ಬದುಕಿನ ಒಳ್ಳೆಯ ವಿದ್ಯಾರ್ಥಿಗಳಾಗಿ
Team Udayavani, Aug 26, 2019, 5:37 AM IST
ಬದುಕು ಸುಂದರವಾದ ಅಧ್ಯಯನ. ನಾವು ವಿಧೇಯ ವಿದ್ಯಾರ್ಥಿಯಂತೆ ಬದುಕನ್ನು ಅಭ್ಯಸಿಸಿದರೆ, ಯಶಸ್ವಿಯಾಗಬಹುದು. ವಿದ್ಯಾರ್ಥಿ ಜೀವನದಲ್ಲಿ ಬರುವ ಆಂತರಿಕ, ಸೆಮಿಸ್ಟರ್, ವಾರ್ಷಿಕ ಪರೀಕ್ಷೆಗಳಂತೆ ನಮ್ಮ ಜೀವನದಲ್ಲಿ ಕೂಡ ಹಲವಾರು ಪರೀಕ್ಷೆಗಳು ಬರುತ್ತವೆ. ಹಲವು ರೀತಿಯಲ್ಲಿ ಕಷ್ಟ, ನೋವು-ನಲಿವು, ಸೋಲು-ಗೆಲುವು ಹೀಗೆ ಇಂತಹ ವೈರುದ್ಧಗಳನ್ನು ಕಾಣಬಹುದು. ಇವುಗಳನ್ನು ಸಮನ್ವಯ ದೃಷ್ಟಿಕೋನದಿಂದ ನೋಡುವ ಮನೋಭಾವನೆ ನಾವು ರೂಢಿಸಿಕೊಳ್ಳಬೇಕು. ಮಹೋನ್ನತರ ಆದರ್ಶಗಳು, ಜೀವನದ ಅಂಶಗಳನ್ನು ನಾವು ಅನುಸರಿಸಿದಾಗ ನಾವು ಕೂಡ ಆದರ್ಶವಾಗಿ ನಿಲ್ಲಲು ಸಾಧ್ಯ.
ಸವಾಲು ಸ್ವೀಕರಿಸಿ
ಜೀವನ ಒಂದು ಸವಾಲು. ಅದಕ್ಕೆ ನಾವು ಬದ್ಧರಾಗಿ ಬದುಕಬೇಕಾಗುತ್ತದೆ. ಸವಾಲುಗಳನ್ನು ಸ್ವೀಕರಿಸುವ ಗುಣ ಕಲಿಯಬೇಕಾದರೆ ಪ್ಯಾಪಿಲಾನ್ ನಮಗೆ ತುಂಬಾ ಇಷ್ಟವಾಗಬಹುದು. ಮಾಡದ ತಪ್ಪಿಗೆ ಜೈಲಿಗೆ ಹೋದ ಆತ ಸೇಡು ತೀರಿಸಿಕೊಳ್ಳಬೇಕು ಎಂಬ ದ್ವೇಷದಲ್ಲಿದ್ದ. ಪ್ರೀತಿ, ಮಮಕಾರ ಹಾಗೂ ಸ್ನೇಹ ಎಂಬ ಅಂಶಗಳು ಆತನನ್ನು ಬದಲಾಯಿಸುತ್ತವೆ, ಕೊನೆಗೆ ಆತನನ್ನು ಮನುಷ್ಯನನ್ನಾಗಿ ಮಾಡುತ್ತವೆ. ಪ್ಯಾಪಿಲಾನ್ನೇ ಹೇಳುವಂತೆ ‘ ನೀವು ಬದುಕಿನ ಎಲ್ಲ ಸವಾಲುಗಳನ್ನು ಸ್ವೀಕರಿಸಿ, ನಮ್ಮೆಲ್ಲಾ ಚೈತ್ಯನ್ಯವನ್ನು ಒರೆಹಚ್ಚಿ ಹೋರಾಡುವುದು ಅದೇ ಬದುಕು, ಸಫಲತೆ ಎಂಬ ಆದರ್ಶದ ಮಾತನಾಡುತ್ತಾನೆ.
ಉನ್ನತವಾಗಿ ಬದುಕಿ
ಒಬ್ಬ ವ್ಯಕ್ತಿ ಯಾವತ್ತೂ ಅತ್ಯುನ್ನತವಾಗಿ ಬದುಕುತ್ತಾನೋ, ಆತನಿಂದ ಒಂದು ಮಹಾನ್ ಚಿಂತನೆ ಉದ್ಭಸುತ್ತದೆ ಎಂದು ಭಗವಾನ್ ಮಹಾವೀರ ಒಂದು ಕಡೆ ಹೇಳುತ್ತಾರೆ. ನಾವು ಕೂಡ ಮಹಾವೀರ ಹೇಳಿದ ಮಾರ್ಗದಲ್ಲಿ ಬದುಕಿದರೆ ಮುಂದಿನ ಪೀಳಿಗೆಯೂ ಕೂಡ ನಮ್ಮನ್ನು ನೆನೆಯುತ್ತದೆ. ಯಾವತ್ತಿಗೂ ಸತ್ಯನಾಗಿ ಬದುಕುವುದು, ಪರರ ಬಗ್ಗೆ ಅಸೂಹೆ ಪಡದೇ ಇರುವುದು ಮತ್ತು ಸುಖ-ದುಃಖಗಳೆರಡನ್ನು ಸಮಾನವಾಗಿ ಸ್ವೀಕರಿಸುವವ ಮಾತ್ರ ಮಹಾರ ಹೇಳಿದಂತೆ ಬದುಕು ಒಂದು ಮಹಾನ್ ಚಿಂತನೆಗೆ ದಾರಿ ಮಾಡಿಕೊಡುತ್ತದೆ.
ಪ್ಲೀಸ್ ಕ್ಷಮಿಸಿಬಿಡಿ
ಸಾಂದರ್ಭೀಕವಾಗಿ ನಡೆದು ಹೋಗುವ ಘಟನೆಗಳನ್ನೇ ಇಟ್ಟುಕೊಂಡು ಅವರೊಡನೇ ದ್ವೇಷ ಸಾಧಿಸುವುದು ಮನುಷ್ಯನ ಬದುಕಿನ ಲಕ್ಷಣವಲ್ಲ. ಹಾಗಾಗಿ ಕ್ಷಮೆ ಎಂಬುದು ದೊಡ್ಡ ಗುಣ. ಇದು ನಾವು ಅಳವಡಿಸಿಕೊಳ್ಳಲೇಬೇಕು. ಎಂದಿಗೂ ಯಾರು ಕೆಟ್ಟವರಲ್ಲ, ಅಕಸ್ಮಾತ್ ತಪ್ಪಿಗೆ ಕ್ಷಮಿಸಿದರೆ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟು ಸನ್ಮಾರ್ಗಕ್ಕೆ ಬರುತ್ತಾರೆ. ಇದು ಜೀವನದಲ್ಲಿ ಮುಖ್ಯ.
ಪರಿಶುದ್ಧರಾಗಿ
ಜೀವನವೆಂಬದು ಹರಿಯುವ ನದಿಯಲ್ಲಿ ತೇಲುವ ಮರದ ತುಂಡುಗಳಂತೆ. ಒಮ್ಮೊಮ್ಮೆ ಒಂದಾಗಿರುವುದು, ಇಲ್ಲ ಜೋರಾದ ಪ್ರವಾಹಕ್ಕೆ ಬೇರೆಯೂ ಆಗಬಹುದು. ಅದಕ್ಕೆ ನಾವು ನಮ್ಮವರೂ ಇದ್ದರೂ, ಇಲ್ಲದಿದ್ದರೂ ಯಾವತ್ತಿಗೂ ಸ್ವಂತಿಕೆಯಿಂದ ಬದುಕುವುದು ಕಲಿಯಬೇಕು. ನಮ್ಮ ಯೋಚನೆಗಳಿಗೆ ಅನುಗುಣವಾಗಿ ಬದುಕನ್ನು ಪ್ರೀತಿಸಿದಾಗ ನಾವು ನಾವಾಗಿಯೇ ಉಳಿಯುತ್ತೇವೆ. ಮನುಷ್ಯನ ದೊಡ್ಡ ಕೇಡು ಗುಣ ಅಸೂಯೆ. ಇದು ಯಾವತ್ತಿಗೂ ಒಳ್ಳೆಯದಲ್ಲ. ಮನುಷ್ಯನೂ ತನ್ನೊಳಗೆ ತಾನು ಪರಿಶು ದ್ಧನಾದಾಗ ಇತರರನ್ನು ಎಂದಿಗೂ ಸಂಶಯಿಸಲಾರ ಎಂಬ ಮಾತು ಪೂರ್ಣ ಸತ್ಯ.
- ಶಿವ ಸ್ಥಾವರಮಠ