ಅಚ್ಚುಕಟ್ಟಾಗಿ ಅಬ್ಬರಿಸಿದ ಭೌಮಾಸುರ
Team Udayavani, Feb 21, 2020, 5:10 AM IST
ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಕಾಲಮಿತಿಯ ಯಕ್ಷತಾರಾ ಮೇಳ ಬೆಳ್ಮಣ್ಣು ಇದರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಪ್ರದರ್ಶಿತವಾದುದು ಅಮೃತ ಸೋಮೇಶ್ವರ ವಿರಚಿತ “ಭೌಮಾಸುರ ‘ ಪ್ರಸಂಗ. ಭಾಗವತರಾಗಿ ದಯಾನಂದ ಕೋಡಿಕಲ…, ಮದ್ದಳೆ ವಾದನದಲ್ಲಿ ಜಯಕರ ಪಂಡಿತ್, ಚೆಂಡೆವಾದಕರಾಗಿ ಸ್ಥಳೀಯ ಪ್ರತಿಭೆ ಸುಮಿತ್ ಆಚಾರ್ಯ ಕಿನ್ನಿಕಂಬಳ, ಚಕ್ರತಾಳದಲ್ಲಿ ಧನುಷ್ ಎಕ್ಕಾರು ಭಾಗವಹಿಸಿದ್ದರು.
ಅಮಿತಾ ಪೊಳಲಿ ದೇವೇಂದ್ರನಾಗಿ ಸೊಗಸಾದ ಮಾತುಗಾರಿಕೆ, ಕುಣಿತಗಳಿಂದ ಮನಗೆದ್ದರೆ, ಆಶಿತಾ ಸುವರ್ಣರವರ ನರಾಕಾಸುರನ ಪಾತ್ರ ಅಬ್ಬರದ ಸುಂದರ ರಂಗಚಲನೆ, ಗಂಭೀರ ಧ್ವನಿಯ ಸ್ಪಷ್ಟವಾದ ಮಾತುಗಳಿಂದ ವೀರರಸದ ಸಮರ್ಥ ಅಭಿವ್ಯಕ್ತಿ ಎನಿಸಿತು. ಮುರಾಸುರನಾಗಿ ಚರಣ್ರಾಜ್ ಕೆಲವೇ ನಿಮಿಷಗಳ ಅವಧಿಯ ಪಾತ್ರವಾದರೂ ಚೆಂದದ ಅಭಿನಯದಿಂದ ರಂಗವನ್ನು ತುಂಬಿದರು. ತಾರನಾಥ ವರ್ಕಾಡಿ ಹಾಗೂ ಅವರ ಪುತ್ರಿ ಆಜ್ಞಾಸೋಹಮ್ರವರ ಜೋಡಿ ಶ್ರೀಕೃಷ್ಣ- ಸತ್ಯಭಾಮರಾಗಿ ಸು#ಟವಾದ ಹಾಸ್ಯ-ಲಾಸ್ಯ ಭರಿತ ಸಂಭಾಷಣೆ ಮತ್ತು ಮೋಹಕವಾದ ನಾಟ್ಯಗಾರಿಕೆಗಳಿಂದ ಪ್ರಮುಖ ಆಕರ್ಷಣೆ ಎನಿಸಿತು. ಭಾವಾಭಿನಯ ಪ್ರಾಸಬದ್ಧ ನುಡಿಗಳಿಂದ, ತಾತ್ವಿಕ ಚಿಂತನ ಲಹರಿಗಳಿಂದ ವರ್ಕಾಡಿ ರಂಜಿ ಸಿ ದರೆ ಸಂತಸ, ಕುತೂಹಲ, ಭಯ, ಹಠ, ವೀರತನ ಹೀಗೆ ಸರ್ವಭಾವಗಳನ್ನೂ ಮುದ್ದು ಮಾತುಗಳು ನೃತ್ಯಾಭಿನಯಗಳ ಮೂಲಕ ತೋರ್ಪಡಿಸಿದ ಸತ್ಯಭಾಮಾ ಪಾತ್ರಧಾರಿ ಆಜ್ಞಾಸೋಹಮ್ ತಾನು ಪ್ರತಿಭಾವಂತ ಕಲಾವಿದೆ ಎಂಬುದನ್ನು ಸಾಬೀತು ಪಡಿಸಿದರು. ಚಿಕ್ಕಚೊಕ್ಕ ಅಚ್ಚುಕಟ್ಟಾದ ಯಕ್ಷಗಾನ ದಯಾನಂದ ಕೋಡಿಕಲ್ ಭಾಗವತಿಗೆ ಸುಮಧುರ, ಉಳಿದ ಹಿಮ್ಮೇಳಗಳೂ ಪೂರಕ ಮತ್ತಷ್ಟು ಪಾತ್ರಗಳ ಸೇರ್ಪಡೆ, ಅಂತ್ಯದಲ್ಲಿ ಮಂಗಳ ನೃತ್ಯವಂದನ ಅಗತ್ಯವಿದೆ ಎಂದೆನಿಸಿತು.
ಇದು ಪ್ರಾರಂಭ ಮಾತ್ರಾ, ಬಹಳಷ್ಟು ಪರಿಷ್ಕಾರ ಮಾಡಲಿಕ್ಕಿದೆ. ತೆಂಕುತಿಟ್ಟಿನ ಸಂಪ್ರದಾಯ, ಕಲಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಬಡಗಿನ ಕೆರೆಮನೆ ಮೇಳದ ಮಾದರಿಯಲ್ಲಿ ಮುಂದುವರಿಯುವ ಅಭಿಲಾಷೆ ನಮ್ಮದು ಎಂಬ ವರ್ಕಾಡಿಯವರ ಯೋಚನೆ- ಯೋಜನೆಗಳು ಸಾಕಾರಗೊಳ್ಳುವಂತಾಗಲಿ.
– ರಮೇಶ್ ರಾವ್, ಕೈಕಂಬ