“ಮಹಾತ್ಮ’ದ ಭಾರಕ್ಕೆ ಚಡಪಡಿಸಿದ ಮಹಾತ್ಮ
Team Udayavani, Sep 30, 2019, 5:30 AM IST
ಗಾಂಧೀಜಿಯವರನ್ನು ಕರೆಯುವಾಗ “ಮಹಾತ್ಮ’ ಎಂಬ ವಿಶೇಷಣ ಸೇರಿಸಿ ಕರೆಯುವುದು ಲೋಕರೂಢಿ.
ಲಭ್ಯ ಆಕರಗಳ ಪ್ರಕಾರ ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದ ಪ್ರಥಮ ವ್ಯಕ್ತಿ ವಜ್ರ ಉದ್ಯಮಿ, ವೈದ್ಯ, ನ್ಯಾಯವಾದಿ ಈ ವಿಶಿಷ್ಟ ವೃತ್ತಿ ಸಂಯೋಜನೆಯ ಡಾ| ಪ್ರಾಣಜೀವನ್ ಜಗಜೀವನದಾಸ್ ಮೆಹ್ತಾ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಮಾಡುತ್ತಿದ್ದ ಕೆಲಸ ಗಳನ್ನು ಕಂಡು ಅವರು 1909ರಲ್ಲಿ ಗೋಪಾಲಕೃಷ್ಣ ಗೋಖಲೆಗೆ ಬರೆದ ಪತ್ರದಲ್ಲಿ ಹೀಗೆ ಉಲ್ಲೇಖೀಸಿದ್ದರು.
1915ರಲ್ಲಿ ಗಾಂಧೀಜಿ ಭಾರತಕ್ಕೆ ಬಂದ ಕೂಡಲೆ ಗುಜರಾತಿನ ಗೋಂಡಾಲದ ಭುವನೇಶ್ವರಿ ಪೀಠದ ಪೀಠಾಧಿಪತಿ ಮಹಾತ್ಮ ಎಂದು ಕರೆದಿದ್ದರಂತೆ. ಇದಕ್ಕೂ ಮುನ್ನ ಗುಜರಾತಿನ ಜೇಟು³ರದ ಭಗವಾನ್ಜಿ ಮೆಹ್ತಾ ಗಾಂಧೀಜಿಯನ್ನು ಈ ಬಿರುದಿನೊಂದಿಗೆ ಗೌರವಿಸಿ ದ್ದರು. 1915ರಲ್ಲಿ ಹರಿದ್ವಾರ ಹೃಷೀಕೇಶದ ಕಾಂಗ್ರೀ ಗುರುಕುಲದ ಸ್ವಾಮೀ ಶ್ರದ್ಧಾನಂದರು ಮಹಾತ್ಮ ಎಂದು ಕರೆದರು. 1915ರಲ್ಲಿ ಕೋಲ್ಕತ್ತಾದ ಶಾಂತಿನಿ ಕೇತನದಲ್ಲಿ ರವೀಂದ್ರನಾಥ ಠಾಗೋರರು ಮಹಾತ್ಮ ಬಿರುದನ್ನು ನೀಡಿದ್ದು ಲೋಕ ಪ್ರಸಿದ್ಧವಾಯಿತು. 1920-22ರ ಚಳವಳಿಯ ಹೊತ್ತಿಗೆ ಕವಿಗಳು, ಜನಸಮೂಹ ಮಹಾತ್ಮ ಎಂದು ಬಣ್ಣಿಸಿತು.
ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಮೂಲದವರು ಗಾಂಧೀಜಿಯನ್ನು “ಕರ್ಮವೀರ’ ಬಿರುದಿನಿಂದ ಗೌರವಿಸಿದ್ದರು. 1944ರಲ್ಲಿ ಅಝಾದ್ ಹಿಂದ್ ರೇಡಿಯೋದ ಮೂಲಕ ಮಾತಾಡಿದ್ದ ನೇತಾಜಿ ಸುಭಾಶ್ಚಂದ್ರ ಭೋಸ್ ಅವರು ಗಾಂಧೀಜಿಯನ್ನು “ರಾಷ್ಟ್ರಪಿತ’ ಎಂದು ಕರೆದಿದ್ದರು.
ಸಾಧುವೇ? ದೇವನೆ? ಸಾಮಾನ್ಯನೆ?
ಗಾಂಧಿಯವರನ್ನು ಕೆಲವರು ಸಾಧು, ಸಂತ ಎಂದು ಕರೆದಾಗ “ನಾನು ಸಾಧುವೂ ಅಲ್ಲ, ಪಾಪಿಯೂ ಅಲ್ಲ ನಾನೊಬ್ಬ ಸಾಮಾನ್ಯ ಮನುಷ್ಯ’ ಎಂದು ಸಮ ಜಾ ಯಿಷಿ ಕೊಟ್ಟಿದ್ದರು. ಗಾಂಧಿ ಗುಜರಾತಿನವರಾದ ಕಾರಣ, ದ್ವಾರಕೆಯಿಂದಾಗಿ ಕೃಷ್ಣನ ಅವತಾರ ಎಂದು ಕರೆದದ್ದೂ ಇದೆ. ಆಗ ಗಾಂಧಿ “ನನ್ನನ್ನು ಶ್ರೀ ಕೃಷ್ಣನ ಅವತಾರ ಎಂದು ತಿಳಿಯುವುದು ದೇವನಿಂದೆ. ಅನೇಕ ಸೇವಕರಲ್ಲಿ ನಾನೊಬ್ಬ ಸೇವಕ. ಸೇವಕನ ಮಹಿಮೆ ಬೆಳೆಸುವುದರಿಂದ ಕಾರ್ಯದ ಹಾನಿ ಆಗುತ್ತೆ’ ಎಂದಿದ್ದರು.
ಅವರೆಂದೂ ಬಿರುದುಗಳೊಂದಿಗೆ ಸಮೀಕರಿಸಿ ಕೊಂಡು ಎದೆಯುಬ್ಬಿಸಿಕೊಂಡದ್ದು ಇಲ್ಲ. “ಮಹಾತ್ಮ ಪದಕ್ಕಿಂತ “ಸತ್ಯ’ವು ನನಗೆ ಕೋಟಿ ಪಾಲು ಪ್ರಿಯ. ನನ್ನ ಶಕ್ತಿಯ ಮಿತಿ ಮೇರೆಗಳನ್ನು ಚೆನ್ನಾಗಿ ಬÇÉೆ. ನಾನೊಬ್ಬ ಮಹಾತ್ಮನೆಂದು ಅನ್ನಿಸುವುದೇ ಇಲ್ಲ. ಅದು ನನ್ನ ಜೀವಿತದ ನಶ್ವರ ಭಾಗ. ನನ್ನ ಜೀವನದ ನಿಜವಾದ ತಿರುಳು, ಸನಾತನ ಅಂಶವೆಂದರೆ ಸತ್ಯ, ಅಹಿಂಸೆ, ಬ್ರಹ್ಮಚರ್ಯದ ಬಗ್ಗೆ ಇರುವ ಆಗ್ರಹ. ಅವು ನನ್ನಲ್ಲಿ ಅಲ್ಪಾಂಶದಲ್ಲಿಯೆ ಇರಬಹುದು. ಆದರೂ ಅದು ತಿರಸ್ಕರಣೀಯವಲ್ಲ. ಸತ್ಯಾಗ್ರಹವೇ ನನ್ನ ಸರ್ವಸ್ವ.’ ಎಂದು ಹೇಳಿಕೊಂಡಿದ್ದಾರೆ.
“ಸತ್ಯಾಗ್ರಹ’ದ ಮಾನ ಉಳಿಯಿತು!
“ಸತ್ಯಾಗ್ರಹ’ ಶಬ್ದ “ಸತ್ಯ’ಕ್ಕಾಗಿ “ಆಗ್ರಹ’ ಎಂಬ ಸಂಯೋಜನೆಯಿಂದ ಬಂತು. ಇತ್ತೀಚಿಗೆ ಕೆಲವರು ಸ್ವಯಂ ನಾಚಿಕೊಂಡೋ ಏನೋ ಸತ್ಯಾಗ್ರಹದ ಬದಲು ಧರಣಿ, ಪ್ರತಿಭಟನೆ, ಪಿಕೆಟಿಂಗ್ ಇತ್ಯಾದಿ ಶಬ್ದಗಳನ್ನು ಚಲಾವಣೆಗೆ ತಂದು “ಸತ್ಯಾಗ್ರಹ’ದ ಮಾನ ಉಳಿಸಲು ಯತ್ನಿಸುತ್ತಿದ್ದಾರೆ.
ಏರುತ್ತಿರುವ ಬಿರುದುಬಾವಲಿಗಳು
ಗಾಂಧೀಜಿಯವರಿಗೆ ಬಿರುದುಗಳು ಭಾರವಾದರೆ ಈಗ ಅನೇಕರಿಗೆ ಸಿಗುವ ಬಿರುದುಗಳು ಆಪ್ಯಾಯ ವಾಗು ತ್ತಿವೆ. ಅವಾರ್ಡುಗಳಿಗೆ ಲೆಕ್ಕವೇ ಇಲ್ಲ, ಅಂತೆಯೇ ಡಾಕ್ಟರೇಟ್ಗೂ… ಹೌಹಾರುವಷ್ಟು ಡಾಕ್ಟ ರೇಟ್ ಪದವೀ ಧರರ ಸಂಖ್ಯೆ ಏರುತ್ತಿವೆ ಎಂದು ವಿಶ್ಲೇಷಣೆಗಳು ತಿಳಿಸು ತ್ತಿರ ಬೇಕಾದರೆ,ಅವಾರ್ಡುಗಳ ಪರಿಸ್ಥಿತಿ ಹೇಗಿರಬೇಡ?
ಇಂತಹವರ ಸಂಖ್ಯೆ ವಿರಳ
ಡಾಕ್ಟರೇಟ್ ಪದವಿ ಇದ್ದರೂ ಅದನ್ನು ತೋರ ಗೊಡದವರೂ ಇದ್ದಾರೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ, ಮಣಿಪಾಲ ಕೆಎಂಸಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ| ರವೀಂದ್ರನಾಥ ಶ್ಯಾನು ಭಾಗ್ ಅವರು ಬರೆದ ವಿವಿಧ ಪುಸ್ತಕಗಳಲ್ಲಿ ಲೇಖಕರ ಹೆಸರಿನ ಹಿಂದೆ “ಡಾ|’ ವಿಶೇಷಣವಿಲ್ಲ. “ಡಾಕ್ಟರ್ ಎಂದು ಹೇಳಬೇಕಾದ್ದು ನಾನಲ್ಲ. ಮೂರನೆಯ ವ್ಯಕ್ತಿ ಹೇಳಬೇಕು. ವಿದೇಶಗಳಲ್ಲಿ ವೈದ್ಯರ ಹೆಸರ ಹಿಂದೆ ಡಾಕ್ಟರ್ ಎಂದು ಬಳಸುವಂತಿಲ್ಲ. ಹೆಸರಿನ ಮುಂದೆ ಶೈಕ್ಷಣಿಕ ಪದವಿಗಳನ್ನು ಮಾತ್ರ ಹಾಕಿ ಕೊಳ್ಳಬೇಕು. ಡಾಕ್ಟರ್ ಎಂದರೆ “ಮಾಸ್ಟರ್’, “ಪರಿಣತ’ ಎಂದು. ಡಾ|ಶಿವರಾಮ ಕಾರಂತರು ಎಲ್ಲಿಯೂ “ಡಾ|’ ಎಂದು ಸೇರಿಸಿ ಕೊಳ್ಳು ತ್ತಿರಲಿಲ್ಲ’ ಎಂದು ಡಾ.ಶ್ಯಾನು ಭಾಗ್ ಉಲ್ಲೇಖೀಸುತ್ತಾರೆ.
ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ಎರಡು ವಿ.ವಿ.ಗಳು ಗೌರವ ಡಾಕ್ಟರೇಟ್ ನೀಡಿವೆ. ಅವರು ಲೆಟರ್ಹೆಡ್ನಲ್ಲಾಗಲೀ, ಅವರನ್ನು ಕರೆಸಿ ಕೊಳ್ಳುವಾಗಲೀ “ಡಾ|’ ವಿಶೇಷಣವನ್ನು ಬಳಸುವುದನ್ನು ಕಾಣುವುದಿಲ್ಲ.
ಹಲವು ಸಂಶೋಧನ ಕೃತಿಗಳನ್ನು ಕೊಟ್ಟ ಹಂಪಿ ಕನ್ನಡ ವಿ.ವಿ. ಹಿರಿಯ ಪ್ರಾಧ್ಯಾಪಕ ಡಾ|ರಹಮತ್ ತರೀಕೆರೆ ಅವರು ಪುಸ್ತಕಗಳಲ್ಲಿ “ಡಾ|’ ವಿಶೇಷಣವನ್ನು ಬಳಸಿಕೊಂಡಿಲ್ಲ. “ನಾನು ಪುಸ್ತಕಗಳಲ್ಲಿ, ಲೇಖನಗಳಲ್ಲಿ “ಡಾ|’ ಶಬ್ದ ಹಾಕಿಕೊಳ್ಳುವುದಿಲ್ಲ. ಲೇಖಕನ ಶಕ್ತಿಯಿಂದ ಲೇಖನಕ್ಕೆ ಶಕ್ತಿ ಬರುತ್ತದೆ ವಿನಾ ಡಾಕ್ಟರೇಟ್ ಪದವಿಯಿಂದ ಲೇಖನಕ್ಕೆ ಶಕ್ತಿ ಬರುತ್ತದೋ’ ಎಂದು ಪ್ರಶ್ನಿಸುತ್ತಾರೆ. ಈಗ ಡಾಕ್ಟರೇಟ್ ಪದವಿ ಖರೀದಿಸುವ ವಸ್ತು ಎಂಬ ಮಟ್ಟಕ್ಕೆ ಇಳಿದಿರುವಾಗಲೂ ಇಂತಹ ವಿಶೇಷಣಗಳನ್ನು ನಿರ್ಲಿಪ್ತವಾಗಿ ಕಾಣುವವರೂ ಇದ್ದಾರೆನ್ನುವುದು ವಿಶೇಷ.
“ನನಗೆ ಗುಂಡಿಕ್ಕಿದರೆ…’
ನನ್ನನ್ನು ಕೊಲ್ಲಬೇಕೆನ್ನುವ ಪ್ರಾಣಘಾತಕ ಪ್ರಯತ್ನಗಳು ಹಲವು ಆಗಿವೆ. ಕೊಲ್ಲಲು ಬಂದವರು ಪಶ್ಚಾತ್ತಾಪಪಟ್ಟಿರುವರು. ಆದರೆ ನಾನೊಬ್ಬ ಖಳನೆಂದು ಭಾವಿಸಿ ಯಾರಾದರೂ ಈಗ ಗುಂಡಿಕ್ಕಿದರೆ ಅವರು ತಮ್ಮ ಕಲ್ಪನೆಯಲ್ಲಿನ ಖಳನನ್ನು ಕೊಂದಂತಾಗುವುದೇ ಹೊರತು ನಿಜವಾದ ಗಾಂಧಿಯನ್ನಲ್ಲ ಎಂದು ಗಾಂಧಿ ಹೇಳಿಕೊಂಡಿದ್ದರು. ಗಾಂಧೀಜಿಯವರನ್ನು ಗೋಡ್ಸೆ ಕೊಲ್ಲುವ ಮೂಲಕ ಅವರ ಆತ್ಮಹತ್ಯೆಯನ್ನು ತಪ್ಪಿಸಿದ ಎಂದು ಡಾ|ಶಿವರಾಮ ಕಾರಂತರು “ಸ್ಮತಿಪಟಲ’ದಲ್ಲಿ ಉಲ್ಲೇಖೀಸಿದ್ದಾರೆ. ಇದು ಆಗಿನ ರಾಜಕೀಯ ವಿದ್ಯಮಾನಗಳನ್ನು ಕಂಡ ಕಾರಂತಜ್ಜನ ಅನಿಸಿಕೆಯಾಗಿತ್ತು ಎಂದು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಮಾಲಿನಿ ಮಲ್ಯ ಬೆಟ್ಟು ಮಾಡುತ್ತಾರೆ.
– ಮಟಪಾಡಿ ಕುಮಾರಸ್ವಾಮಿ