ಅಪ್ಲೋಡ್ ಮಾಡುವ ಮುನ್ನ…
Team Udayavani, Nov 25, 2019, 5:00 AM IST
ಇತ್ತೀಚೆಗೆ ಕಾರ್ಟೂನ್ ಒಂದು ಗಮನ ಸೆಳೆಯಿತು. ಬಹಳ ವರ್ಷಗಳ ನಂತರ ಅಜ್ಜಿಯನ್ನು ಭೇಟಿ ಮಾಡಲೆಂದು ಮಕ್ಕಳು, ಮೊಮ್ಮಕ್ಕಳು ಬಂದಿರುತ್ತಾರೆ. ಆದರೆ ಅಜ್ಜಿಯನ್ನು ಮಾತನಾಡಿಸುವುದು ಬಿಟ್ಟು ಎಲ್ಲರೂ ಮೊಬೈಲ್ ನೋಡುವುದರಲ್ಲೇ ಮಗ್ನರಾಗಿದ್ದರು. ಅಜ್ಜಿ ಮೂಲೆಯಲ್ಲಿ ಎಂದಿನಂತೆ ಒಂಟಿ…ಇದು ಕೇವಲ ವ್ಯಂಗ್ಯ ಚಿತ್ರ ಮಾತ್ರವಲ್ಲ, ವಾಸ್ತವಕ್ಕೆ ಹಿಡಿದ ಕನ್ನಡಿಯೂ ಹೌದು.
ತಂತ್ರಜ್ಞಾನ ಜೀವನವನ್ನು ಸರಳಗೊಳಿಸಿರುವ ಜತೆ ಜತೆಗೆ ಸಂಬಂಧವನ್ನೂ, ಸಾಮಾಜಿಕ ಮೌಲ್ಯವನ್ನೂ ಸಂಕೀರ್ಣಗೊಳಿಸಿರುವುದು ಕೂಡ ಅಷ್ಟೇ ಸತ್ಯ. ನಮ್ಮ ದಿನ ಆರಂಭವಾಗುವುದು ಮತ್ತು ಅಂತ್ಯವಾಗುವುದು ಸಾಮಾಜಿಕ ಜಾಲತಾಣದೊಂದಿಗೇ ಎನ್ನುವುದು ವಿಷಾದದ ಸಂಗತಿ.
ಸಂದೇಶ ಸಾರುವ ಸಿನೆಮಾ
ಇತ್ತೀಚೆಗೆ ತೆರೆಕಂಡ ಮಲೆಯಾಳಂ ಚಿತ್ರ “ವಿಕೃತಿ’ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಬಗ್ಗೆ ಚರ್ಚಿಸುತ್ತದೆ. ಸಿಕ್ಕ ಸಿಕ್ಕ ಫೋಟೋಗಳನ್ನು ಕ್ಲಿಕ್ಕಿಸಿ “ವೈರಲ್’ ಮಾಡುತ್ತಿರುವ ನಮ್ಮ ಮನಃಸ್ಥಿತಿಯನ್ನು ಟೀಕಿಸುವುದರೊಂದಿಗೆ ಇದಕ್ಕೆ “ಆಹಾರ’ವಾಗುವ ವ್ಯಕ್ತಿಯ ಜೀವನದಲ್ಲಾಗುವ ತಲ್ಲಣಗಳನ್ನು ತೆರೆದಿಡುತ್ತದೆ. ಮಾತು ಬಾರದ, ಕಿವಿ ಕೇಳದ ಎಲ್ದೊ ಮತ್ತು ಎಲ್ಸಿ ದಂಪತಿಗೆ ಇಬ್ಬರು ಮಕ್ಕಳು. ಎಲ್ದೊ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿದ್ದರೆ, ಎಲ್ಸಿ ಗಾರ್ಮೆಂಟ್ಸ್ ಉದ್ಯೋಗಿ. ಇತ್ತ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಮೀರ್ ರಜೆಯಲ್ಲಿ ಊರಿಗೆ ಬರುತ್ತಾನೆ. ಪ್ರತಿಯೊಂದನ್ನೂ ವಾಟ್ಸಾಪ್, ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವುದು ಸಮೀರ್ನ ಹವ್ಯಾಸ.
ಒಂದು ದಿನ ಎಲ್ದೊ ಮಗಳು ಹುಷಾರಿಲ್ಲದೆ ಆಸ್ಪತ್ರೆ ದಾಖಲಾಗುತ್ತಾಳೆ. ಅವಳ ಜತೆ ಆಸ್ಪತ್ರೆಯಲ್ಲಿರುತ್ತಾನೆ ಎಲ್ದೊ. ಎರಡು ದಿನ ಬಿಟ್ಟು ಮನೆಗೆ ಹೊರಡುತ್ತಾನೆ. ನಿದ್ದೆ ಇಲ್ಲದ ಕಾರಣ ಮೆಟ್ರೋ ಹತ್ತಿದವನು ಅಲ್ಲೇ ನಿದ್ದೆ ಹೋಗುತ್ತಾನೆ. ಅದೇ ರೈಲಿನಲ್ಲಿರುವ ಸಮೀರ್ ಇದ್ಯಾವುದೂ ತಿಳಿಯದೆ ಎಲ್ದೊ ಮಲಗಿರುವ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಾನೆ. ಅದು ವೈರಲ್ ಆಗಿ ಎಲ್ದೊವನ್ನು ಅಮಾನತುಗೊಳಿಸಲಾಗುತ್ತದೆ. ಮುಂದೆ ಆತನ ಮೇಲಿನ ಆರೋಪ ನಿವಾರಣೆಗೆ ದೊಡ್ಡ ಹೋರಾಟವೇ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಆತ ಎದುರಿಸುವ ಅವಮಾನ, ಅವನ ಮನೆಯವರನ್ನು ಸಮಾಜ ನೋಡುವ ರೀತಿಯನ್ನು ಮನಮುಟ್ಟುವಂತೆ, ನೈಜವಾಗಿ ಚಿತ್ರಿಸಲಾಗಿದೆ.
ಇದು ಎಲ್ಲೋ ದೂರದಲ್ಲಿ ನಡೆಯುವ ಕಥೆಯಲ್ಲ. ನಮ್ಮ ನಿಮ್ಮ ಮಧ್ಯೆ ಘಟಿಸುವ ವಿದ್ಯಮಾನಗಳೇ. ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡದೆ, ಎದುರಿಗೆ ಕಂಡದ್ದನ್ನು ಅಪ್ಲೋಡ್ ಮಾಡುವವರಿಗೆ, ಧಾವಂ ತದಲ್ಲಿ ಹಿಂದೆ ಮುಂದೆ ಯೋಚಿಸದೆ ವಾಟ್ಸಾಪ್ ಸಂದೇಶ ಫಾರ್ವರ್ಡ್ ಮಾಡುವವರಿಗೆ ಇದು ಪಾಠವಾಗಬೇಕು.
ಹೊರಬನ್ನಿ
ಅತಿಯಾದ ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ದೇಹಾರೋಗ್ಯದ ಜತೆಗೆ ಸಂಬಂಧಗಳ ಆರೋಗ್ಯವನ್ನೂ ಬಾಧಿಸುತ್ತದೆ. ಆದ್ದರಿಂದ ಆಧುನಿಕ ತಂತ್ರಜ್ಞಾನಗಳನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಉಪಯೋಗಿಸುವುದನ್ನು ರೂಢಿಸಿಕೊಳ್ಳಿ. ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡದೆಯೂ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಬಹುದು ಎನ್ನುವುದನ್ನು ಮರೆಯದಿರೋಣ.
- ಆರ್.ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ