ಜಲಾವೃತಗೊಂಡ ರಸ್ತೆಗಳು ದುರಸ್ತಿಯಾಗಲಿ
Team Udayavani, Sep 9, 2018, 1:14 PM IST
ಮಳೆ ನಿಂತು ಹಲವು ವಾರಗಳೇ ಕಳೆದಿವೆ. ಆದರೆ ನಗರದ ಕೆಲವು ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಇನ್ನೂ ನಿಂತಿದ್ದು, ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಇದರಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಯಿತು.
ನಗರದ ಲಾಲ್ಬಾಗ್ನ ಮಾಲ್ ಒಂದರ ಬಳಿ ಮಳೆ ಬಂದು ನಿಂತರೂ ನೀರು ತುಂಬಿರುವ ದೃಶ್ಯ ಸಾಮಾನ್ಯ. ಲಾಲ್ಬಾಗ್ ಸಿಗ್ನಲ್ನಿಂದ ಕುಂಟಿಕಾನ, ಬೋಂದೆಲ್ಗೆ ಸಾಗುವ ದಾರಿಯಲ್ಲಿ ನೀರು ತುಂಬಿ ಕೃತಕ ಕೆರೆ ನಿರ್ಮಾಣವಾಗಿದೆ. ಅಚ್ಚರಿ ಎಂದರೆ ನಗರ ಪ್ರದೇಶಗಳಲ್ಲಿ ಮಳೆ ಬಾರದೆ ಹಲವು ದಿನಗಳೇ ಕಳೆದಿವೆ. ಆದರೆ ಇಲ್ಲಿ ನೀರು ಮಾತ್ರ ತಗ್ಗಿಲ್ಲ. ಪಾದಚಾರಿಗಳು ಈ ಮಾರ್ಗವಾಗಿ ಸಾಗಿದರೆ ವೇಗವಾಗಿ ಬರುವ ಬಸ್ ಹಾಗೂ ಇತರ ವಾಹನಗಳು ಅವರ ಮೇಲೆಯೇ ನೀರು ಎರಚಿಕೊಂಡು ಹೋಗುತ್ತಿವೆ. ಕೃತಕ ಕೆರೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯವೂ ಇಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಲಾಲ್ಬಾಗ್ ಮಾತ್ರವಲ್ಲ, ಕೋಡಿಕಲ್, ಬಂದರು ಸಹಿತ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ಇನ್ನೂ ಮಳೆ ನೀರು ನಿಂತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಹೀಗೆ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡುವ ಸಾಧ್ಯತೆಯೂ ಇದೆ.
ಪ್ರಜ್ಞಾ ಶೆಟ್ಟಿ