ಮಾದರಿ ರಸ್ತೆ ನಿರ್ಮಾಣವಾಗಲಿ
Team Udayavani, Jan 20, 2019, 8:01 AM IST
ರಸ್ತೆಗಳು ಆಕರ್ಷಕವಾಗಿರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಕೊಡುವುದು ಕಷ್ಟ. ಆದರೆ ಮಂಗಳೂರಿನ ಬಲ್ಲಾಳ್ ಬಾಗ್- ಮಣ್ಣ ಗುಡ್ಡ ರಸ್ತೆಯನ್ನು ಮಾದರಿ ರಸ್ತೆ ಎಂದು ಕರೆಯಬಹುದು. ಇದು ಸಂಪೂರ್ಣ ಕಾಂಕ್ರೀಟ್ ರಸ್ತೆಯಾಗಿದ್ದು, ಒಂದು ಕಡೆ ಸುಮಾರು 10- 15 ಮೀಟರನ್ನು ಹೊರತುಪಡಿಸಿ ರಸ್ತೆಯ ಎರಡೂ ಮಗ್ಗುಲಲ್ಲಿ ಆಕರ್ಷಕವಾದ ಕಾಲುದಾರಿಯನ್ನು ಹೊಂದಿದೆ. ಜತೆಗೆ ರಸ್ತೆಯುದ್ದಕ್ಕೂ ಗಿಡಗಳು ತುಂಬಿಕೊಂಡಿರುವುದರಿಂದ ಸುಂದರವಾಗಿ ಕಾಣುತ್ತದೆ.
ದಶಕದ ಹಿಂದೆ ಉರ್ವಸ್ಟೋರ್- ಲೇಡಿಹಿಲ್, ಲೇಡಿಹಿಲ್- ಪಿ.ವಿ.ಎಸ್., ಬಲ್ಮಠ ರಸ್ತೆ, ಮೈದಾನ ರಸ್ತೆ (ಕ್ಲಾಕ್ಟವರ್- ಪೊಲೀಸ್ ಕಮಿಷನರ್ ಕಚೇರಿ ವರೆಗಿನ )ಯ ನೆನಪು ಬರುವಂತಿದೆ. ಈಗಿನ ರೀತಿಯಲ್ಲಿ ರಸ್ತೆಯಂಚಿಗೆ ವಿದ್ಯುತ್ ದೀಪಗಳನ್ನು ಅಳವಡಿಸಿ, ಕಾಲುದಾರಿಯಲ್ಲಿ ವಾಹನಗಳನ್ನು ಓಡಿಸದೆ, ನಿಲ್ಲಿಸದೆ ಪಾದಚಾರಿಗಳಿಗೆ ಬಿಟ್ಟರೆ ತುಂಬಾ ಅನುಕೂಲವಾಗಬಹುದು. ಇದೇ ಮಾದರಿಯಲ್ಲಿ ಮಂಗಳೂರಿನ ಇತರ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಉತ್ತಮ.
ಮಣ್ಣಗುಡ್ಡ- ಲಾಲ್ಬಾಗ್ ರಸ್ತೆ
ಈ ರಸ್ತೆಯ ಎರಡೂ ಮಗ್ಗುಲಲ್ಲಿ ವಿಶಾಲ ಮರಗಳಿದ್ದು, ಸದಾ ನೆರಳು ಆವರಿಸಿರುತ್ತದೆ. ಆದರೆ ಹೆಚ್ಚಿನ ಮರಗಳಿಗೆ ದೊಡ್ಡ ದೊಡ್ಡ ಕಟ್ಟೆಗಳನ್ನು ಮಾಡಿದ್ದು, ಮರಗಳನ್ನು ಉಳಿಸಿ, ಕಟ್ಟೆಗಳನ್ನು ತೆಗೆದು, ರಸ್ತೆಯನ್ನು ಕಾಂಕ್ರೀಟ್ ರಸ್ತೆ ಮಾಡಿ, ಕಾಲುದಾರಿ ನಿರ್ಮಿಸದರೆ ತಂಬಾ ಆಕರ್ಷಕವಾಗುವುದು.
ಕೊಟ್ಟಾರ ಚೌಕಿ- ಕೊಟ್ಟಾರ- ಪಂಪ್ವೆಲ್- ಕರಾವಳಿ ವೃತ್ತ ದ್ವಿಪಥದ ರಸ್ತೆಗಳು
ಉಡುಪಿ ಕಡೆಯಿಂದ ಬರುವವರಿಗೆ ಕೊಟ್ಟಾರ ಚೌಕಿ, ಬೆಂಗಳೂರು, ಕೇರಳ ಕಡೆಯಿಂದ ಬರುವವರಿಗೆ ಪಂಪ್ವೆಲ್ ಮಂಗಳೂರು ನಗರವನ್ನು ಸ್ಪಂದಿಸುವ ತಾಣ. ಆದ್ದರಿಂದ ನಗರಕ್ಕೆ ಬರುವವರ ಅನುಕೂಲಕ್ಕೆ ಮತ್ತು ನಗರದ ಬಗ್ಗೆ ಉತ್ತಮ ಭಾವನೆ ಬರಲು ಈ ಎರಡೂ ರಸ್ತೆಗಳನ್ನು ಉತ್ತಮ ಕಾಲುದಾರಿಯೊಂದಿಗೆ ಅಭಿವೃದ್ಧಿಗೊಳಿಸಿದರೆ ನಗರ ಸೌಂದರ್ಯ ವೃದ್ಧಿಯಾಗುವುದು. ಕೋಡಿಕಲ್ನ ಶಾಂತಿಲೇನ್ನಲ್ಲಿ ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಂತಹ 15- 20 ಮೀಟರ್ ಉದ್ದದ ಶಾಂತಿಲೇನ್ – ಕೋಡಿಕಲ್ ಕೂಡುರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಜತೆಗೆ ಇದೇ ರೀತಿ ಇತರ ಒಳ ರಸ್ತೆಗಳೂ ಅಭಿವೃದ್ಧಿಯಾಗಬೇಕಿದೆ.
ವಿಶ್ವನಾಥ್ ಕೋಟೆಕಾರ್,
ಕೋಡಿಕಲ್