ಇಲ್ಲ್ ಒಕ್ಕೆಲ್ನ ದಿನ ಭಯಾನಕ!
Team Udayavani, Feb 13, 2020, 5:25 AM IST
ಸಾಮಾನ್ಯವಾಗಿ “ಇಲ್ಲ್ ಒಕ್ಕೆಲ್’ ದಿನ ಅಂದರೆ ಖುಷಿಯ ದಿನ.ನೆಂಟರ ಜತೆಗೆ ಸೇರಿಕೊಂಡು ಮನೆ ಮಂದಿಯೆಲ್ಲ ಸಂಭ್ರಮಿಸುವ ಕ್ಷಣ.ಆ ದಿನವೇ ಭಯಾನಕ ದೃಶ್ಯಗಳು ಸಂಭವಿಸಿದರೆ ಹೇಗಿರಬಹುದು? ಗೃಹ ಪ್ರವೇಶ ನಡೆದ ಅಂದು ಭಯ ಉಂಟಾದರೆ ಹೇಗಿರಬಹುದು? ಇಂತಹ ಸನ್ನಿವೇಶವೇ ಮುಂದೆ ಬರುವ “ಇಲ್ಲ್ ಒಕ್ಕೆಲ್’ನ ಒನ್ ಲೈನ್ ಸ್ಟೋರಿ.ಅಂದಹಾಗೆ, ಸಿನೆಮಾ ಸಂಪೂರ್ಣ ಹಾಸ್ಯಮಯ ಸಿನೆಮಾ. ಕಾಮಿಡಿಗೆ ಎಲ್ಲೂ ಬರವಿಲ್ಲ. ಆದರೆ, ಕಾಮಿಡಿಯ ಜತೆಗೆ ಒಂದಷ್ಟು ಭಯಾನಕತೆಯೂ ಇದೆ ಎನ್ನುವುದು ಸಿನೆಮಾ ನಿರ್ದೇಶಕರ ಅಭಿಪ್ರಾಯ.
ಅವರೇ ಹೇಳುವ ಪ್ರಕಾರ, ಇದೊಂದು ಮನೋರಂಜನೆಯ ಪ್ರಯೋಗಮುಖೀ ಚಿತ್ರ. ಮನೆಕಟ್ಟಿ ಬಿಟ್ಟುಕೊಡುವಲ್ಲಿನ ಅವಸರದ ಸನ್ನಿವೇಶವನ್ನು ಹಿಡಿದುಕೊಂಡು ಅಲ್ಲಿ ನಡೆಯುವ ಕಾಮಿಡಿ ಅವಾಂತರಗಳನ್ನು ವಿಷಯವಾಗಿ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಮತ್ತೂಂದು ಹಂತದಲ್ಲಿ ಚಿತ್ರವು ಹಾರರ್ ರೂಪ ಪಡೆಯುತ್ತದೆ. ಹಾರರ್ ಅನ್ನು ಪ್ರೇಕ್ಷಕರು ಹಾಸ್ಯಾತ್ಮಕವಾಗಿ ಎಂಜಾಯ್ ಮಾಡಬೇಕೆಂಬುದು ಚಿತ್ರ ತಂಡದ ಉದ್ದೇಶ. ಈ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯೋಗ ಎನ್ನುತ್ತಾರೆ.
ಶ್ರೀ ಗಜನಿ ಲಾಂಛನದಲ್ಲಿ ತಯಾರಾದ ವಾಸುದೇವ ಎಸ್.ಚಿತ್ರಾಪು ಮತ್ತು ದಿವಾಕರ ಶೆಟ್ಟಿ ನಿರ್ಮಾಣದ ಡಾ| ಸುರೇಶ್ ಕೋಟ್ಯಾನ್ ಚಿತ್ರಾಪು ನಿರ್ದೇಶನದ ಇಲ್ಲ್ ಒಕ್ಕೆಲ್ ಸದ್ಯ ಸೆನ್ಸಾರ್ ಹಂತದಲ್ಲಿದೆ. ನವೀನ್.ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಅದ್ವಿತಿ ಶೆಟ್ಟಿ, ವಿಸ್ಮಯ ವಿನಾಯಕ್, ವಿ.ಜೆ ವಿನೀತ್, ಚಂದ್ರಕಲಾ ಮೋಹನ್, ಸೀತಾರಾಮ್ ಕಟೀಲು, ಸುನಿಲ್ ನೆಲ್ಲಿಗುಡ್ಡೆ, ಉಮೇಶ್ ಮಿಜಾರ್ ಸೇರಿದಂತೆ ಹಲವು ಕಲಾವಿದರು ಇಲ್ಲ್ ಒಕ್ಕೆಲ್ನಲ್ಲಿದ್ದಾರೆ.
– ದಿನೇಶ್ ಇರಾ