ಕಲ್ಲು ಬಂಡೆ ಮೇಲೆ ಭತ್ತದ ಕೃಷಿ ಮಾಡಿದ ನಕ್ರೆಯ ಕೃಷಿಕ
ವರ್ಷಕ್ಕೆ ನಾಲ್ಕು ಕ್ವಿಂಟಾಲ್ ಅಕ್ಕಿ ಉತ್ಪಾದನೆ ಮಾಡಿ ಇತರರಿಗೆ ಮಾದರಿಯಾದ ಸಾಧು ನಕ್ರೆ
Team Udayavani, Aug 4, 2019, 5:56 AM IST
ಕೃಷಿ ಕಾರ್ಯ ಎನ್ನುವಾಗಲೇ ಮೂಗು ಮುರಿ ಯುವ ಮಂದಿ ಒಂದು ಕಡೆ. ಫಲವತ್ತಾದ ಕೃಷಿ ಭೂಮಿಯಿದ್ದರೂ ಕೃಷಿ ಮಾಡದೇ ಹಡಿಲು ಬಿಟ್ಟ ಬಳಗ ಇನ್ನೊಂದು ಕಡೆ. ಇಂಥವರ ಮಧ್ಯೆ ಇಲ್ಲೊಬ್ಬ ರೈತ ಬಂಡೆಯ ಮೇಲೆ ಭತ್ತದ ಕೃಷಿ ಮಾಡಿ ಗಮನ ಸೆಳೆದಿದ್ದಾರೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಕ್ರೆ ನಿವಾಸಿ ಸಾಧು (55) ಇಂಥ ಅಪ ರೂಪದ ಕೃಷಿಕ. ತನ್ನಲ್ಲಿರುವ 1.80 ಎಕ್ರೆ ಭೂಮಿಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುತ್ತಿರುವ ಇವರು ಬಂಡೆಕಲ್ಲು ಮೇಲೆಯೂ ಭತ್ತ ಬೇಸಾಯ ಮಾಡುತ್ತಿರುವುದೇ ವಿಶೇಷ. ಕಾರ್ಕಳದಲ್ಲಿ ಎತ್ತ ನೋಡಿದರತ್ತ ಕಾಣಸಿಗುವುದೇ ಹಾಸು ಬಂಡೆಕಲ್ಲು ಗಳು. ಇಂಥ ಬಂಡೆಕಲ್ಲ ಮೇಲೂ ಬೇಸಾಯ ಮಾಡಬಹುದೆಂದು ಸಾಧಿಸಿ ಕೃಷಿ ಕುರಿತು ನಿರಾಸಕ್ತಿ ಹೊಂದುವವರಿಗೆ ಇವರು ಪ್ರೇರಣೆ.
ಇತಿಹಾಸ ಪ್ರಸಿದ್ಧ ನಕ್ರೆಕಲ್ಲು ಬುಡಭಾಗದಲ್ಲಿರುವ ಒಂಟೆಚಾರು ಎಂಬಲ್ಲಿ ವಾಸವಾಗಿರುವ ಸಾಧು ಕೃಷಿಕಾರ್ಯದಲ್ಲಿ ನೆಮ್ಮದಿ ಕಂಡವರು. ಹತ್ತು ಅಡಿ ಆಳದಬಾವಿಯಲ್ಲಿ ವರ್ಷವಿಡೀ ಸಾಕಾಗುವಷ್ಟು ಜಲಧಾರೆಯಿರುವುದು ಅವರ ಪಾಲಿಗೆ ವರವಾಗಿದೆ.
ಮಿಶ್ರ ಬೆಳೆಗಾರ
ಸಾಧು ಅವರು ಮಿಶ್ರಬೆಳೆ ಬೆಳೆಯುತ್ತಾರೆ. ಅಡಿಕೆ, ತೆಂಗು ಮಧ್ಯೆ ಬಾಳೆ ಗಿಡ, ಕರಿಮೆಣಸು ಬೆಳೆದಿದ್ದಾರೆ. ಗೇರು ಗಿಡ ಇದೆ. ಬಾಳೆಕಾಯಿ ಮತ್ತು ಬಾಳೆಎಲೆ ಯನ್ನೂ ಮಾರಾಟ ಮಾಡುತ್ತಾರೆ. ಮಳೆಗಾಲ ಮತ್ತು ಬೇಸಗೆಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಹೀಗೆ ಕೃಷಿಯಲ್ಲೇ ಖುಷಿ ಕಾಣುತ್ತಿದೆ ಸಾಧು ಕುಟುಂಬ.
ಕಠಿನ ಪರಿಶ್ರಮಿ
ಸ್ವಂತ ಶ್ರಮದಿಂದಲೇ ಬಂಡೆ ಕಲ್ಲುಗಳಿಂದ ಕೂಡಿದ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ತನ್ನ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಾರೆ.
ಬಂಡೆ ಮೇಲೆ ಕೃಷಿ ವಿಧಾನ
ಸುಮಾರು 55 ಸೆಂಟ್ಸ್ ಭೂಮಿ ಅಕ್ಷರಶಃ ಬಂಡೆಯಿಂದ ಆವೃತವಾಗಿದೆ. ಬಂಡೆಯಲ್ಲಿನ ಏರುತಗ್ಗುಗಳನ್ನು ಸರಿಪಡಿಸಿ, ನಾಲ್ಕು ಅಡಿಯಷ್ಟು ಮಣ್ಣನ್ನು ಹೊರಗಿನಿಂದ ತಂದು ತುಂಬಿಸಲಾಗಿದೆ. ಮಳೆಗಾಲ ಆರಂಭವಾಗುತ್ತಲೇ ಯಂತ್ರದ ಮೂಲಕ ಗದ್ದೆಯನ್ನು ಉಳುಮೆ ಮಾಡಿ ಭತ್ತ ಬೇಸಾಯ ಮಾಡುತ್ತಾರೆ. ವರ್ಷಕ್ಕೆ ನಾಲ್ಕು ಕ್ವಿಂಟಾಲ್ ಅಕ್ಕಿ ದೊರೆಯುತ್ತಿದೆ.
ಮನಸ್ಸಿದ್ದರೆಕೃಷಿಯಲ್ಲೂ ಲಾಭ ಗಳಿಸಬಹುದು
ದುಡಿಯುವ ಮನಸ್ಸಿದ್ದರೆ ಕೃಷಿಯಲ್ಲೂ ಲಾಭ ಗಳಿಸಬಹುದು. ಕಲ್ಲುಗಳಿಂದ ಕೂಡಿದ ಬರಡಾದ ಭೂಮಿಯನ್ನು ಕೃಷಿ ಯೋಗ್ಯ ಭೂಮಿ ಯನ್ನಾಗಿ ಪರಿವರ್ತಿಸಿದೆ ಎನ್ನುವ ಹೆಮ್ಮೆಯಿದೆ. ನಮಗೆ ಬೇಕಾದ ಆಹಾರವನ್ನು ನಾವೇ ಉತ್ಪಾದಿಸು ತ್ತಿರುವುದು ಸಂತಸವನ್ನುಂಟು ಮಾಡಿದೆ.
-ಸಾಧು ನಕ್ರೆ,ಕೃಷಿಕ
••ರಾಮಚಂದ್ರ ಬರೆಪ್ಪಾಡಿ