ಸರಕಾರಿ ಸೊತ್ತುಗಳ ನಿರ್ವಹಣೆ ಸರಿಯಾಗಿ ಆಗಲಿ
Team Udayavani, Sep 15, 2019, 5:05 AM IST
ಜನರ ತೆರಿಗೆ ಹಣದಿಂದ ಆಡಳಿತ ನಡೆಸುವ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದೆ.
ಅದಕ್ಕೆ ಉತ್ತಮ ಉದಾಹರಣೆ ನಗರದ ಕೆಲವು ಭಾಗಗಳಲ್ಲಿ ಪಾಲಿಕೆ ವತಿಯಿಂದ ಮಾಡಲಾದ ಕಸದ ಬುಟ್ಟಿಗಳು. ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಗರದ ವಿವಿಧ ಭಾಗಗಳಲ್ಲಿ ಹಸಿ ಕಸ , ಒಣಕಸವನ್ನು ವಿಂಗಡಿಸಿ ಹಾಕಲು ಕಸದ ಬುಟ್ಟಿಗಳನ್ನು ಇಟ್ಟಿವೆ. ಆದರೆ ಕೆಲವು ಭಾಗಗಳಲ್ಲಿ ಅದು ಮುರಿದು ಬಿದ್ದ ಸ್ಥಿತಿಯಲ್ಲಿವೆ. ಆದರಲ್ಲಿ ಕಸ ಹಾಕಲು ಸಾಧ್ಯವಿಲ್ಲದಂತಾಗಿದೆ. ಹಾಗಾಗಿ ಸಾರ್ವಜನಿಕರು ಅಲ್ಲೇ ಪಕ್ಕದಲ್ಲಿ ಕಸದ ರಾಶಿ ಹಾಕುತ್ತಿದ್ದಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಇಷ್ಟು ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಡಲಾದ ಇ- ಟಾಯ್ಲೆಟ್ಗಳ ಸೂಕ್ತ ನಿರ್ವಹಣೆ ಮಾಡದೆ ಬಳಸುವ ಸ್ಥಿತಿಯಲ್ಲಿ ಇಲ್ಲ. ಕೆಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾದರೆ ಇನ್ನೂ ಕೆಲವು ಭಾಗಗಳಲ್ಲಿ ಸ್ವತ್ಛತೆಯನ್ನು ಕಾಪಾಡದ ಹಿನ್ನೆಲೆಯಲ್ಲಿ ಬಳಕೆಗೆ ಯೋಗ್ಯವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಪಾದಚಾರಿಗಳಿಗೆ ದಾರಿ ಇಲ್ಲ
ಸ್ಮಾರ್ಟ್ಸಿಟಿಯಾಗಿ ಅಭಿವೃದ್ಧಿಯಾಗಲಿರುವ ಮಂಗಳೂರಿಗೆ ಮೂಲಭೂತ ಸೌಕಾರ್ಯಗಳ ಕೊರತೆ ಎದ್ದುಕಾಣುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಡೆದಾಡಲು ಫುಟ್ಪಾತ್ ವ್ಯವಸ್ಥೆ ಇಲ್ಲದಂತಾಗಿದೆ.
ಮಿಲಾಗ್ರಿಸ್ ರಸ್ತೆಯಲ್ಲಿ ನಡೆದಾಡಲು ಪಾದಚಾರಿಗಳಿಗೆ ದಾರಿ ಇಲ್ಲದಂತಾಗಿದೆ. ಮಿಲಾಗ್ರಿಸ್ ಚರ್ಚ್ನ ಬಲಭಾಗದ ರಸ್ತೆ ಬದಿಯಲ್ಲಿ ಸರಿಯಾದ ಫುಟ್ಪಾತ್ ಇಲ್ಲ. ಇರುವ ಅರ್ಧಬಂರ್ಧ ಫುಟ್ಪಾತ್ನ ಸ್ಲಾಬ್ಗಳು ಬಿದ್ದು ಹೋಗಿರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗುತ್ತಿದೆ. ಇದರ ನಡುವೆ ರಸ್ತೆ ಬದಿಯಲ್ಲೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಆ ಭಾಗದಲ್ಲಿ ನಡೆದಾಡಲು ಜನರು ಹಿಂದೇಟು ಹಾಕುವಂತಾಗಿದೆ. ಸಮೀಪದಲ್ಲೇ ಶಾಲೆ ಕಾಲೇಜುಗಳು ಇರುವುದರಿಂದ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಆ ಪರಿಸರದಲ್ಲಿ ಓಡಾಡುತ್ತಾರೆ. ಇಲ್ಲಿ ಮಾತ್ರವಲ್ಲದೆ ನವಭಾರತ್ ಸರ್ಕಲ್- ಪಿವಿಎಸ್ ಸರ್ಕಲ್ ರಸ್ತೆಯಲ್ಲೂ ಪಾದಚಾರಿಗಳಿಗೆ ನಡೆದಾಡಲು ಸ್ಥಳವಿಲ್ಲ. ಹೊಸ ಯೋಜನೆಗಳ ಮೂಲಕ ಮಂಗಳೂರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಕೆಲಸ ಮಾಡುತ್ತಿದ್ದರೆ ಸಾರ್ವಜನಿಕರು ಮಾತ್ರ ಮೂಲ ಸೌಕಾರ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಣಗಾಡುತ್ತಿದ್ದಾರೆ.
- ಪ್ರಜ್ಞಾ ಶೆಟ್ಟಿ