ತ್ಯಾಜ್ಯ ನಿರ್ವಹಣೆ: ಕೈಗೊಳ್ಳಬೇಕಿದೆ ಕಟ್ಟು ನಿಟ್ಟಿನ ಕ್ರಮ
Team Udayavani, Sep 16, 2018, 12:59 PM IST
ಉರ್ವಸ್ಟೋರ್ ಸಮೀಪ ಕೆಲವು ವಾರಗಳ ಹಿಂದೆ ತ್ಯಾಜ್ಯ ಎಸೆದವರನ್ನೊಬ್ಬರು ತ್ಯಾಜ್ಯ ತೆಗೆಯುವಂತೆ ಇನ್ನೊಬ್ಬರು ಪರಿಪರಿಯಾಗಿ ಕೇಳಿಕೊಂಡರೂ ತೆಗೆಯದೆ ಹೊರಟೇ ಬಿಟ್ಟರು. ಇಂಥ ಅನುಭವ ಎಲ್ಲರ ಗಮನಕ್ಕೂ ಬಂದಿರಬಹುದು.
ತ್ಯಾಜ್ಯವನ್ನು ರಸ್ತೆಯಲ್ಲಿ ಅಥವಾ ರಸ್ತೆ ಅಂಚಿನಲ್ಲಿ ಯಾಕೆ ಎಸೆಯಲಾಗುತ್ತಿ ದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡದೆ ಇರಲಾರದು. ಕಳೆದ ಮೂರುವರೆ ವರ್ಷಗಳ ಹಿಂದೆ ಜಾರಿಗೆ ಬಂದ ಹೊಸ ತ್ಯಾಜ್ಯ ನಿರ್ವಹಣೆ, ಮೊದಲ ಕೆಲವು ತಿಂಗಳ ಆರಂಭದ ತೊಂದರೆಯ ಅನಂತರ ಅತ್ಯುತ್ತಮವಾಗಿ ನಡೆಯುತ್ತಿತ್ತು. ಬರುಬರುತ್ತಾ ಪ್ರಗತಿಯಾಗುವ ಬದಲು ಕಳಪೆಯಾಗುತ್ತಾ ಸಾಗುತ್ತಿದೆ. ಬೆಳಗ್ಗಿನ ಹೊತ್ತು ಬಹುತೇಕ ಎಲ್ಲ ರಸ್ತೆಯ ಅಂಚಿನಲ್ಲೂ ಅಲ್ಲಲ್ಲಿ ತ್ಯಾಜ್ಯ ತುಂಬಿದ ಚೀಲಗಳು ಬಿದ್ದಿರುತ್ತವೆ. ಕೆಲವು ಕಡೆ ತ್ಯಾಜ್ಯವು ರಸ್ತೆಯಲ್ಲಿರುತ್ತದೆ. ನಮ್ಮ ಮಂಗಳೂರು 10 ಲಕ್ಷ ಜನ ಸಂಖ್ಯೆ ಇರುವ ನಗರಗಳಲ್ಲಿ, ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಅಗ್ರಗಣ್ಯ ನಗರವಾಗಿ ಗುರುತಿಸಿಕೊಂಡಿದೆ. ಈ ಪಟ್ಟವನ್ನು ಉಳಿಸುವುದು ಎಲ್ಲರ ಜವಾಬ್ದಾರಿ. ನಮ್ಮ ಮನೆ ಸುತ್ತಮುತ್ತಲಿನ ಪರಿಸರದಂತೆ ನಾವು ನಮ್ಮ ನಗರವನ್ನು ಏಕೆ ನೋಡಬಾರದು. ಅದು ನಮ್ಮೆಲ್ಲರ ಕರ್ತವ್ಯವಲ್ಲವೇ?
ತ್ಯಾಜ್ಯ ನಿರ್ವಹಣಾ ಪ್ರತಿನಿಧಿಗಳು ಅಥವಾ ಕಾರ್ಮಿಕರು ಮನೆ ಮನೆಗೆ ಬಂದು ತ್ಯಾಜ್ಯವನ್ನು ಸಂಗ್ರಹಿಸಿ, ವಾಹನದಲ್ಲಿ ತುಂಬಿಸಿಕೊಂಡು ಹೋಗು ತ್ತಾರೆ. ಕೆಲವೆಡೆ ಬಾರದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸಿರಬಹುದು. ಆದರೆ ಇದು ಸರಿಯಾದ ಪರಿಹಾರವಲ್ಲ. ನಗರದ ಸ್ವಚ್ಛತೆ ದೃಷ್ಟಿಯಿಂದ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ತ್ಯಾಜ್ಯವನ್ನು ಮಾರ್ಗದಂಚಿಗೆ ಸುರಿಯುವುದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ.
ಈ ನಿಟ್ಟಿನಲ್ಲಿ ಆಡಳಿತವೂ ಒಂದಷ್ಟು ಕ್ರಮಗಳನ್ನು ಕೈಗೊಳ್ಳ ಬೇಕಿದೆ. ತ್ಯಾಜ್ಯ ನಿರ್ವಹಣೆ ವಾಹನಗಳು ಕೆಟ್ಟು ಹೋದರೆ ಬೇರೆ ಕಡೆಯ ವಾಹನಗಳನ್ನು ಅಲ್ಲಿಗೆ ನಿಯೋಜಿಸಬೇಕು. ತಡವಾಗಿ ಆದರೂ ತ್ಯಾಜ್ಯ ಸಂಗ್ರಹವನ್ನು ಮಾಡಲೇಬೇಕು.
ನಗರದಲ್ಲಿ 60 ವಾರ್ಡ್ಗಳಿದ್ದು, ಪ್ರತೀ ವಾರ್ಡ್ಗಳಲ್ಲಿ ಒಂದು ಕಡೆ ಅನುಕೂಲವಾಗುವ ಸ್ಥಳದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಇದರಿಂದ ಈ ವಾರ್ಡ್ನ ಜನರು ಬೇರೆ ಕಡೆ ತ್ಯಾಜ್ಯವನ್ನು ಬಿಸಾಡುವುದನ್ನು ತಪ್ಪಿಸಬಹುದು.
ಪ್ರತಿ ವಾರ್ಡ್ಗೆ ಒಬ್ಬರಂತೆ ತ್ಯಾಜ್ಯ ಸಂಗ್ರಹಣಾಕಾರರನ್ನು ನಿಯೋಜಿಸಬೇಕು. ಅಸಾಧ್ಯವಾದರೆ ತ್ಯಾಜ್ಯ ಸುರಿಯುವ ಕಡೆಗಳಲ್ಲಿ ಬಿತ್ತಿ ಪತ್ರ/ ಬ್ಯಾನರ್ಗಳನ್ನು ಅಳವಡಿಸಿ ತ್ಯಾಜ್ಯ ಸುರಿಯದಂತೆ ಪ್ರೇರಣೆ ಕೊಡಬೇಕು. ಇದರಿಂದಲೂ ಫಲಿತಾಂಶ ಉತ್ತಮವಾಗಿಲ್ಲದಿದ್ದರೆ, ಸಂಗ್ರಹಣಾ ಪ್ರತಿನಿಧಿಗಳು ಆ ಸ್ಥಳದಲ್ಲಿದ್ದು, ತ್ಯಾಜ್ಯ ಸುರಿಯುವವರಿಗೆ ಖುದ್ದಾಗಿ ತಿಳಿಹೇಳಬಹುದು. ಇದೆಲ್ಲಾ ಸಾಧ್ಯವಿಲ್ಲವಾದರೆ ಮಹಾನಗರ ಪಾಲಿಕೆಯವರು ತ್ಯಾಜ್ಯವನ್ನು ಸುರಿಯುವವರ ಬಗ್ಗೆ ಮಾಹಿತಿ ಪಡೆದು ಕಠಿನ ಕ್ರಮ ಕೈಗೊಳ್ಳಬೇಕು.
ಈ ನಿಟ್ಟಿನಲ್ಲಿ ಆಡಳಿತವಷ್ಟೇ ಅಲ್ಲ ಸ್ಥಳೀಯರೂ ಎಚ್ಚರಿಕೆ ವಹಿಸಬೇಕು. ತಮ್ಮ ಭಾಗದ ರಸ್ತೆಯಂಚಿನಲ್ಲಿ ಯಾರೇ ಕಸ ತಂದು ಬಿಸಾಡಿದರೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡುವ ಕೆಲಸ ಮಾಡಬೇಕು. ಅಥವಾ ಈ ಭಾಗದಲ್ಲಿ ಒಂದು ಡಸ್ಟ್ ಬಿನ್ ಅಳವಡಿಸಿ ಕಸ ತಂದು ಸುರಿಯಲು ಅಲ್ಲಿಂದ ತ್ಯಾಜ್ಯ ನಿರ್ವಹಣಾಕರರು ಕಸ ತೆಗೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಲುಸ್ಥಳೀಯ ಕಾರ್ಪೊರೇ ಟರ್ ಮೂಲಕ ಒತ್ತಾಯ ಮಾಡಬಹುದು.
ವಿಶ್ವನಾಥ್ ಕೋಟೆಕಾರ್, ಕೋಡಿಕಲ್