ಬದುಕಿನ ಹಾದಿ ತಪ್ಪದಿರಲಿ
Team Udayavani, Jul 8, 2019, 5:00 AM IST
ಬದುಕು ಒಂದಷ್ಟು ಅನುಭವಗಳಿಂದ ಪ್ರತಿಫಲಗಳನ್ನು ಪಡೆಯುತ್ತಾ ಹೋಗುವ ಯಾತ್ರೆ. ಸಂತೋಷ, ದುಃಖ ನೋವು ನಲಿವು ಇವೆಲ್ಲದರ ಹಿಂದೆಯೂ ನಾವು ಮಾಡಿದ ಕೆಲಸಗಳ ಫಲದ ಪ್ರತಿಫಲನವನ್ನು ಕಾಣಬಹುದು.
ಕೆಲಸ ಮಾಡುವ ಮುನ್ನ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನದ ಅರಿವಿನ ಕೊರತೆಯೂ ಹಲವು ಬಾರಿ ನಮ್ಮಿಂದ ತಪ್ಪುಗಳಾಗುವಂತೆ ಪ್ರೇರೇಪಿಸಬಹುದು. ಕೆಲವೊಮ್ಮೆ ಯೋಚಿಸಿ ಇಟ್ಟ ನಿರ್ಧಾರಗಳೇ ದಾರಿ ತಪ್ಪುವಾಗ ಇನ್ನು ನಾವು ತಿಳಿದು ಮಾಡಿದ ತಪ್ಪು ನಮ್ಮನ್ನು ಕಾಯುವುದಕ್ಕೆ ಹೇಗೆ ಸಾಧ್ಯ.
ವ್ಯಕ್ತಿ ಮತ್ತು ವ್ಯಕ್ತಿತ್ವ ಈ ಸಮಾಜದಲ್ಲಿ ಮನುಷ್ಯನೊಬ್ಬನಿಗೆ ಗೌರವವನ್ನು ಅಥವಾ ಕೆಟ್ಟವ ಎನ್ನುವ ಹಣೆ ಪಟ್ಟಿಯನ್ನು ತಂದುಕೊಡುವ ಬಹುಮುಖ್ಯ ಅಂಶ. ನಾವು ಸಮಾಜದಲ್ಲಿ ನಮ್ಮನ್ನು ಇತರರ ಮುಂದೆ ಹೇಗೆ ತೋರ್ಪಡಿಸಿಕೊಳ್ಳುತ್ತೇವೆಯೋ ಅದರ ಮೇಲೆಯೇ ನಮ್ಮ ಭವಿಷ್ಯವೂ ನಿಂತಿದೆ ಎನ್ನುವುದರ ನೆನಪು ಮನದಲ್ಲಿ ಇರಬೆಕು. ಹಾಗಾದಾಗಲಷ್ಟೇ ನಮ್ಮೊಂದಿಗೆ ಒಂದಷ್ಟು ಮನಸ್ಸುಗಳು ಹಾದಿ ನಡೆಯುವುದು, ನೋವಿನಲ್ಲಿ ಸಾಂತ್ವನ ಹೇಳುವುದು ಸಾಧ್ಯವಾಗುತ್ತದೆ. ದ್ದರಿಂದ ನಾವು ಮೊದಲು ನಮ್ಮ ವ್ಯಕ್ತಿತ್ವವನ್ನು ಉನ್ನತಿಗೇರಿಸಿಕೊಳ್ಳುವುದರತ್ತ ಹೆಜ್ಜೆ ಹಾಕಬೇಕಾಗಿದೆ.
ಎಲ್ಲರನ್ನೂ ಕಣ್ಣು ಮುಚ್ಚಿ ನಂಬದಿರಿ:
ನಂಬಿಕೆ ಬೇಕು. ಹಾಗೆಂದು ಅತಿಯಾದ ನಂಬಿಕೆ ಇಟ್ಟಲ್ಲಿ ಕೊನೆಗೊಮ್ಮೆ ಅದರಿಂದ ಮೋಸ ಹೋಗುವ ಸಂಭವಗಳನ್ನೂ ಅಲ್ಲಗಳೆಯುವಂತಿಲ್ಲ.. ಇದು ಮನುಷ್ಯರ ನಡುವಿನ ಸಂಬಂಧದ ವಿಚಾರಕ್ಕೆ ಹೆಚ್ಚು ಸೂಕ್ತ ಎನಿಸುತ್ತದೆ. ಎಲ್ಲಿ ನಾವು ಎಲ್ಲರನ್ನೂ ಎಲ್ಲವನ್ನೂ ಕಣ್ಣು ಮುಚ್ಚಿ ಹಿಂದೆ ಮುಂದೆ ಯಾವುದೇ ಯೋಚನೆ ಚಿಂತನೆಗಳನ್ನು ನಡೆಸದೇ ಹೋದಲ್ಲಿ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚು. ಕೆಲವೊಮ್ಮೆ ಇದು ನಮ್ಮ ಜೀವನಕ್ಕೆ ಕೊಳ್ಳಿ ಟ್ಟರೂ ಅಚ್ಚರಿ ಪಡುವಂತಿಲ್ಲ. ಹಾಗಾಗಿ ವಿಷಯ ಯಾವುದೇ ಇರಲಿ, ವ್ಯಕ್ತಿ ಯಾರೇ ಆಗಲಿ ಮುಂದಿನ ಆಗು ಹೋಗುಗಳನ್ನು ಸಂಭವನೀಯ ಅಪಾಯಗಳ ಬಗ್ಗೆ ಯೋಚಿಸದೇ ಯಾವುದೇ ಹೆಜ್ಜೆ ಇಡಬೇಡಿ. ಯಾರ ಮೇಲೆಯೂ ಅತಿ ವಿಶ್ವಾಸ ಬೇಡ. •
•ಭುವನ ಬಾಬು ಪುತ್ತೂರು