ಸುಲಭವಾಗಿ ಸಿಗುವ ಸೊತ್ತಲ್ಲ ಯಶಸ್ಸು
Team Udayavani, Sep 24, 2018, 2:41 PM IST
ಜೀವನದಲ್ಲಿ ನಮಗಿಂತ ಹೆಚ್ಚು ಯಶಸ್ವಿಯಾದವರನ್ನು ಕಂಡಾಗ, ನಾವೂ ಅವರಂತೆ ಇರಬೇಕಾಗಿತ್ತು ಎಂದು ಮನಸ್ಸು ಬಯಸುತ್ತದೆ. ಆದರೆ ಅದನ್ನೆಲ್ಲ ಪಡೆಯಲು ಅವರು ಪಟ್ಟ ಶ್ರಮ, ತಾಳ್ಮೆಯನ್ನು ನಾವೂ ಮೈಗೂಡಿಸಿಕೊಳ್ಳುವುದೂ ಅಷ್ಟೇ ಮುಖ್ಯ.
ಗೆಳತಿ ಮಧು ಪ್ರತಿ ಬಾರಿ, ತನ್ನ ಫೇಸ್ಬುಕ್ ಖಾತೆಯಲ್ಲಿ ಕೆಲಸ, ಭಡ್ತಿ, ಕಾರು- ಮನೆ ಖರೀದಿ, ವಿದೇಶ ಪ್ರವಾಸ, ಹೊಸ ಮೊಬೈಲ್ ಗಳ ಬಗ್ಗೆ ಬರೆದುಕೊಳ್ಳುವುದನ್ನು ಕಂಡು ನಿಟ್ಟುಸಿರು ಬಿಡುತ್ತಿದ್ದಳು ರಜನಿ. ಮನಸ್ಸಿನಲ್ಲಿ ಅದೇನೋ ಸಂಕಟ, ತನ್ನಿಂದ ಇದು ಸಾಧ್ಯವಾಗಲಿಲ್ಲವೇಕೆ? ನಾನೇಕೆ ಆ ದಿನ ಸೋತು ಕೆಲಸ ಬಿಡುವ ತಪ್ಪು ಮಾಡಿದೆ? ಅವಳಿಗಿಂತ ನಾನು ಯಾವುದರಲ್ಲಿಯೂ ಕಡಿಮೆಯಿರಲಿಲ್ಲವಲ್ಲ; ಆದರೂ, ಇಂದು ನಾನು ಕೇವಲ ಗೃಹಿಣಿ. ಅವಳಾದರೋ… ಮನಸ್ಸು ಒಳಗೊಳಗೇ ನೋಯತೊಡಗಿತ್ತು. ಜತೆಗೆ ತನ್ನ ದುರದೃಷ್ಟವನ್ನು ಹಳಿಯುತ್ತಾ ಆಕೆ ನೊಂದುಕೊಳ್ಳುತ್ತಿದ್ದಳು.
ಮಧು ಮತ್ತು ರಜನಿ ಇಬ್ಬರೂ ಒಟ್ಟಿಗೆ ಕೆಲಸಕ್ಕೆ ಸೇರಿದವರು. ಒಟ್ಟಿಗೆ ನಾಲ್ಕು ವರ್ಷ ಕೆಲಸ ಮಾಡಿದ್ದರು. ಇಬ್ಬರೂ ಒಂದೇ ವರ್ಷ ಮದುವೆಯಾದರು ಕೂಡ. ಆದರೆ, ನಾಲ್ಕು ತಿಂಗಳ ಹೆರಿಗೆ ರಜೆಯ ಅನಂತರ ಮತ್ತೆ ಕೆಲಸಕ್ಕೆ ಸೇರಿಕೊಂಡಾಗ ತಾಯ್ತನ ಪ್ರತಿಕ್ಷಣವೂ ರಜನಿಯನ್ನು ಮನೆಯತ್ತ ಎಳೆಯುತ್ತಿತ್ತು. ಅಷ್ಟಲ್ಲದೆ, ಎಳೆ ಮಗುವನ್ನು ನೋಡಿಕೊಳ್ಳಲು ಅಮ್ಮ- ಅತ್ತೆಯರನ್ನು ಬನ್ನಿ ಎಂದು ಬೇಡಿಕೊಳ್ಳಬೇಕಿತ್ತು. ಇಬ್ಬರೂ ದೂರವಿದ್ದುದರಿಂದ ಪ್ರತಿಸಾರಿ ಏನೋ ಸಬೂಬು ನೀಡುವುದನ್ನು ಕಂಡು, ತಾನೇ ಮಧ್ಯೆ ಮಧ್ಯೆ ರಜೆ ತೆಗೆದುಕೊಳ್ಳುತ್ತಿದ್ದಳು. ಮನೆ-ರಜೆ- ಮಗು- ಕೆಲಸ ಎಲ್ಲವನ್ನೂ ಸರಿತೂಗಿಸುವಲ್ಲಿ ನಾಲ್ಕೈದು ತಿಂಗಳಿಗೆ ರೋಸಿಹೋಗಿದ್ದಳು ರಜನಿ. ಇದರೊಟ್ಟಿಗೆ ಗಂಡನ ಹೊತ್ತುಗೊತ್ತು ಇಲ್ಲದ ಸಾಫ್ಟ್ವೇರ್ ನೌಕರಿಯಿಂದ ಇವಳಿಗೆ ಯಾವುದೇ ರೀತಿಯ ಬೆಂಬಲ ಸಿಗದೆ, ಮನೆಯಲ್ಲಿ ಯಾವಾಗಲೂ ಶೀತಲ ಸಮರ ನಡೆಯುತ್ತಿತ್ತು. ಈ ಎಲ್ಲ ಒತ್ತಡ ಸಹಿಸದೆ, ಕೆಲಸ ಬಿಟ್ಟಳು. ಮಗುವಿಗೆ ತನ್ನ ಸಂಪೂರ್ಣ ಸಮಯ ನೀಡಿದಳು. ಜವಾಬ್ದಾರಿಗಳ ನಿರ್ವಹಣೆಯ ಬಗ್ಗೆ ಆಗುತ್ತಿದ್ದ ಗಂಡ- ಹೆಂಡಿರ ಜಗಳ ಕಡಿಮೆಯಾಗಿ ಬದುಕು ನಿಂತ ನೀರಂತೆ ಸಮಾಧಾನದಿಂದ ಸಾಗಿತ್ತು.
ದಿನಗಳು ಉರುಳಿದಂತೆ ಮಗ ಬೆಳೆದು ದೊಡ್ಡವನಾದ. ರಜನಿಯ ಆವಶ್ಯಕತೆ ಅವನಿಗೆ ಈಗ ಕಡಿಮೆಯಾಗಿತ್ತು. ಒಂಟಿತನದ ಕಾಟ, ಅದರೊಂದಿಗೆ ಗೆಳತಿಯ ಇಂಥ ಪೋಸ್ಟ್ಗಳು ಆಗಾಗ್ಗೆ ಅವಳನ್ನು ಕಾಡುತ್ತಲಿದ್ದವು. ಆದರೆ, ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂದು ಆಕೆ ಬೇಗನೆ ಅರಿತುಕೊಂಡಳು. ತನ್ನಿಷ್ಟದ ಹವ್ಯಾಸಗಳತ್ತ ಮನಸ್ಸನ್ನು ತಿರುಗಿಸಲು ನಿರ್ಧರಿಸಿದಳು. ಆಗಲೇ ಅವಳು ಇನ್ನಿಲ್ಲದ ಓದಿಗೆ ಬಿದ್ದದ್ದು. ಕಾಲೇಜು ದಿನಗಳಲ್ಲಿದ್ದ ಕಾದಂಬರಿ ಓದುವ ಚಾಳಿಯನ್ನೂ ಮತ್ತೆ ಅಂಟಿಸಿಕೊಂಡದ್ದು. ಬದುಕನ್ನು ನೋಡುವ ದಿಕ್ಕು ಬೇರೆಯ ತಿರುವನ್ನು ತುಳಿದದ್ದು. ಇದು ಒಂದು ಕಥೆಯಾದರೆ ಉದ್ಯೋಗ ಕ್ಷೇತ್ರದಲ್ಲಿ ತನಗಿಂತ ಒಂದೆ ಹೆಜ್ಜೆ ಮುಂದೆ ಹೋಗಿರುವ ಗೆಳತಿಯರ ಸಾಧನೆಯನ್ನು ಕಂಡಾಗ ನನಗ್ಯಾಕೆ ಇದು ಸಾಧ್ಯವಾಗಲಿಲ್ಲ ಎಂದು ಚಿಂತಿಸುವ ಬದಲು ಅವರ ಸಾಧನೆಯ ಬಗ್ಗೆ ಅಸೂಯೆ ಪಟ್ಟು ಕೊಂಡೇ ಸಮಯ ಕಳೆಯುತ್ತೇವೆ.
ಜೀವನದಲ್ಲಿ ನಮಗಿಂತ ಹೆಚ್ಚು ಯಶಸ್ವಿಯಾದವರನ್ನು ಕಂಡಾಗ, ನಾವೂ ಅವರಂತೆ ಇರಬೇಕಾಗಿತ್ತು ಎಂದು ಮನಸ್ಸು ಬಯಸುತ್ತದೆ. ಆದರೆ ಅದನ್ನೆಲ್ಲ ಪಡೆಯಲು ಅವರು ಪಟ್ಟ ಶ್ರಮ, ತಾಳ್ಮೆಯನ್ನು ನಾವೂ ಮೈಗೂಡಿಸಿಕೊಳ್ಳಬೇಕು ಎಂಬುದನ್ನು ಮರೆಯುತ್ತೇವೆ. ಆ ನಿಟ್ಟಿನಲ್ಲಿ ನಾವು ಯಾರನ್ನು, ಯಾವಾಗ, ಎಷ್ಟರ ಮಟ್ಟಿಗೆ ಹೋಲಿಸಿಕೊಳ್ಳುತ್ತೇವೆ ಎಂಬುದರ ಕುರಿತು ಎಚ್ಚರವಹಿಸಬೇಕಾಗುತ್ತದೆ. ನಮ್ಮನ್ನು ನಾವು ಉತ್ತಮ ಪಡಿಸಿಕೊಳ್ಳಲು, ಹೊಸದನ್ನು ಕಲಿಯಲು ಇತರರೊಂದಿಗೆ ಹೋಲಿಸಿಕೊಂಡರೆ ಸರಿ. ಆದರೆ ಹೋಲಿಕೆಯಿಂದ ನಮ್ಮ ಆತ್ಮಸ್ಥೈರ್ಯ ಕುಗ್ಗಬಾರದು. ಇದರಿಂದ, ಸಾಧನೆಯ ಹಾದಿಯಲ್ಲಿ ಸೋತಿದ್ದಕ್ಕೆ ಕೀಳರಿಮೆ- ಸ್ವಾನುಕಂಪಗಳು ನಮ್ಮನ್ನೇ ಕಾಡುತ್ತವೆ.
ಐಷಾರಾಮಿ ಜೀವನ, ಸುಖ, ಕಾರು, ಬಂಗಲೆ, ಇವೇ ಬದುಕಿನ ಯಶಸ್ಸಿನ ಮೌಲ್ಯಮಾಪನಗಳು ಅನ್ನುವುದು ಈಗಿನ ಕಾಲದ ನಂಬಿಕೆ. ಆದರೆ ಇದು ಕೊಳ್ಳುಬಾಕತನ ಸೃಷ್ಟಿಸಿರುವ ಮನಃಸ್ಥಿತಿ ಅಷ್ಟೆ. ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು ವ್ಯಕ್ತಿವಿಕಸನಕ್ಕೆ ಅಡ್ಡಿಪಡಿಸುವುದನ್ನು ಬಿಟ್ಟು ಬೇರೇನೂ ಮಾಡಲಾರದು. ಹೀಗಾಗಿ ಬದುಕಿನಲ್ಲಿ ಇವೆಲ್ಲವೂ ತಾತ್ಕಾಲಿಕ ಎಂಬುದನ್ನು ಅರಿತುಕೊಳ್ಳಬೇಕು.