ಡ್ರೈನೇಜ್ ಸಮಸ್ಯೆಗೆ ತತ್ಕ್ಷಣ ಪರಿಹಾರ ಒದಗಿಸಿ
Team Udayavani, Jul 14, 2019, 5:26 AM IST
ಸಾಂದರ್ಭಿಕ ಚಿತ್ರ
ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಮಂಗಳೂರು ನಗರ ಸ್ಮಾರ್ಟ್ ಸಿಟಿ, ಸ್ವತ್ಛ ಮಂಗಳೂರು ಎಂದೆಲ್ಲ ಕರೆಸಿಕೊಳ್ಳುತ್ತಿದೆ. ಆದರೆ ಮಂಗಳೂರು ಜನರು ಪ್ರತಿದಿನ ಒಂದಲ್ಲ ಒಂದು ಸಮಸ್ಯೆಗಳ ನಡುವೆ ಬದುಕಬೇಕಾದ ಅನಿರ್ವಾಯ ಬಂದಿದೆ. ರಸ್ತೆಯಲ್ಲಿ ಹರಿಯುವ ಚರಂಡಿ ನೀರು, ಅಲ್ಲಲ್ಲಿ ಹೊಂಡಗಳಿಂದ ಕೂಡಿರುವ ರಸ್ತೆಗಳು, ಮಳೆಗಾಲದಲ್ಲಿ ರಸ್ತೆಯಲ್ಲೇ ಹರಿಯುವ ನೀರು ಹೀಗೆ ಹಲವಾರ ಸಮಸ್ಯೆಗಳನ್ನು ಮಂಗಳೂರಿನ ಜನತೆ ಅನುಭವಿಸುತ್ತಿದ್ದಾರೆ. ಇವುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಯಾವುದೇ ಕ್ರಮಕೈಗೊಳ್ಳದೇ ಇರುವುದು ಜನರಲ್ಲಿ ಬೇಸರ ತರಿಸಿದೆ. ಮಂಗಳೂರಿನ ಯೆಯ್ನಾಡಿಯಿಂದ ಕೆಪಿಟಿಗೆ ಹೋಗುವ ದಾರಿಯಲ್ಲಿರುವ ಒಳಚರಂಡಿಯ ನೀರು ಮಳೆ ಬರುವ ಸಂದರ್ಭದಲ್ಲಿ ರಸ್ತೆಯಲ್ಲೇ ಹರಿದು ಅತ್ತ ಇತ್ತ ಓಡಾಡುವ ಜನರಿಗೆ ಸಮಸ್ಯೆಯನ್ನುಂಟು ಮಾಡಿದೆ.
ಗಬ್ಬು ವಾಸನೆಯಿಂದ ಕೂಡಿರುವ ಚರಂಡಿ ನೀರು ಹಲವು ರೋಗಗಳಿಗೆ ಕಾರಣವಾಗುವ ಭಯವನ್ನು ಜನರಲ್ಲಿ ಸೃಷ್ಟಿಸಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಈ ಕಲುಷಿತ ನೀರು ಪಾದಾಚಾರಿಗಳ ಮೈಮೇಲೆ ಬೀಳುತ್ತಿವೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವವರಿಗೆ ಈ ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತತ್ಕ್ಷಣ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಇಲ್ಲವಾದಲ್ಲಿ ಜನಸಾಮಾನ್ಯರಿಗೆ ಸಾಂಕ್ರಮಿಕ ರೋಗಗಳು ಬರುವ ಸಾಧ್ಯತೆವಿದೆ.
-ಬಾಲಕೃಷ್ಣ ಪೂಜಾರಿ, ಕದ್ರಿ