ಕಾಲಿನ ಅಂದ ಹೆಚ್ಚಿಸುವ ಸಿಂಪಲ್ ಆ್ಯಂಕ್ಲೆಟ್
Team Udayavani, Nov 1, 2019, 5:05 AM IST
ಶುಭ ಸಮಾರಂಭಗಳಲ್ಲಿ, ಮದುವೆ, ವಿಶೇಷ ಕಾರ್ಯಕ್ರಮಗಳಲ್ಲಿ ಹೆಂಗಸರು ತಾವು ಅಂದ- ಚೆಂದವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಬಯಸುತ್ತಾರೆ. ಅದಕ್ಕಾಗಿ ಪ್ರಸ್ತುತವಾಗಿ ವಿಶೇಷತೆಯಿರುವ ಕಡೆ ಹೆಚ್ಚು ಗಮನಹರಿಸುತ್ತಾರೆ. ಹೀಗಾಗಿ ಇಂದು ಮಾರುಕಟ್ಟೆಯಲ್ಲಿ ಕೂಡ ಹಲವಾರು ವೈವಿಧ್ಯಮಯವಾದ ಸೌಂದರ್ಯ ಹೆಚ್ಚಿಸುವ ಆಭರಣಗಳು, ಒಡವೆಗಳು, ಸೀರೆ, ಡ್ರೆಸ್ಗಳನ್ನು ನೋಡಬಹುದು. ಏತನ್ಮಧ್ಯೆ ಆ್ಯಂಕ್ಲೆಟ್(ಕಾಲ್ಗೆಜ್ಜೆ) ಕೂಡ ಹೆಂಗಸರಿಗೆ ಹೆಚ್ಚು ಇಷ್ಟವಾಗುವ ಆಭರಣವಾಗಿದೆ.
ಆ್ಯಂಕ್ಲೆಟ್ ಅಥವಾ ಕಾಲ್ಗೆಜ್ಜೆ ಇದು ಅಪ್ಪಟ ದೇಶಿರೂಪದ ಆಭರಣವಾಗಿದೆ. ಆ್ಯಂಕ್ಲೆಟ್ ತಯಾರಿಕೆಯಲ್ಲಿ ಕಲಾವಿದನ ಕೈಚಳಕವೇ ಮುಖ್ಯವಾಗುತ್ತದೆ. ಸದ್ಯದಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿ ಈ ಕಾಲ್ಗೆಜ್ಜೆ ಬಹುಬೇಡಿಕೆಯಿದೆ. ಹಾಗಾಗಿ ಈ ಕಾಲ್ಗೆಜ್ಜೆಯ ವೈಶಿಷ್ಟ್ಯದ ಬಗ್ಗೆ ತಿಳಿಯುವುದು ಕೂಡ ಅಷ್ಟೇ ಮುಖ್ಯ.
ಈ ಸಿಂಗಲ್ ಆ್ಯಂಕ್ಲೆಟ್ ಹೆಸರೇ ಸೂಚಿಸುವಂತೆ ಒಂದೇ ಕಾಲಿಗೆ ಧರಿಸಬಹುದಾದ ಸಿಂಪಲ್ ಮತ್ತು ಸ್ಟೈಲಿಶ್ ಗೆಜ್ಜೆಯಾಗಿದೆ. ಸೂರ್ಯ, ಚಂದ್ರ, ಹೂ, ಎಲೆ, ಚಿಟ್ಟೆ, ಡಾಲ್ಫಿನ್ ಹೀಗೆ ನಾನಾಕೃತಿಯಲ್ಲಿ ಈ ಗೆಜ್ಜೆ ರೂಪ ಪಡೆಯುತ್ತದೆ. ಚಿನ್ನ, ಬೆಳ್ಳಿ, ತಾಮ್ರ, ನಿಕ್ಕೆಲ್, ಹಿತ್ತಾಳೆ ಅಷ್ಟೇ ಯಾಕೆ ಬರೀ ದಾರದಲ್ಲೂ ಈ ಕಾಲ್ಗೆಜ್ಜೆ ಲಭ್ಯವಾಗುತ್ತದೆ. ಇದನ್ನು ಯಾವುದೇ ವಯಸ್ಸಿನ ಮಿತಿಯಿಲ್ಲದೇ ಧರಿಸುತ್ತಾರೆ.
ವೈವಿಧ್ಯಮಯವಾದ ಆ್ಯಂಕ್ಲೆಟ್
ಯುವತಿಯರು ಸಿಂಗಲ್ ಆ್ಯಂಕ್ಲೆಟ್ನ್ನು ಜೀನ್ಸ್ ಪ್ಯಾಂಟ್, ಲೆಹಂಗಾ, ಸಿಂಪಲ್ ಕುರ್ತಿ, ಶಾರ್ಟ್ ಪ್ಯಾಂಟ್ನ ಜತೆ ಇದನ್ನು ಧರಿಸುತ್ತಾರೆ. ಸಿಂಗಲ್ ಆ್ಯಂಕ್ಲೆಟ್ನ ಇನ್ನೊಂದು ವೈಶಿಷ್ಟéಎಂದರೆ ಇದರಲ್ಲೂ ನಾನಾ ಪ್ರಕಾರಗಳನ್ನು ಕಾಣಬಹುದು. ನಮ್ಮ ಪ್ರೀತಿ ಪಾತ್ರರಾದವರ ಹೆಸರನ್ನು ಹೊಂದಿಕೊಂಡಂತೆ (ಲವ್, ಅಮ್ಮ) ಎಂಬ ಅಕ್ಷರಗಳ ಲೆಟರ್ ಆ್ಯಂಕ್ಲೆಟ್, ಹಗುರಭಾರದ ಸ್ಟೈಲಿಶ್ ಆ್ಯಂಡ್ ಸಿಂಪಲ್ ಲುಕ್ ನೀಡುವ ಚಾರ್ಮ್ ಆ್ಯಂಕ್ಲೆಟ್, ಕಲರ್ಫುಲ್ ಮಣಿಗಳನ್ನು ಮನೆಯಲ್ಲಿಯೇ ಪೋಣಿಸಲು ಸಾಧ್ಯವಿರುವ ಸ್ಟ್ರಿಂಗ್ ಆ್ಯಂಕ್ಲೆಟ್, ಹವಳ ಮಣಿಗಳಿಂದಲೇ ಕಾಲಿಗೆ ತಂಪಿನ ಅನುಭವ ನೀಡುವ ಕ್ರಿಸ್ಟೆಲ್ ಆ್ಯಂಕ್ಲೆಟ್ ಹೀಗೆ ನಾನಾ ಪ್ರಕಾರಗಳಲ್ಲಿ ಸಿಂಗಲ್ ಆ್ಯಂಕ್ಲೇಟ್ನ್ನು ಕಾಣಬಹುದು.
ಜೀನ್ಸ್ ಪ್ಯಾಂಟ್ ಜತೆ ಅಥವಾ ಸಿಂಪಲ್ ಕುರ್ತಿಯೊಂದಿಗೆ ಸಿಂಗಲ್ ಆ್ಯಂಕ್ಲೆಟ್ ಅನ್ನು ಧರಿಸಲಿಚ್ಛಿಸುವವರು ಕಾಲ ಬೆರಳಿಗೆ ವಾಟರ್ ಕಲರ್ ನೆಲ್ ಪಾಲಿಶ್(ನೆಲ್ಪಾಲಿಶ್ ಶೈನರ್) ಹಾಕಬೇಕು. ಇದರೊಂದಿಗೆ ಸಿಂಪಲ್ ಚಪ್ಪಲ್ನ್ನು ಧರಿಸಿದರೆ ಆ್ಯಂಕ್ಲೆಟ್ ಗ್ರ್ಯಾಂಡ್ ಲುಕ್ ನೀಡಲು ಉಪಯುಕ್ತವಾಗಿದೆ. ಸಾಮಾನ್ಯವಾಗಿ ಸಿಂಪಲ್ ಸೀರೆ ಉಡುವವರು ಸರಳವಾಗಿ ಕಾಣಲು ಇಚ್ಛಿಸುವವರು ಇಂತಹ ಕಾಲ್ಗೆಜ್ಜೆಯ ಮೊರೆ ಹೋಗುತ್ತಾರೆ. ಅದರಂತೆ ಸಾಂಪ್ರದಾಯಿಕ ಜರತಾರಿ ಸೀರೆ ಮತ್ತು ಲೆಹಂಗಾಗಳಿಗೆ ಸಿಂಗಲ್ ಕಾಲ್ಗೆಜ್ಜೆ ಅಷ್ಟಾಗಿ ಹೊಂದಾಣಿಕೆಯಾಗಲಾರದು.
ನಮ್ಮ ಸಂಪ್ರದಾಯದ ಪ್ರತೀಕದಂತಿರುವ ಕಾಲ್ಗೆಜ್ಜೆ ಆಧುನಿಕ ಕಾಲಘಟ್ಟದಲ್ಲಿ ಇನ್ನೆಲ್ಲೋ ಮರೆಯಾಯಿತು ಅಂದುಕೊಳ್ಳುವಾಗಲೇ ವಿನೂತನ ರೂಪದೊಂದಿಗೆ ಮತ್ತೆ ನಮ್ಮನ್ನು ಅದರತ್ತ ಆಕರ್ಷಿಸುವಲ್ಲಿ ಕ್ರಿಯಾಶೀಲತೆಯ ಅಂಶಗಳು ಅಡಗಿದೆ ಅಂದರೂ ತಪ್ಪಾಗಲಾರದು.
ರಾಧಿಕಾ, ಕುಂದಾಪುರ