ಪ್ರವಾಸಿ ಬಂಗಲೆಗೆ ದೊರೆಯದ ಕಾಯಕಲ್ಪ
ದುರಸ್ತಿಗೆ ಸಲ್ಲಿಸಿದ್ದ 5 ಲಕ್ಷ ರೂ. ಅಂದಾಜು ಪಟ್ಟಿಯೂ ತಿರಸ್ಕೃತ
Team Udayavani, May 15, 2019, 3:54 PM IST
ಶಿಥಿಲಗೊಂಡು ಪಾಳು ಬಿದ್ದಿರುವ ಕಡಬದ ಪ್ರವಾಸಿ ಬಂಗಲೆಯ ಕಟ್ಟಡ.
ಕಡಬ :ಸುಮಾರು 8 ದಶಕಗಳ ಇತಿ ಹಾಸವನ್ನು ಹೊಂದಿರುವ ಕಡಬದ ಪ್ರವಾಸಿ ಬಂಗಲೆ ಸಂಬಂಧಪಟ್ಟವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಕೆಲ ವರ್ಷಗಳಿಂದ ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲಗೊಂಡಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ.
ಕಡಬವು ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಿ ರೂಪುಗೊಳ್ಳುವುದರೊಂದಿಗೆ ನಿರು ಪಯುಕ್ತವಾಗಿರುವ ಈ ಕಟ್ಟಡ ಮತ್ತೆ ಚಟುವಟಿಕೆಯ ತಾಣವಾಗಿ ಸಾರ್ವಜನಿಕರಿಗೆ ಪ್ರಯೋಜನಕ್ಕೆ ಬರಲಿ ಎನ್ನುವುದು ಜನರ ಆಶಯ.
ಚಟುವಟಿಕೆಯ ತಾಣವಾಗಿತ್ತು
ಒಂದು ಕಾಲದಲ್ಲಿ ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಈ ಪ್ರವಾಸಿ ಬಂಗಲೆ ಸದ್ಯ ಯಾವುದೇ ಚಟುವಟಿಕೆಗಳಿಲ್ಲದೆ ಅನಾಥವಾಗಿದೆ. ಸಮುದಾಯ ಆಸ್ಪತ್ರೆಯ ಆವರಣದಲ್ಲಿರುವ ಈ ಕಟ್ಟಡ ಆರಂಭದಲ್ಲಿ ವೈದ್ಯಾಧಿಕಾರಿಗಳ ವಸತಿಗೃಹವಾಗಿತ್ತು. ಪುತ್ತೂರು ಬಿಡಿಒ ಕಚೇರಿ ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿತ್ತು. ಅನಂತರ 2 ಕೊಠಡಿಗಳನ್ನು ಸೇರಿಸಿ ಪುನಶ್ಚೇತನಗೊಳಿಸಿ ಈ ಕಟ್ಟಡವನ್ನು ಪ್ರವಾಸಿ ಬಂಗಲೆಯಾಗಿ ಪರಿವರ್ತಿಸಲಾಗಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ತಾ.ಪಂ. ಹಾಗೂ ಗ್ರಾ.ಪಂ. ಆಡಳಿತ ಇದರ ನಿರ್ವಹಣೆಯ ಹೊಣೆ ಹೊತ್ತುಕೊಂಡಿತ್ತಾದರೂ ಈಗ ಈ ಕಟ್ಟಡವನ್ನು ಯಾರೂ ಕೇಳುವವರಿಲ್ಲದಂತಾಗಿದೆ. ಈ ಮಧ್ಯೆ ಕಡಬದ ಹಳೆಸ್ಟೇಶನ್ ಬಳಿ 60 ಸೆಂಟ್ಸ್ ಜಾಗ ಗುರುತಿಸಲಾಗಿದ್ದು, ಅಲ್ಲಿ ಹೊಸದಾಗಿ ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿದೆ ಎನ್ನುವ ಮಾಹಿತಿ ಇದೆ.
ಭೂತ ಬಂಗಲೆಯಂತಾಗಿದೆ
ಪಾಳು ಬಿದ್ದಿರುವ ಈ ಕಟ್ಟಡ ಈಗ ಭೂತ ಬಂಗಲೆಯಂತೆ ಕಂಡುಬರುತ್ತಿದೆ. ಆವರಣ ಗೋಡೆ ಕುಸಿದು ಬಿದ್ದಿರುವ ಈ ಪ್ರದೇಶವನ್ನು ಸಾರ್ವ ಜನಿಕರು ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಉಪ ಯೋಗಿಸುತ್ತಿರುವುದರಿಂದಾಗಿ ಈ ಪರಿಸರ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಕಟ್ಟದೊಳಗಿನ ಬೆಲೆಬಾಳುವ ಪೀಠೊಪಕರಣಗಳು ಹಾಳುಬಿದ್ದಿವೆ. ವಿದ್ಯುತ್ ಸಂಪರ್ಕವಿಲ್ಲದೆ ಸ್ತಬ್ಧಗೊಂಡಿರುವ ವಿದ್ಯುತ್ ಉಪಕರಣಗಳು ಇಲ್ಲಿನ ದುಃಸ್ಥಿತಿಗೆ ಸಾಕ್ಷ ್ಯ ನುಡಿಯುತ್ತಿವೆ. ಕಟ್ಟಡದ ಹಿಂಭಾಗದ ಗೋಡೆಗಳು ಅಲ್ಲಲ್ಲಿ ಕುಸಿದುಬಿದ್ದಿದೆ. ಮೂಲತಃ ಸರಕಾರಿ ಸಮುದಾಯ ಆಸ್ಪತ್ರೆಗೆ ಸೇರಿದ ಈ ಕಟ್ಟಡವನ್ನು ಮತ್ತೆ ಆಸ್ಪತ್ರೆಯ ಉಪಯೋಗಕ್ಕೆ ನೀಡಬೇಕೆಂದು ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿ ಮುಖಾಂತರ ಜಿ.ಪಂ.ಗೆ ಮನವಿ ಸಲ್ಲಿಸಲಾಗಿತ್ತು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಪಂದಿಸಿದ್ದರೂ ಲಿಖೀತ ಆದೇಶ ನೀಡದ ಕಾರಣ ಯಾವುದೇ ಪ್ರಯೋಜನವಾಗಿಲ್ಲ.
ಅಂದಾಜು ಪಟ್ಟಿಯೂ ತಿರಸ್ಕೃತ
ಪೇಟೆಯ ಹೃದಯ ಭಾಗದಲ್ಲಿರುವ ಈ ಕಟ್ಟಡದಲ್ಲಿ ಯಾವುದಾದರೊಂದು ಪ್ರಮುಖ ಇಲಾಖೆಯ ಕಚೇರಿ ತೆರೆಯುವ ಅವಕಾಶವಿದೆ. ಈ ಕಟ್ಟಡವನ್ನು ದುರಸ್ತಿಗೊಳಿಸಿ ತಾಲೂಕು ಮಟ್ಟದ ಯಾವುದಾದರೂ ಸರಕಾರಿ ಕಚೇರಿಗೆ ಬಳಸಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಜಿ.ಪಂ. ಸದಸ್ಯರ ಪ್ರಯತ್ನದಿಂದ 5 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು ಗೋಡೆಗಳು ಅಲ್ಲಲ್ಲಿ ಕುಸಿದಿರುವುದರಿಂದ ದುರಸ್ತಿಗೊಳಿಸಿ ಉಪಯೋಗಿಸಲು ಅಸಾಧ್ಯ ಎನ್ನುವ ನೆಲೆಯಲ್ಲಿ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ.
ಹೊಸ ಕಟ್ಟಡವೇ ಒಳಿತು
ಶಿಥಿಲಗೊಂಡಿರುವ ಗೋಡೆ ಹಾಗೂ ಛಾವಣಿಯನ್ನು ದುರಸ್ತಿಗೊಳಿಸಿ ಸುಸ್ಥಿತಿಗೆ ತರಲು ಜಿ.ಪಂ. ಎಂಜಿನಿಯರಿಂಗ್ ವಿಭಾಗದಿಂದ ಈ ಹಿಂದೆ 5 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿತ್ತು. ಆದರೆ ಕಟ್ಟಡವನ್ನು ಪರಿಶೀಲನೆ ನಡೆಸಿದ ಉನ್ನತ ಅಧಿಕಾರಿಗಳು ಕಟ್ಟಡ ತೀರಾ ಹಳೆಯದಾಗಿರುವುದರಿಂದ ದುರಸ್ತಿ ಮಾಡಿ ಪ್ರಯೋಜನವಾಗದು. ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಿಸುವುದು ಒಳಿತು ಎಂದು ಅಭಿಪ್ರಾಯ ತಿಳಿಸಿ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ.
– ಭರತ್, ಜಿ.ಪಂ. ಎಂಜಿನಿಯರ್
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ