ನಗರದಲ್ಲೂ ನಿರ್ಮಾಣವಾಗಲಿ ವೀಕ್ಷಣ ಗೋಪುರ
Team Udayavani, Sep 9, 2018, 1:01 PM IST
ಮಂಗಳೂರಿಗೆ ಬರುವ ಹೆಚ್ಚಿನ ಪ್ರವಾಸಿಗರನ್ನು ಮೊದಲು ಆಕರ್ಷಿಸುವುದು ಸಮುದ್ರ ತೀರಗಳು. ಆದರೆ ಸಮುದ್ರ ವೀಕ್ಷಣೆಗಾಗಿ ಪ್ರವಾಸಿಗರು ಉಳ್ಳಾಲ, ತಣ್ಣೀರು ಬಾವಿ ಅಥವಾ ಪಣಂಬೂರಿಗೆ ಹೋಗುವ ಅನಿವಾರ್ಯತೆಯಿದೆ. ತೀರ್ಥಕ್ಷೇತ್ರಗಳ ವೀಕ್ಷಣೆಯ ಅನಂತರ ಸಮಯದ ಅಭಾವದಿಂದ ಪ್ರವಾಸಿಗರಿಗೆ ಸುಲಭದಲ್ಲಿ ಸಮುದ್ರ ನೋಡುವ ಹಾಗೂ ನಗರದ ಪಕ್ಷಿ ನೋಟದ ಅವಕಾಶ ದೊರೆಯದೆ ನಿರಾಶೆಯಾಗುವುದಿದೆ.
ಈ ಹಿಂದೆ ಸಮುದ್ರ ವೀಕ್ಷಣೆಗೆ ಅತ್ಯಂತ ಪ್ರಶಸ್ತ ತಾಣ ಬಾವುಟಗುಡ್ಡೆಯ ಠಾಗೋರು ಉದ್ಯಾನವನವಾಗಿತ್ತು. ಅಂದು ಅರಬ್ಬಿ ಸಮುದ್ರದಲ್ಲಿ ಮುಳುಗುವ ಕೆಂಬಣ್ಣದ ಸೂರ್ಯನನ್ನು ನೋಡುವ ನಯನ ಮನೋಹರ ದೃಶ್ಯವನ್ನು ಇಲ್ಲಿ ಕಾಣಬಹುದಾಗಿತ್ತು. ಆದರೆ ಇಂದು ಅಡ್ಡ ಗೋಡೆಯಂತೆ ಎದ್ದು ನಿಂತ ಕಟ್ಟಡಗಳಿಂದ ಹಳೆಯ ನೆನಪು ಹಾಗೇ ಉಳಿದಿದೆ. ದಶಕಗಳಿಂದ ಮಂಗಳೂರಿನ ನಾಗರಿಕರಿಗೆ ಲಭ್ಯವಿದ್ದ ಅತ್ಯುತ್ತಮ ಪ್ರಕೃತಿ ಸೌಂದರ್ಯದ ತಾಣ ತನ್ನ ಚೆಲುವನ್ನೀಗ ಕಳೆದುಕೊಂಡಿದೆ. ನಗರವಿಡೀ ನಿರ್ಮಾಣವಾದ ಗಗನ ಚುಂಬಿ ಕಟ್ಟಡಗಳ ತುದಿಯಿಂದ ನಗರದ ಪಕ್ಷಿ ನೋಟದ ದೃಶ್ಯ ಲಭ್ಯವಿದ್ದರೂ ಸಾಮಾನ್ಯ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ಇಲ್ಲಿ ಅವಕಾಶ ದೊರೆಯಲಾರದು.
ಐಫೆಲ್ ಟವರ್, ಟೋಕಿಯೊ ಟವರ್ ನಂತೆ ಮಂಗಳೂರಿನಲ್ಲೂ ಸುಂದರವಾದ ವೀಕ್ಷಣ ಗೋಪುರ ನಿರ್ಮಾಣದ ಆವಶ್ಯಕತೆ ಇದೆ. ನಗರದ ಎತ್ತರದ ಪ್ರದೇಶದಲ್ಲಿ ಇದು ನಿರ್ಮಾಣವಾದರೆ ಸಾಕಷ್ಟು ಪ್ರವಾಸಿಗರನ್ನು ಇತ್ತ ಸೆಳೆಯಲು ಸಾಧ್ಯವಿದೆ. ಬಾವುಟಗುಡ್ಡೆ, ಕದ್ರಿ ಗುಡ್ಡೆಯಲ್ಲಿ ಈ ಗೋಪುರವನ್ನು ನಿರ್ಮಾಣ ಮಾಡಬಹುದು. ಈ ಮೂಲಕ ಮಂಗಳೂರಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಜತೆಗೆ ಆದಾಯ ಹೆಚ್ಚಿಸಲು ಅವಕಾಶವಿದೆ.
ಯು.ಜಿ. ಕೇದಾರನಾಥ,
ಮಂಗಳೂರು