ಭಕ್ತಿ ಪಾರಮ್ಯದ ಸಂಗೀತ ಕಛೇರಿ
Team Udayavani, Feb 9, 2018, 8:15 AM IST
ಕಾಸರಗೋಡಿನ ವಿದ್ಯಾನಗರದ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ 21ನೇ ವಾರ್ಷಿಕೋತ್ಸವದಂದು ಲಲಿತ ಕಲಾಸದನದಲ್ಲಿ ವಿದ್ವಾನ್ ಚೆಂಗೋಟೈ ಹರಿಹರ ಸುಬ್ರಹ್ಮಣ್ಯನ್ ಅಯ್ಯರ್ಶಾಸ್ತ್ರೀಯ ಸಂಗೀತ ಕಛೇರಿ ನೀಡಿದರು. ಚುಟುಕಾದ ಆಲಾಪನೆಯಿಂದ ಚಾರುಕೇಶಿ ರಾಗದ ಲಾಲ್ಗುಡಿಯವರ ಆದಿತಾಳದ ವರ್ಣವನ್ನು ಪ್ರಸ್ತುತಪಡಿಸಿ ಮುತ್ತುಸ್ವಾಮಿ ದೀಕ್ಷಿತರ ಚಕ್ರವಾಕ ರಾಗದ ಆದಿತಾಳದ ಕೃತಿಯನ್ನು ಹಾಡಿದರು. ಲಲಿತ ರಾಗದ ಮಿಶ್ರ ಛಾಪು ತಾಳದ ಕೃತಿಗೆ ನೀಡಿದ ರಾಗ ಲಾಲಿತ್ಯಪೂರ್ಣವಾಗಿದ್ದು ಶ್ಯಾಮಾ ಶಾಸ್ತ್ರಿಗಳ ಕೃತಿಯ ಪ್ರಸ್ತುತಿ ನೆರವಲ್ ಸ್ವರ ಪ್ರಸ್ತಾರಗಳಿಂದ ಮೂಡಿಬಂತು. ಅಠಾಣ ರಾಗದ ಊತುಕ್ಕಾಡು ವೆಂಕಟಸುಬ್ಬ ಅಯ್ಯರ್ರವರ ಕೀರ್ತನೆ ರಾಗಾಲಾಪನೆಯೊಂದಿಗೆ ಮಧುರವಾಗಿತ್ತು. ವಿಜಯವಿಠಲದಾಸರ ಕೀರವಾಣಿ ರಾಗದ ಕೀರ್ತನೆಗೆ ಮೊದಲು ನೀಡಿದ ರಾಗಾಲಾಪನೆ ರಂಜಿಸಿತು.ತ್ಯಾಗರಾಜ ಸ್ವಾಮಿಗಳ ರಚನೆ ಜಯಂತ ಸೇನರಾಗದಲ್ಲಿ ಸ್ವರ ಪ್ರಸ್ತಾರಗಳಿಂದ ಆದಿತಾಳದಲ್ಲಿ ಮೂಡಿಬಂತು.ಪ್ರಧಾನ ರಾಗವಾಗಿ “ಕಲ್ಯಾಣಿ’ಯನ್ನು ಆಯ್ದುಕೊಂಡು ರಾಗಾಲಾಪನೆ ಮಾಡಿದರು. ಅದನ್ನನುಸರಿಸಿ ಚೌಕಕಾಲದ ಪುರಂದರದಾಸರ ಕೀರ್ತನೆಯನ್ನು ಹಾಡಿದರು.
ಕೊನೆಗೆ ದಿವ್ಯನಾಮ ಸಂಕೀರ್ತನೆ, ಅಭಂಗ ಮತ್ತು ದೇವರ ನಾಮಗಳನ್ನು ಹಾಡಿದರು. ಪಿಟೀಲಿನಲ್ಲಿ ತಿರುವಿಳ ವಿಜು ಎಸ್. ಆನಂದ್ , ಮೃದಂಗದಲ್ಲಿ ಬಾಲಕೃಷ್ಣ ಕಾಮತ್ ಕೊಚ್ಚಿ, ಘಟಂನಲ್ಲಿ ಶ್ರೀಜಿತ್ ವೆಳ್ಳತಂಜೂರ್ ಮತ್ತು ಮೋರ್ಸಿಂಗ್ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ ಸಾಥ್ ನೀಡಿದರು.
ಕೃಷ್ಣ ರಂಜಿನಿ