಬೀಸುತ್ತಿದ್ದ ತಂಗಾಳಿ ಅಷ್ಟೂ ಆಯಾಸ ತೊಡೆದುಹಾಕಿತು. ಬೆಟ್ಟದ ಅಂಚಿಗೆ ಬಂದಾಗ ಸುತ್ತಲಿನ ಕುದುರೆಮುಖ ಪರ್ವತ ಶ್ರೇಣಿ ಹಾಗೂ ಆಸುಪಾಸಿನ ದೃಶ್ಯಾವಳಿಗಳನ್ನು ನೋಡಿದ ನಮಗೆ ಭೂಮಿ ತಾಯಿಯೇ ಹಸುರು ಹೊದ್ದು ನಿಂತಂತೆ ಭಾಸವಾಗುತ್ತಿತ್ತು!
ಗಡಾಯಿಕಲ್ಲಿನ ಮೇಲೆ ಟಿಪ್ಪುವಿನ ಕಾಲದ ಕೋಟೆ, ಶಸ್ತ್ರಾಸ್ತ್ರ ಸಂಗ್ರಹ ಕೊಠಡಿ ಹಾಗೂ ಕೆರೆ ಗಮನ ಸೆಳೆಯುವಂತಿದ್ದು, ಅಲ್ಲಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡೆವು. ಜತೆಗೆ, ಕಡಿದಾದ ಬೃಹತ್ ಕಲ್ಲಿನ ಅಂಚು ರುದ್ರ ರಮಣೀಯವಾಗಿ ಗೋಚರಿಸುತ್ತದೆ. ಇಲ್ಲಿ ತರಹೇವಾರಿ ಫೋಟೋ ಕ್ಲಿಕ್ಕಿಸಿಕೊಂಡ ನಾವು, ನೂರಾರು ನೆನಪುಗಳೊಂದಿಗೆ ಮರಳಿ ಗೂಡು ಸೇರಿದೆವು.
▷ ಮಂಗಳೂರಿನಿಂದ 66 ಕಿ.ಮೀ.
▷ ಬೆಳ್ತಂಗಡಿಯಿಂದ 8 ಕಿ.ಮೀ.
▷ ಸ್ವಂತ ವಾಹನ ಅಥವಾ ಬಸ್ ಮೂಲಕ ತೆರಳಬಹುದು.
▷ ಅರಣ್ಯ ಪ್ರದೇಶವಾದ್ದರಿಂದ ಹತ್ತಿರದಲ್ಲಿ ಊಟ- ವಸತಿ ವ್ಯವಸ್ಥೆಯಿಲ್ಲ.
▷ ಮಳೆಗಾಲದಲ್ಲಿ ಕಲ್ಲು ಜಾರುವುದರಿಂದ ತೀರಾ ಜಾಗರೂಕರಾಗಿರುವುದು ಅಗತ್ಯ.
▷ ರಾತ್ರಿ ಕ್ಯಾಂಪ್ ಮಾಡಲು ಅವಕಾಶವಿಲ್ಲ. ಜತೆಗೆ ಫೈರ್ ಕ್ಯಾಂಪ್ ಅಥವಾ ಬೆಂಕಿ ಉರಿಸುವುದನ್ನು ನಿಷೇಧಿಸಲಾಗಿದೆ.
ಸುದೀಪ್ ಶೆಟ್ಟಿ ಪೇರಮೊಗ್ರು, ಮಂಗಳಗಂಗೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು