ರಸ್ತೆ, ಫುಟ್ಪಾತ್ ವ್ಯಾಪಾರಿಗಳ ಪಾಲು
Team Udayavani, Feb 16, 2020, 4:00 AM IST
ಸ್ಟೇಟ್ಬ್ಯಾಂಕ್, ಸಿಟಿ ಬಸ್ ನಿಲ್ದಾಣ ಹಲವು ರೀತಿಯ ಅವ್ಯವಸ್ಥೆಯ ತಾಣ. ನಿಲ್ದಾಣದ ಎದುರು (ಮೀನು ಮಾರ್ಕೆಟ್ ಬದಿ) ಇರುವ ರಸ್ತೆಯನ್ನು ಬಸ್ ಹೊರತುಪಡಿಸಿ ಇತರ ವಾಹನಗಳ ಸಂಚಾರಕ್ಕೆ ಮೀಸಲಿಡಲಾಗಿದೆ. ಆದರೆ ಈ ರಸ್ತೆಯಲ್ಲಿ ಸದಾ ಸಂಚಾರ ವ್ಯತ್ಯಯ.
ಮೀನುಮಾರುಕಟ್ಟೆ ಹಾಗೂ ಇತರ ಅಂಗಡಿಗಳಿಗೆ ಬರುವವರು, ಇತರ ಸಾರ್ವಜನಿಕರು ಕೂಡ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಈ ರಸ್ತೆಯ ಪಕ್ಕ ಕೆಲವು ಕಡೆ ಫುಟ್ಪಾತ್ ಇದ್ದರೂ ಅದು ಅಂಗಡಿಗಳ ಪಾಲಾಗಿದೆ. ಕೆಲವು ಅಂಗಡಿಯವರು ಫುಟ್ಪಾತ್ನಲ್ಲಿಯೇ ಸಾಮಗ್ರಿಗಳನ್ನು ಇಟ್ಟಿದ್ದಾರೆ. ಇದೇ ಪರಿಸರದ ಇನ್ನು ಕೆಲವೆಡೆ ಫುಟ್ಪಾತ್ ಸ್ವಲ್ಪವೂ ಕಾಣಲು ಸಿಗುವುದಿಲ್ಲ. ಹಾಗಾಗಿ ಜನರು ರಸ್ತೆಯಲ್ಲಿಯೇ ನಡೆದುಕೊಂಡು, ವಾಹನಗಳ ಎಡೆಯಲ್ಲಿ ನುಸುಳಿಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ. ಅನೇಕ ಬಾರಿ ಅಪಘಾತಗಳಿಗೂ ಕಾರಣವಾಗಿದೆ. ಇಲ್ಲಿ ಫುಟ್ಪಾತ್ ಅತಿಕ್ರಮಿಸಿಕೊಂಡವರನ್ನು ಕೂಡಲೇ ತೆರವುಗೊಳಿಸಬೇಕು. ಪಾದಚಾರಿಗಳ ಸುರಕ್ಷತೆಗೆ ಅವಕಾಶ ಮಾಡಿಕೊಡಬೇಕು. ವಾಹನ ಸಂಚಾರವೂ ಸುಗಮವಾಗುವಂತೆ ನೋಡಿಕೊಳ್ಳಬೇಕು. ಜತೆಗೆ ಈ ಪರಿಸರದ ಸ್ವಚ್ಛತೆಗೂ ನಗರಸಭೆ ಕೂಡಲೇ ಗಮನ ಹರಿಸಬೇಕು.