ಬ್ರೇಕೊತ್ತಿ ಈ ವೇಗ ತಗ್ಗಬೇಕು !
Team Udayavani, Jul 8, 2019, 5:00 AM IST
ಈಗೆಲ್ಲವೂ ವೇಗ. ನಿಧಾನದ ಲಯ ಯಾರಿಗೂ ಬೇಡ. ಬೈಕೇರಿದರೆ ಕ್ಷಣಾರ್ಧದಲ್ಲಿ ಸ್ಪೀಡೋಮೀಟರ್ ನೂರಕ್ಕೇರಬೇಕು. ಕೂತ ಬಸ್ಸು ಅತಿವೇಗವಾಗಿ ಧಾವಿಸಬೇಕು. ಟೈಪಿಸಿದ ಇಮೈಲ್ ಮುಚ್ಚಿದ ಕಣ್ರೆಪ್ಪೆ ತೆರೆಯುವುದರ ಒಳಗಾಗಿ ಆಚೆ ಬದಿಯವನ ಇನ್ಬಾಕ್ಸಿನಲ್ಲಿರಬೇಕು. ಎಲ್ಲವೂ ಹೀಗಾದರೆ ಹೇಗೆ? ಬದುಕಿಗೆ ನಿಧಾನವೂ ಬೇಕಲ್ಲವೆ? ಮಧ್ಯಾಹ್ನ ಊಟವಾದ ಮೇಲೆ ಜಗುಲಿಯಲ್ಲಿ ಹದಕ್ಕೆ ಒಂದರ್ಧ ಗಂಟೆ ನಿದ್ದೆ ಹೊಡೆದ ಹಾಗಿನ ಆರಾಮ ಗತಿಯಲ್ಲಿಯೂ ಇದೆಯಲ್ಲವೆ ಜೀವನದ ಚೆಲುವು!
ಮನಸ್ಸು ಸೂಕ್ಷ್ಮ. ಭೇದಿಸಿದರೆ ಒಡೆದುಹೋಗುತ್ತದೆ. ವೇಗ ಒಡೆಯುತ್ತದೆ ಮತ್ತು ಒಡೆಸುತ್ತದೆ. ಅವರಿವರೆನ್ನದೆ ಎಲ್ಲರೂ ಎಲ್ಲರಿಗೂ ಸ್ಪೀಡ್ ಅನ್ನುವ ಸ್ಥಿತಿಯನ್ನು ಬೋಧಿಸುತ್ತಿದ್ದಾರೆ. ವೇಗ ಇಲ್ಲದೇ ಹೋದರೆ ಬದುಕುವುದು ಕಷ್ಟ ಅನ್ನುವ ವ್ಯಂಗ್ಯ. ನಿಧಾನಕ್ಕೆ ಬೆಲೆಯೇ ಇಲ್ಲ. ಬಾವಿಗಳಿಗಿಂತ ರಭಸದಿಂದ ಓಡುವ ನದಿಯೇ ಸೆಳೆಯುತ್ತದೆ. ಗೊತ್ತಿಧ್ದೋ ಗೊತ್ತಿಲ್ಲದೆಯೋ ಹುಟ್ಟಿಕೊಂಡ ವೇಗ ಅನ್ನುವ ಕಾಯಿಲೆ ವ್ಯಾಪಿಸುತ್ತಾ ಹೋಗುತ್ತಿದೆ. ಎಲ್ಲವೂ ಈಗ ಫಾಸ್ಟ್ಫುಡ್!
ಆ್ಯಕ್ಸಿಲೇಟರ್ ಬಿಟ್ಟ ಕೂಡಲೇ ಮೀಟರ್ ಬೋರ್ಡಲ್ಲಿ ಸ್ಪೀಡೋಮೀಟರ್ ನೂರಕ್ಕೇರುವ ಗಾಡಿಗಳು ರಸ್ತೆಯಲ್ಲಿವೆ. ದುರಂತವೆಂದರೆ ವೇಗ ನಿಯಂತ್ರಣ ಮಾಡುವ ಮಾಯಾದಂಡ ಕಳೆದುಹೋಗಿದೆ. ಎಷ್ಟು ಹೊತ್ತು ಈ ವೇಗವನ್ನು ಕಾಯ್ದುಕೊಳ್ಳಬಹುದು? ನದಿ ಎಷ್ಟು ದಿನ ರಭಸವಾಗಿ ಓಡಬಲ್ಲದು?
ಒಂದಲ್ಲ ಒಂದು ದಿನ ನಿಧಾನವಾಗಲೇಬೇಕು. ತಪ್ಪಿದರೆ ಬತ್ತಿಹೋಗಲೇಬೇಕು. ಆ ಸ್ಥಿತಿಯನ್ನು ಯಾರೂ ಬೋಧಿಸುವುದೇ ಇಲ್ಲ. ನಿಧಾನವಾಗಿರುವುದನ್ನು ಯಾರೂ ಕಲಿಸುವುದೇ ಇಲ್ಲ. ಎಲ್ಲ ಶಾಲೆಗಳೂ ನೀನು ವೇಗವಾಗಿರಬೇಕು ಅನ್ನುತ್ತವೆ. ಕಾಲೇಜುಗಳು ಕೂಡ ನೀನು ಹಾಗಿಲ್ಲದಿದ್ದರೆ ಭವಿಷ್ಯವಿಲ್ಲ ಅನ್ನುತ್ತವೆ. ಅದರಿಂದಾಗಿಯೇ ಸೈಕಾಲಜಿಸ್ಟ್ಗಳ ಹತ್ತಿರ ಹೋಗುವ ಹುಡುಗ ಹುಡುಗಿಯರ ಸಂಖ್ಯೆ ಹೆಚ್ಚುತ್ತಿದೆ. ಕಳವಳ ಪಡುವ ಹೆತ್ತವರ ಚಿಂತೆಯ ಮಟ್ಟ ಏರುತ್ತಲೇ ಇದೆ. ಹುಡುಗ ಹುಡುಗಿಯರು ವೇಗ ಅನ್ನುವ ಧಾವಂತಕ್ಕೆ ಬಿದ್ದು ಅದೇ ವೇಗವನ್ನು ಕಾಯ್ದುಕೊಳ್ಳಲಾಗದೆ ಕಂಗಾಲಾಗುತ್ತಾರೆ.
ಏನೇನೋ ವಿಚಿತ್ರ ಆತಂಕಗಳು ಆವರಿಸುತ್ತವೆ. ಕೊನೆಗೆ ಈಜುವುದನ್ನೇ ನಿಲ್ಲಿಸಿಬಿಟ್ಟರೂ ಅಚ್ಚರಿಯಿಲ್ಲ. ಅದನ್ನೇ ಸೋಲು ಅನ್ನಲಾಗುತ್ತದೆ. ಸೋಲು ಕೆಟ್ಟದ್ದು ಅನ್ನುವುದನ್ನು ಬಾಲ್ಯದಲ್ಲೇ ಹೇಳಿಕೊಡಲಾಗಿದೆ. ತಾನು ಕೆಟ್ಟದ್ದು ಮಾಡಿದೆ ಅನ್ನೋ ಭಾವ ಒದ್ದಾಡಿಸುತ್ತದೆ.
ಹೀಗೆ ಎಲ್ಲವೂ ವೇಗವಾದರೆ ತುಂಬಾ ಪ್ರೀತಿಯಿಂದ ಕಿಟಕಿ ಬಳಿ ನಿಂತು ಮಳೆ ನೋಡುವ ಖುಷಿಯನ್ನು ಅನುಭವಿಸುವುದು ಯಾವಾಗ? ವೇಗವಾಗಿ ಧಾವಿಸಿ ಗುರಿ ಮುಟ್ಟುವುದೇ ಸಾಧನೆಯಾದರೆ ಬಸ್ಸಿನ ಕಿಟಕಿಯಿಂದ ಹಿಂದೆ ಸಾಗುವ ಗಿಡಮರಗಳ ಚೆಲುವನ್ನು ಬೆರಗುಗಣ್ಣಿನಿಂದ ಅನುಭವಿಸುವುದು ಯಾವಾಗ? ಎಲ್ಲವನ್ನೂ ಕಿತ್ತುಕೊಳ್ಳುತ್ತದೆ. ಟೆಕ್ನಾಲಜಿ ಯುಗದಲ್ಲಿರುವ ಜನರು ನಿಧಾನ ಅನ್ನುವುದನ್ನೇ ದ್ವೇಷಿಸಲು ಆರಂಭ ಮಾಡಿದ ಬಳಿಕ ನಿಧಾನ ಎನ್ನುವುದು ಎಲ್ಲರಿಗೂ ಮರೆತುಹೋಗಿದೆ. ನಿಧಾನವೇ ಪ್ರಧಾನ ಎನ್ನುವ ಮಾತು ಅರ್ಥ ಕಳೆದುಕೊಂಡಿದೆ.
ಒತ್ತಡ ಸೃಷ್ಟಿಯಾಗಿದೆ. ಒತ್ತಡವಿರುವ ಬಲೂನು ಒಂದಲ್ಲ ಒಂದು ದಿನ ಒಡೆಯಲೇ ಬೇಕು. ಇದು ಅರ್ಥವಾದರೆ ವೇಗ ತಗ್ಗುತ್ತದೆ. ವೇಗ ತಗ್ಗಿದರೆ ನಿಯಂತ್ರಣ ಸಿಗುತ್ತದೆ.
ಶಹರದಲ್ಲಿ ಎಸಿ ಚೇಂಬರ್ನಲ್ಲಿ ಕುಳಿತು ಕೆಲಸ ಮಾಡುವ ಸಾಫ್ಟ್ವೇರ್ ಎಂಜಿನಿಯರ್ ಹುಡುಗ ಹುಟ್ಟೂರಿಗೆ ಹೋಗಿದ್ದ. ಮನೆಯಲ್ಲೂ ಮೊಬೈಲ್ ಹಿಡಿದುಕೊಂಡು ಕೂತವನಿಗೆ ಒಂದೆರಡು ಬಾರಿ ಅಮ್ಮ ಕರೆದದ್ದೇ ಕೇಳಲಿಲ್ಲ. ಅಮ್ಮನಿಗೆ ಆತ ಏನು ಮಾಡುತ್ತಿದ್ದಾನೆ ಅನ್ನುವುದೂ ಗೊತ್ತಿರಲಿಲ್ಲ. ಅವನು ಮಾತಾಡುತ್ತಿರಲಿಲ್ಲ. ಎರಡನೇ ದಿನ ಬೆಳಿಗ್ಗೆ ಅವನಿಗೊಂದು ಫೋಟೋ ಸಿಕ್ಕಿತು. ಅಮ್ಮ ಅವನಿಗೆ ಸ್ಲೇಟಿನಲ್ಲಿ ಏನೋ ಬರೆಯಿಸುವ ಕಪ್ಪು ಬಿಳುಪು ಫೋಟೋ. ಅಂದು ಅವನು ಮೊಬೈಲ್ ಬದಿಗಿಟ್ಟವನು ಮನೆಯಿಂದ ಹೊರಗೆ ಕಾಲಿಡುವವರೆಗೆ ಹೊರತೆಗೆಯಲಿಲ್ಲ.
•ಪುಣ್ಯಾತ್ಮಾನಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ