ಸ್ಲೋ ಮೋಷನ್ ಸ್ಲಾತ್ ಸೋಮಾರಿಗಳ ಕುಲ ದೇವತೆ
Team Udayavani, Mar 7, 2020, 12:29 AM IST
ಈ ಹಿಂದೆ ವಿಶ್ವ ಸೋಮಾರಿಗಳ ದಿನಾಚರಣೆ ನಡೆಯಿತು. ಆ ಸಂದರ್ಭದಲ್ಲಿ ಬಳಸಿದ ಚಿಹ್ನೆ ಸ್ಲಾತ್ ಎಂಬ ಸಸ್ತನಿ ಪ್ರಾಣಿಯದ್ದು. ಜೀವಜಗತ್ತಿನ ಅತ್ಯಂತ ಸೋಮಾರಿ ಪ್ರಾಣಿಯೆಂದೇ ವಿಜ್ಞಾನಿಗಳು ಗುರುತಿಸಿರುವ ಕುತೂಹಲಕಾರಿ ಜೀವಿ ಸ್ಲಾತ್ ಅಳಿವಿನ ಅಂಚಿನಲ್ಲಿದೆ. ದಕ್ಷಿಣ ಮತ್ತು ಮಧ್ಯ ಅಮೆರಿಕದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಸ್ಲಾತ್ ಅನ್ನು ಕಾಣಬಹುದು. ಸೋಮಾರಿ ಜೀವಿಯೆಂದೇ ಹೆಸರಾಗಿರುವ ಈ ಪ್ರಾಣಿ ಉಷ್ಣವಲಯದ ಅಪರೂಪದ ಜೀವವರ್ಗದಲ್ಲಿ ಸೇರಿದೆ. ಈಗ ಉಳಿದಿರುವ ಎರಡು ಪ್ರಭೇದಗಳಲ್ಲಿ ಮುಂಗಾಲಿನಲ್ಲಿ ಎರಡು ಬೆರಳುಗಳಿರುವ ಮೆಗಾಲೋನಿಸೆಡೆ ಮತ್ತು ಮೂರು ಬೆರಳುಗಳಿರುವ ಬ್ರಾಡಿಪೋಡಿಡೆ ಕುಟುಂಬಗಳು ಪ್ರಮುಖವಾದವು. ಎರಡು ಬೆರಳಿರುವ ಜಾತಿ ಒಂದೂವರೆ ಅಡಿ ಎತ್ತರ, ಆರು ಕಿಲೋ ಭಾರವಾಗಿದ್ದರೆ ಮೂರು ಬೆರಳಿನದು ಎರಡು ಅಡಿಗಿಂತಲೂ ಎತ್ತರ ಎಂಟು ಕಿಲೋ ತನಕ ಭಾರವಿರುತ್ತದೆ.
ದೃಢವಾದ ಹಿಡಿತ
ಸ್ಲಾತ್, ಬಹುತೇಕ ಬದುಕನ್ನು ದಟ್ಟ ಮರಗಳ ಮೇಲೆಯೇ ಕಳೆಯುತ್ತದೆ. ಅವುಗಳ ಬೆರಳುಗಳಲ್ಲಿ ಸುಮಾರು ನಾಲ್ಕು ಇಂಚು ಉದ್ದವಿರುವ ಉಗುರುಗಳಿರುತ್ತವೆ. ಎರಡೂ ಕೈಗಳಿಂದ ಮರದ ಕೊಂಬೆಯನ್ನು ಬಿಗಿಯಾಗಿ ಹಿಡಿದು ಬೆನ್ನು ಕೆಳಗೆ ಮಾಡಿ ನೇತಾಡುವುದು ಇದರ ಅಭ್ಯಾಸ. ಕೈಗಳ ಹಿಡಿತ ಎಷ್ಟು ದೃಢವಾದುದೆಂದರೆ, ಮರದ ಕೊಂಬೆಯನ್ನು ಹಿಡಿದು ತೋಳುಗಳ ನಡುವೆ ತಲೆಯಿಟ್ಟು, ದಿನದಲ್ಲಿ 18- 20 ತಾಸುಗಳವರೆಗೂ ಇದೇ ಸ್ಥಿತಿಯಲ್ಲಿ ನಿದ್ರೆ ಮಾಡುತ್ತವೆ. ಆದರೂ ಆಯ ತಪ್ಪಿ ಕೆಳಗೆ ಬೀಳುವುದಿಲ್ಲ. ಮರದಿಂದಲೇ ನೀರಿಗೆ ಹಾರಿ ವೇಗವಾಗಿ ಈಜುವುದರಲ್ಲಿ ಅಸಾಧಾರಣ ಸಾಮರ್ಥ್ಯ ಹೊಂದಿದೆ. ಉಗುರುಗಳಿಂದ ಬಿಲ ತೋಡುತ್ತದೆ. ಗಂಡು ಸ್ಲಾತ್, ನಾಚಿಕೆಯ ಪ್ರಾಣಿ. ಅದು ತನ್ನ ಜೀವನದ ಬಹುಭಾಗ ಒಂಟಿಯಾಗಿ ಬದುಕುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಸ್ಲಾತ್ ಹೆಣ್ಣನ್ನು ಆಕರ್ಷಿಸಲು ಧ್ವನಿಗಳ ಪ್ರಯೋಗ ಮಾಡುತ್ತದೆ.
ಸುಲಭದಲ್ಲಿ ಕರಗುವುದಿಲ್ಲ
ಸ್ಲಾತ್ ಆಹಾರ ತಿನ್ನುವುದು ರಾತ್ರಿ. ನಾಲಗೆಯನ್ನು 10ರಿಂದ 12 ಇಂಚು ಹೊರಚಾಚಿ ಮರದ ಚಿಗುರುಗಳನ್ನು ಬಳಿಗೆಳೆದು ಸಣ್ಣ ಹಲ್ಲುಗಳಿಂದ ಜಗಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಚಿಗುರುಗಳನ್ನು ಜಗಿಯುವಾಗ ರಸವೂ ಅದರ ಹೊಟ್ಟೆ ಸೇರುವುದರಿಂದ ಬಾಯಾರಿಕೆಯೂ ನೀಗುತ್ತದೆ. ತನ್ನ ತೂಕಕ್ಕಿಂತ ಎರಡು ಪಾಲು ಅಧಿಕ ಆಹಾರವನ್ನು ಒಂದು ಸಲ ತಿಂದರೆ ಅದು ಅರಗಲು ಒಂದರಿಂದ ಎರಡು ತಿಂಗಳು ಬೇಕಾಗುತ್ತದೆ.
- ಪ.ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?