ಹೈನುಗಾರಿಕೆಗೆ ಮುಳುವಾಗಿರುವ ಕಾಲುಬಾಯಿ ರೋಗ
Team Udayavani, Sep 1, 2019, 5:46 AM IST
ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರ ಭೀಕರವಾದುದು. ಪ್ರಪಂಚದಲ್ಲಿ ಪ್ರತಿ ವರ್ಷ ಇದರಿಂದಾಗುವ ಹಾನಿ 20,000 ಕೋ.ರೂ.ಗಳಷ್ಟು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ರೋಗವನ್ನು ‘ಶತಮಾನದ ಮಹಾಮಾರಿ’ ಎಂದಿದೆ.
ಈ ರೋಗ ಶತಮಾನಗಳಷ್ಟು ಹಳೆಯದಾಗಿದ್ದು 1514ರಲ್ಲಿ ಮೊದಲು ಕಾಣಿಸಿಕೊಂಡಿತ್ತು. 1897ರಲ್ಲಿ ಫ್ರಾನ್ಸ್ನಲ್ಲಿ , 2001ರಲ್ಲಿ ಯುರೋಪಿನ ಹಲವು ರಾಷ್ಟ್ರಗಳಿಗೆ ಹರಡಿತ್ತು. ಕರ್ನಾಟಕದಲ್ಲಿ ಈ ರೋಗ ಇತ್ತೀಚೆಗೆ ಅಧಿಕವಾಗಿ ಕಾಣಿಸಿಕೊಂಡಿದೆ. ಉತ್ತರಾಂಚಲ ರಾಜ್ಯದ ಮುಕ್ತೇಶ್ವರದಲ್ಲಿ ಈ ರೋಗದ ಸಂಶೋಧನಾ ಕೇಂದ್ರ 1943ರಲ್ಲಿ ಸ್ಥಾಪಿತವಾಗಿದೆ. ಪ್ರತಿ ವರ್ಷ ಒಂದೊಂದು ಭಾಗದಲ್ಲಿ ಈ ರೋಗ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ.
ಹರಡುವ ವಿಧಾನ
1. ವೈರಾಣು ಜಾನುವಾರಿನ ಜೊಲ್ಲು, ವಿಸರ್ಜಿತ ದ್ರವಗಳು, ಹಾಲಿನ ಮೂಲಕ ಹೊರಸೂಸುತ್ತದೆ.
2. ವೈರಾಣು ಸುಲಭವಾಗಿ ತೇವಮಿಶ್ರಿತ ಗಾಳಿಯ ಮೂಲಕ ಸ್ಥಳದಿಂದ ಸ್ಥಳಕ್ಕೆ ಪಸರಿಸುತ್ತದೆ.
3. ರೋಗಪೀಡಿತ ಜಾನುವಾರುಗಳ ಸಂಪರ್ಕ, ಕೊಟ್ಟಿಗೆ ಕೆಲಸಗಾರರು, ಮೇವು, ನೀರು ಹಾಗೂ ಇತರ ಪ್ರಾಣಿಗಳಾದ ನಾಯಿ, ಬೆಕ್ಕುಗಳ ಚಲನವಲನಗಳ ಮೂಲಕ ಹರಡುತ್ತದೆ.
4. ರೋಗಪೀಡಿತ ಕುರಿ, ಹಂದಿಗಳಿಂದ ವೈರಾಣು ಅತ್ಯಧಿಕ ಪ್ರಮಾಣದಲ್ಲಿ ವಿಸರ್ಜಿತವಾಗಿ ರೋಗ ಹರಡಲು ಕಾರಣವಾಗುತ್ತದೆ.
5. ಮಿಶ್ರ ತಳಿ ರಾಸುಗಳು ಸ್ಥಳೀಯ ತಳಿಗಳಿಗಿಂತ ಅಧಿಕವಾಗಿ ರೋಗಕ್ಕೆ ತುತ್ತಾಗುತ್ತವೆೆ.
6. ರೋಗಪೀಡಿತ ಜಾನುವಾರುಗಳ ಸಾಗಾಣಿಕೆಯಿಂದ ಸ್ಥಳದಿಂದ ಸ್ಥಳಕ್ಕೆ ಹರಡುತ್ತದೆ.