ಇಂಡಿಕೇಟರ್ ಹಾಕುವುದು ಕಟ್ಟುನಿಟ್ಟಾಗಲಿ
Team Udayavani, Aug 4, 2019, 5:00 AM IST
ಮಂಗಳೂರು ನಗರ ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಾಲುಗಟ್ಟಿ ವಾಹನಗಳು ತೆರಳುವಾಗ ಚಾಚೂ ತಪ್ಪದೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದೂ ಅಷ್ಟೇ ಮುಖ್ಯ. ಆದರೆ, ನಗರದಲ್ಲಿ ಸಂಚರಿಸುವ ಬಹುತೇಕ ರಿಕ್ಷಾ ಚಾಲಕರು ಈ ನಿಯಮಗಳೆಲ್ಲ ತಮಗೆ ಅನ್ವಯಿಸುವುದೇ ಇಲ್ಲವೇನೋ ಎಂಬಂತೆ ಹೋಗುತ್ತಿರುತ್ತಾರೆ.
ಬಹುತೇಕ ರಿಕ್ಷಾ ಚಾಲಕರು ಎಡ, ಬಲಕ್ಕೆ ತಿರುಗುವಾಗ ಇಂಡಿಕೇಟರ್ ಹಾಕುವುದೇ ಇಲ್ಲ. ಇದರಿಂದಾಗಿ ಆ ರಿಕ್ಷಾದ ಹಿಂದೆ ಬರುತ್ತಿರುವ ವಾಹನ ಸವಾರರಿಗೆ ತೀರಾ ಸಂಕಷ್ಟ ಎದುರಾಗುತ್ತದೆ. ವಾಹನ ವೇಗದಲ್ಲಿದ್ದರೆ ತತ್ಕ್ಷಣಕ್ಕೇ ಬ್ರೇಕ್ ಹಾಕಲಾಗದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಎದುರಾಗುತ್ತದೆ. ಮಹಿಳಾ ದ್ವಿಚಕ್ರ ವಾಹನ ಸವಾರರಿಗಂತೂ ಇದು ತೀರಾ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇಂಡಿಕೇಟರ್ ಮಾತ್ರವಲ್ಲ, ನಿಲ್ಲಿಸುವಾಗಲೂ ಯಾವುದೇ ಸಿಗ್ನಲ್ ನೀಡದೆ ತತ್ಕ್ಷಣ ನಿಲ್ಲಿಸುತ್ತಾರೆ. ಇದೂ ಹಿಂದಿನಿಂದ ಬರುವ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಹೆಚ್ಚಿನ ರಿಕ್ಷಾ ಚಾಲಕರು ಹಾಗೂ ಇತರ ಕೆಲವು ವಾಹನ ಚಾಲಕರೂ ಇದೇ ರೀತಿ ಮಾಡುತ್ತಿರುತ್ತಾರೆ.
ನಗರದಲ್ಲಿ ಹೆಲ್ಮೆಟ್ ಹಾಕದಿದ್ದರೆ, ದಾಖಲೆಗಳಿರದಿದ್ದಲ್ಲಿ, ವಾಯು ಮಾಲಿನ್ಯ ತಪಾಸಣೆ ಮಾಡಿಸದಿದ್ದಲ್ಲಿ, ಪಾರ್ಕಿಂಗ್ ರಹಿತ ಪ್ರದೇಶ, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ದಂಡ ಹಾಕುತ್ತಾರೆ, ಇದು ಒಳ್ಳೆಯ ಬೆಳವಣಿಗೆಯೂ ಆಗಿದೆ. ಆದರೆ, ಇನ್ನೊಬ್ಬರ ಜೀವವನ್ನೂ ಕಸಿಯುವ ಸಂಭವ ಎದುರಾಗುವ ಸಾಧ್ಯತೆಗಳಿರುವ ಇಂಡಿಕೇಟರ್ ಹಾಕದೇ ತಿರುಗಿಸುವಿಕೆ, ತತ್ಕ್ಷಣಕ್ಕೆ ನಿಲ್ಲಿಸುವಿಕೆಯಂತಹ ವಿಚಾರಗಳಿಗೂ ದಂಡ ಹಾಕಬೇಕು. ಇಂತಹವರ ಬಗ್ಗೆ ಸಾರ್ವಜನಿಕರೇ ಮಾಹಿತಿ ನೀಡಲು ಪೊಲೀಸರು ತಿಳಿಸಬೇಕು.