ಒಂದೆಡೆ ನೀರಿಲ್ಲ; ಮತ್ತೂಂದೆಡೆ ಸೋರಿಕೆ
Team Udayavani, Apr 17, 2017, 4:41 PM IST
ಮಹಾನಗರ: ಮಂಗಳೂರಿಗೆ ಸಮರ್ಪಕ ನೀರು ಸರಬರಾಜು ಮಾಡುವಲ್ಲಿ ಪಾಲಿಕೆ ಎಷ್ಟು ಪ್ರಯತ್ನಿಸಿದರೂ, ಪ್ರತೀದಿನ 20 ಎಂ.ಎಲ್.ಡಿ.(ಮಿಲಿಯನ್ ಲೀಟರ್ )ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. ಪಾಲಿಕೆಯೇ ತಿಳಿಸಿರುವಂತೆ, ತುಂಬೆಯಿಂದ ಪ್ರತೀದಿನ 160 ಎಂ.ಎಲ್.ಡಿ. ನೀರು ಪಂಪಿಂಗ್ ಮಾಡಲಾಗುತ್ತಿದೆ. ಇದರಲ್ಲಿ 140 ಎಂ.ಎಲ್.ಡಿಯಷ್ಟು ಮಾತ್ರ ಬಳಕೆಯಾಗುತ್ತಿದೆ. ಉಳಿದ 20 ಎಂ.ಎಲ್.ಡಿ ಸೋರಿಕೆಯಾಗುತ್ತಿದೆ.
ತುಂಬೆ ಪಂಪ್ಹೌಸ್ನಿಂದ ನೀರು ಪಂಪ್ ಮಾಡಿ ನಗರದ ಪಂಪ್ಹೌಸ್ಗಳಿಗೆ ಪೂರೈಕೆ ಮಾಡುವ ಹಂತದಲ್ಲಿ ಭಾರೀ ನೀರು ಸೋರಿಕೆಯಾಗುತ್ತಿದೆ. ಕಣ್ಣೂರು, ಫರಂಗಿಪೇಟೆ, ಅಡ್ಯಾರು ಮುಂತಾದ ವ್ಯಾಪ್ತಿಗಳಿಗೆ ಈ ನೀರು ಸರಬರಾಜಾಗುತ್ತದೆ. ವಿಶೇಷವೆಂದರೆ ಇದಕ್ಕೆ ಯಾವುದೇ ಶುಲ್ಕ ವಸೂಲಿ ಮಾಡುತ್ತಿಲ್ಲ. ಈಗಿನ 21 ಎಂಜಿಡಿ (ಮಿಲಿಯನ್ ಗ್ಯಾಲನ್)ಎಡಿಬಿ ಕೊಳವೆ ಮಾರ್ಗದ ಪಕ್ಕದಲ್ಲಿ ಹಳೆಯ ಪುರಸಭೆ ಅವಧಿಯ ಎಂಜಿಡಿ ಕೊಳವೆಯಿದೆ. ಅದರಿಂದ ಗ್ರಾಮೀಣ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಜಿಲ್ಲಾ ಪಂಚಾಯತ್ಗೆ ಹಸ್ತಾಂತರ ಮಾಡಿದರೂ ಅದರಿಂದ ನೀರು ಇನ್ನೂ ಬಳಸುತ್ತಿಲ್ಲ. ಪರಿಣಾಮವಾಗಿ 21 ಎಂಜಿಡಿ ಲೈನ್ನಲ್ಲೇ ಹೆಚ್ಚು ಅಕ್ರಮ ಸಂಪರ್ಕಗಳಿವೆ. ಈ ಸಂಪರ್ಕ ಕಡಿದು ಹಾಕಲು ಅಧಿಕಾರಿಗಳು ಹೋದರೆ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆಯೂ ನಡೆದಿದೆ. ಅಕ್ರಮ ಸಂಪರ್ಕ ಕಡಿತಗೊಳಿಸಿ ಎಂದು ಹೇಳಿದ ಆಡಳಿತದವರೇ ನಂತರ ಇಂತಹ ಚಟುವಟಿಕೆಗಳಿಗೆ ಬೆಂಗಾವಲಾಗಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಸೋರಿಕೆ ನಿರ್ವಹಣೆ ವಿಳಂಬ
ಈ ಮಧ್ಯೆ ನೀರು ಸರಬರಾಜು ಕೊಳವೆಯಲ್ಲಿನ ಸೋರಿಕೆ ನಿರ್ವಹಣೆ ವಿಳಂಬದಿಂದಲೂ ಸಾಕಷ್ಟು ನೀರು ಪೋಲಾಗುತ್ತಿದೆ. ನೀರಿನ ಸಮಸ್ಯೆ ಬಗ್ಗೆ ಪಾಲಿಕೆ ಕಚೇರಿಯಲ್ಲಿ ದೂರವಾಣಿ ಮೂಲಕ ಮಾಹಿತಿ ಸ್ವೀಕರಿಸಿದವರು ಅದನ್ನು ಪುಸ್ತಕದಲ್ಲಿ ಬರೆದಿಡುತ್ತಾರೆ. ನಂತರ ಜೂನಿಯರ್ ಎಂಜಿನಿಯರ್ಗಳಿಗೆ ಮಾಹಿತಿ ಕೊಡುತ್ತಾರೆ. ಜೆಇಗಳು ಗುತ್ತಿಗೆದಾರರಿಗೆ ಮಾಹಿತಿ ಕೊಡುತ್ತಾರೆ. ಅವರು ತತ್ಕ್ಷಣ ಸ್ಪಂದಿಸಿದರೆ ಮಾತ್ರ ಸಮಸ್ಯೆ ಸರಿಯಾಗುತ್ತದೆ. ಆದರೆ, ನಗರದ ಬಹುತೇಕ ಭಾಗದಲ್ಲಿ 24 ಗಂಟೆಯಾದರೂ ದುರಸ್ತಿಯಾಗದೇ ಚರಂಡಿಯಲ್ಲಿ, ರಸ್ತೆ ಮೇಲೆ ನೀರು ಹರಿಯುವ ಪ್ರಸಂಗಗಳು ಬೇಕಾದಷ್ಟಿವೆ.
ಕೆಲವು ಕಡೆ ನೀರಿಗೂ ಲೆಕ್ಕವಿಲ್ಲ..!
ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕೇವಲ 500 ರೂ. ಪಾವತಿಸಿ ನೀರಿನ ಸಂಪರ್ಕ ಪಡೆಯುವ ‘ಜಲಭಾಗ್ಯ ಯೋಜನೆ’ ಜಾರಿಗೆ ತಂದಿತ್ತು. ಆ ಮೂಲಕ ಸಾರ್ವಜನಿಕ ನಳ್ಳಿ ಸಂಪರ್ಕ ಕಡಿದು ಹಾಕುವುದು ಇದರ ಉದ್ದೇಶವಾಗಿತ್ತು. ಆದರೆ ವರ್ಷ ಎಂಟಾದರೂ, ಸಾರ್ವಜನಿಕ ನಳ್ಳಿ ಸಂಪರ್ಕ ತೆಗದು ಹಾಕಿಲ್ಲ. ಸಾರ್ವಜನಿಕ ನಳ್ಳಿಯ ಮೂಲಕ ವಾಹನ ತೊಳೆಯುವುದು, ಕೆಲವು ಅಂಗಡಿಯವರು ನೀರು ಬಳಸುವುದು, ಮನೆಯವರು ಪಡೆದುಕೊಳ್ಳುವುದು – ಹೀಗೆ ನಾನಾ ರೀತಿಯಲ್ಲಿ ಇದನ್ನು ಬಳಸಲಾಗುತ್ತಿದೆ. ಈ ನೀರಿಗೆ ಲೆಕ್ಕವೇ ಇಲ್ಲದಂತಾಗಿದೆ.
ಕೊಳವೆ ಅಳವಡಿಕೆ; ನಿಯಮದಲ್ಲೂ ಲೋಪ
ಎಡಿಬಿ ಯೋಜನೆಯಿಂದ ಒಳ್ಳೆಯ ಗುಣಮಟ್ಟದ ನೀರಿನ ಕೊಳವೆಗಳನ್ನು ಮಂಗಳೂರಿನಲ್ಲಿ ಹಾಕಿದ್ದು, ನೀರಿನ ಒತ್ತಡವೂ ಹೆಚ್ಚಿದೆ. ಆದರೆ, ಹೊಸ ಸಂಪರ್ಕದ ಲೈನ್ ಹಾಕುವಾಗ ಕೆಲವು ನಿಯಮಗಳನ್ನು ಪಾಲಿಸುತ್ತಿಲ್ಲ. ಒಂದು ಮೀ. ಮತ್ತು ಒಂದು ಅಡಿ ಆಳವಾಗಿ ಅಗೆದು ಕೊಳವೆ ಜೋಡಿಸಿ, ಮೇಲ್ಭಾಗದಲ್ಲಿ ನಾಮಫಲಕ ಹಾಕಬೇಕು. 10 ಟನ್ ಭಾರದ ವಾಹನ ಅದರ ಮೇಲೆ ಹಾದು ಹೋದರೂ ಕೊಳವೆಗೆ ಧಕ್ಕೆಯಾಗಬಾರದು. ಆದರೆ, ಗುಣಮಟ್ಟದ ಇಲ್ಲದ, ಕೇವಲ ಅರ್ಧ ಮೀ.ನೊಳಗೆ ಕೊಳವೆ ಹಾಕುವುದರಿಂದ ವಾಹನಗಳ ಒತ್ತಡದಿಂದ ನಜ್ಜುಗುಜ್ಜಾಗಿ ನೀರು ಸೋರಿಕೆಯಾಗುತ್ತದೆ.
85,359 ನೀರಿನ ಸಂಪರ್ಕಗಳು
ಪ್ರಸ್ತುತ ಲೆಕ್ಕಾಚಾರದ ಪ್ರಕಾರ ತುಂಬೆಯಿಂದ ದಿನವೊಂದಕ್ಕೆ 160 ಎಂ.ಎಲ್.ಡಿ ನೀರು ನಗರಕ್ಕೆ ಸರಬರಾಜು ಆಗುತ್ತದೆ. ಇಲ್ಲಿಯ ಜನಸಂಖ್ಯೆ 5 ಲಕ್ಷ . ದಿನವೊಂದಕ್ಕೆ ಸುಮಾರು 1ಲಕ್ಷಕ್ಕೂ ಅಧಿಕ ಮಂದಿ ನಗರಕ್ಕೆ ಬಂದು ಹೋಗುತ್ತಾರೆ. ಉಳ್ಳಾಲ, ಸುರತ್ಕಲ್, ಮೂಲ್ಕಿಗೂ ಇಲ್ಲಿಂದಲೇ ನೀರು ಸರಬರಾಜು ಆಗುತ್ತದೆ. ಮಂಗಳೂರಿನಲ್ಲಿ ಒಟ್ಟು 85,359 ನೀರಿನ ಸಂಪರ್ಕಗಳಿವೆ. ಇದರಲ್ಲಿ ವಸತಿ-78,304, ವಸತಿಯೇತರ-4764, ನಿರ್ಮಾಣ ಹಂತದ ಕಟ್ಟಡ-1328, ಬಹುಮಹಡಿ ಕಟ್ಟಡ-805, ಕೈಗಾರಿಕೆಗಳು-845, ಶಾಲೆ, ದೇವಸ್ಥಾನ ಸೇರಿದಂತೆ ಸಾರ್ವಜನಿಕ ನೀರಿನ ಸಂಪರ್ಕಗಳು – 5300 ಇವೆ.
ಸೋರಿಕೆ ತಡೆಗೆ ಕ್ರಮ
ಪಾಲಿಕೆಗೆ ನೀರು ಸರಬರಾಜು ಆಗುವ ಹಂತದಲ್ಲೇ ಸೋರಿಕೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸೋರಿಕೆಯಾಗುವ ಸ್ಥಳಗಳಿಗೆ ಅಧಿಕೃತವಾಗಿ ನೀರಿನ ಸಂಪರ್ಕ ಕೊಡುವ ಬಗ್ಗೆ ಚರ್ಚೆ ನಡೆಸಲಾಗುವುದು ಹಾಗೂ ಸೋರಿಕೆ ತಡೆಗಟ್ಟಲು ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
– ಕವಿತಾ ಸನಿಲ್, ಮೇಯರ್
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್