ಮಾತು ಮೌನವಾಗದಿರಲಿ…
Team Udayavani, Jul 15, 2019, 5:56 AM IST
ಮಾತು ಒಂದು ಅದ್ಬುತ ಶಕ್ತಿ. ಮಾತೇ ಮಾಣಿಕ್ಯ ಎನ್ನುವಂತೆ ಅದಕ್ಕೆ ನಗಿಸುವುದು ಗೊತ್ತು ಅಳಿಸುವುದೂ ಗೊತ್ತು. ಸಂತೋಷ ವಾಗಿರಲೂ ಮಾತಿಗಿಂತ ಮಿಗಿಲಾದ ಔಷಧವಿಲ್ಲ. ಯಾಕೆಂದರೆ ಮಾತಿಗೆ ಅಷ್ಟು ಶಕ್ತಿಯಿದೆ. ದುಃಖದಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಮಾತಿನ ಮೂಲಕ ನಗಿಸಬಹುದು.
ಒಬ್ಬ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಬುದ್ಧಿವಂತ. ಆದರೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮಾತನಾಡಲು ಮರೆತಿದ್ದಾನೋ ಎನ್ನುವಷ್ಟು ಮೌನಿ. ಎಲ್ಲವನ್ನೂ ಕಾಲ್ಪನಿಕವಾಗಿ ನೋಡುತ್ತಿದ್ದ. ಪಕ್ಕದವರೂ ಅತ್ತರೂ ಆತ ಮಾತನಾಡದೇ ತಾನೇ ಏನನ್ನೋ ಊಹಿಸಿ ಸುಮ್ಮನಾಗುತ್ತಿದ್ದ. ಆದರೆ ಒಂದು ದಿನ ಆತ ಬರುವ ದಾರಿ ಮಧ್ಯ ತನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಸೇರಿಸಿ ಆತನ ಕತೆ ಕೇಳಿದಾಗ ಆತನಿಗೆ ಏನೋ ಭೀಕರ ರೋಗವಿರುವುದು ತಿಳಿದು ಆತನನ್ನು ಕೇಳುತ್ತಾನೆ “ಇಷ್ಟೊಂದು ನೋವು ಮನಸ್ಸಿನಲ್ಲಿಟ್ಟು ಅದು ಹೇಗೆ ಆಫೀಸಿನಲ್ಲಿ ಎಲ್ಲರೊಂದಿಗೆ ಮಾತನಾಡಿ ಸಂತೋಷದಲ್ಲಿರುತ್ತಿದ್ದೆ ಎಂದು. ಆಗ ಆತ ನೋವನ್ನು ಮರೆಯಲು ನಾನು ಮಾತನಾಡುತ್ತಿದ್ದೆ. ಬದುಕಿರುವಾಗ ಜತೆಗಿಲ್ಲದವರೊಂದಿಗೆ ಮಾತನಾಡದಿದ್ದರೆ ಮತ್ತೆ ಯಾವಾಗ ಮಾತನಾಡುವುದು ಎನ್ನುತ್ತಾನೆ.
ಮನುಷ್ಯ ಇಂದು ಬ್ಯುಸಿಯಾಗಿ ಬಿಟ್ಟಿದ್ದಾನೆ. ಹತ್ತಿರ ಕುಳಿತವರ ಜತೆ ಮಾತನಾಡಲಾಗದಷ್ಟೂ.. ಮೌನ ಒಂದು ಸುಂದರ ಅನುಭವವೇ. ಆದರೆ ಮಾತು ಇನ್ನೂ ಸುಂದರವಾದದ್ದೂ. ಮಾತನಾಡಿದರೆ ಇನ್ನೊಬ್ಬರ ಭಾವನೆಗಳು ಅರ್ಥವಾಗಲು ಸಾಧ್ಯ.
ಮಾತು ಮನುಷ್ಯನಿಗೆ ಮಾತ್ರ ಇರುವ ಒಂದು ಅದ್ಭುತ ಸಂವಹನ ಮಾಧ್ಯಮ. ಜಗತ್ತು ಮಾತನಾಡುವುದು ನಿಲ್ಲಿಸಿದರೆ ಎಂದು ಒಂದು ಕ್ಷಣ ಊಹಿಸಲೂ ಸಾಧ್ಯವಿಲ್ಲ. ಆದರೆ ಮನುಷ್ಯ ಇಂದು ಮೌನಿಯಾಗುತ್ತಿದ್ದಾನೆ. ಮಾತನ್ನು ಮರೆತಿದ್ದಾನೆ. ಒಮ್ಮೆ ಜತೆಗಿದ್ದವರ ಜತೆ ಮುಕ್ತವಾಗಿ ಮಾತನಾಡಿದರೆ ವರ್ಷಗಟ್ಟಲೇ ಎದೆಯಲ್ಲೇ ಕಟ್ಟಿರುವ ಕಾಲ್ಪನಿಕತೆಯಿಂದ ಹೊರಬಂದು ವಾಸ್ತವದತ್ತ ನೋಡಲು ಸಾಧ್ಯವಾಗುತ್ತದೆ.
- ರಂಜಿನಿ ಮಿತ್ತಡ್ಕ