ಸಿಟ್ಟಿನಿಂದಾದ ಎಡವಟ್ಟು, ಬದುಕಿನ ದಿಕ್ಕನ್ನೇ ಬದಲಿಸುವ ಕಲಿ
Team Udayavani, Jul 23, 2018, 3:42 PM IST
ಸಿಟ್ಟು ಮನುಷ್ಯನ ಸಹಜ ಗುಣಗಳಲ್ಲಿ ಒಂದಾಗಿದ್ದರೂ ಅತಿಯಾದರೆ ಅದರಿಂದ ಅನಾಹುತವೇ ಹೆಚ್ಚು. ಇಂತಹ ಒಂದು ವಿಭಿನ್ನ ವಿಷಯನ್ನಿಟ್ಟುಕೊಂಡು 2016ರಲ್ಲಿ ತೆರೆಗೆ ಬಂದ ಮಲಯಾಳಂ ಚಿತ್ರ ‘ಕಲಿ’. ಸಮೀರ್ ತಾಹೀರ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೀತಿ ಮತ್ತು ಸಿಟ್ಟು ಮನುಷ್ಯನ ಬದುಕಿನ ಎರಡು ಮುಖಗಳನ್ನು ಚಿತ್ರಿಸಲಾಗಿದೆ. ಸಮರ ಸವೇ ಜೀವನ ಎಂಬುದು ಈ ಚಿತ್ರದ ಸಾರ.
ಸಿಡುಕು ಸ್ವಭಾವದ ಗಂಡ ಹಾಗೂ ಎಲ್ಲವನ್ನು ಕ್ಷಮಿಸುವ ಹೆಂಡತಿಯ ಜೀವ ನದ ಬಗ್ಗೆ ಹೆಚ್ಚು ಅವಲಂಬಿತವಾಗಿರುವ ಚಿತ್ರವಿದು. ಗಂಡನ ಸಿಟ್ಟಿನಿಂದಾಗಿ ಅಪಾರ ಕಷ್ಟ, ನಷ್ಟ, ದುಃಖ ಅನುಭವಿಸುವ ಸನ್ನಿವೇಶಗಳು ಚಿತ್ರದಲ್ಲಿವೆ. ಸಣ್ಣ ವಯಸ್ಸಿನಲ್ಲೇ ಮುಂಗೋಪ ಬೆಳೆದುಕೊಂಡರೆ ಮುಂದಿನ ಜೀವನ ಕಷ್ಟಕರವಾಗಿರುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ಮನತಟ್ಟುವಂತೆ ವಿವರಿಸಲಾಗಿದೆ. ಕೆಟ್ಟ ಗುಣಗಳು ಮನುಷ್ಯ ಬೆಳೆದಂತೆ ಕಡಿಮೆಯಾಗಬೇಕು, ಬದಲಾಗಿ ಹೆಚ್ಚಾಗಬಾರದು. ಹೆಚ್ಚಾದರೆ ಅವರಿಗೆ ತೊಂದರೆಯಾಗುವುದಲ್ಲದೆ ಜತೆಯಲ್ಲಿದ್ದವರಿಗೂ ಕಷ್ಟ ಎನ್ನುವುದನ್ನು ಇಲ್ಲಿ ವಿವರಿಸಲಾಗುತ್ತದೆ.
ಸಿದ್ಧಾರ್ಥ ಮತ್ತು ಅಂಜಲಿ ಪ್ರೀತಿಸಿ ಮದುವೆಯಾಗಿರುತ್ತಾರೆ. ಸಿದ್ಧಾರ್ಥನಿಗೆ ಮೂಗಿನ ತುದಿಯಲ್ಲಿ ಕೋಪವಿದೆ ಎಂದು ತಿಳಿ ದಿದ್ದರೂ ಪ್ರೀತಿಗಾಗಿ ಆತನೊಂದಿಗೆ ಬದುಕುವ ನಿರ್ಧಾರ ಕೈಗೊಳ್ಳುತ್ತಾಳೆ. ಒಂದು ದಿನ ಕಚೇರಿಯಲ್ಲಿ ಜಗಳವಾಡಿಕೊಂಡು ಬಂದ ಸಿದ್ಧಾರ್ಥ ಹೆಂಡತಿಯೊಂದಿಗೆ ಆಕೆಯ ತವರು ಮನೆಗೆ ಹೋಗಲು ನಿರ್ಧರಿಸುತ್ತಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಲಾರಿಯೊಂದು ಅಡ್ಡಿಯಾಗುತ್ತದೆ. ಇದು ಅವರ ಪ್ರಯಾಣ ದಿಕ್ಕನ್ನೇ ಬದಲಿಸುತ್ತದೆ. ಸಿದ್ಧಾರ್ಥನ ಉದ್ದಟತನದಿಂದ ಇಬ್ಬರೂ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕುತ್ತಾರೆ.
ಸಿಟ್ಟು ಮತ್ತು ಅದರಿಂದಾಗುವ ಪರಿಣಾಮದ ಬಗ್ಗೆಯೇ ತಿಳಿಸುವ ಈ ಚಿತ್ರ ಸಿಟ್ಟಿನಿಂದಾಗಿ ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅದು ಭಾರಿ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನೇ ಚಿತ್ರದ ಮೂಲಕ ವಿವರಿಸುವ ನಿರ್ದೇಶಕರು ಸಿಟ್ಟು ಕಡಿಮೆ ಮಾಡಿ ಕೊಂಡರೆ ಬದುಕು ಸುಂದರವಾಗಿರುತ್ತದೆ ಎನ್ನುತ್ತಾರೆ.
ಭರತ್ ರಾಜ್ ಕರ್ತಡ್ಕ