ಧನ್ಯಶ್ರೀ ಗಾಯನ
Team Udayavani, Dec 15, 2017, 3:13 PM IST
ವಿದ್ವಾನ್ ಕಾಂಚನ ಎ. ಈಶ್ವರ ಭಟ್ ನಿರ್ದೇಶನದಲ್ಲಿ ಪುತ್ತೂರಿನ ಸುನಾದ ಸಂಗೀತ ಕಲಾಶಾಲೆಯು ಕಳೆದ 13 ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವ, ತಿಂಗಳ ಸರಣಿ ಕಾರ್ಯಕ್ರಮ ಸುನಾದ ಯುವದನಿಯ 160ನೇ ಸಂಚಿಕೆಯ ಕಛೇರಿಯು ಡಿ.3ರಂದು ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಧನ್ಯತಾ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ವಯಲಿನ್ನಲ್ಲಿ ಕಾರ್ತಿಕೇಯ ಬೆಂಗಳೂರು, ಮೃದಂಗದಲ್ಲಿ ಕೃಷ್ಣಪವನ್ ಕುಮಾರ್ ಸಹಕರಿಸಿದರು.
ಕಛೇರಿಯು ಸಾನಂದಂ ಕಮಲ ಎಂಬ ಚತುರ್ ರಾಗಮಾಲಿಕೆಯ ಕೃತಿಯಿಂದ ಪ್ರಾರಂಭಗೊಂಡಿತು. ಬಳಿಕ ಅಠಾಣ ರಾಗದ ಅನುಪಮ ಗುಣಾಂಬುದಿ ಕೃತಿಯು ಸುಂದರವಾಗಿ ಮೂಡಿಬಂತು. ಅನಂತರ ಮಾಯಾಮಾಳವಗೌಳ ರಾಗದ ದೇವದೇವ ಕಲಯಾಮಿತೆ ಚುಟುಕಾದ ಆಲಾಪನೆ, ನೆರವಲ್ ಹಾಗೂ ಸ್ವರ ಕಲ್ಪನೆಯೊಂದಿಗೆ ಭಾವಪ್ರಧಾನವಾಗಿ ಪ್ರಸ್ತುತಗೊಂಡಿತು. ಧನ್ಯಾಸಿ ರಾಗದ ಸಂಗೀತ ಜ್ಞಾನಮು ಕೃತಿಯು ಕಛೇರಿಯ ವೇಗವನ್ನು ಹೆಚ್ಚಿಸಿತು. ಅನಂತರ ಆರಭಿ ರಾಗದ ಲಾಲಿಸಿದಳು ಮಗನಾ ಕೃತಿಯು ಭಾವಪೂರ್ಣವಾಗಿ ಮೂಡಿಬಂತು.
ಪ್ರಧಾನ ಪ್ರಸ್ತುತಿಯಾಗಿ ಷಣ್ಮುಖಪ್ರಿಯ ರಾಗದ ಮಾತಂಗಿ ಮಾಮಧುರೈ ಮೀನಾಕ್ಷೀ ಎಂಬ ಖಂಡತ್ರಿಪುಟ ತಾಳದ ಪಲ್ಲವಿ ಪ್ರಸ್ತುತ ಗೊಂಡಿತು. ಪ್ರೌಢ ಸಂಚಾರಗಳಿಂದ ರಾಗವು ವಿದ್ವತ್ಪೂರ್ಣ ನೆರವಲ್ ಹಾಗೂ ಅಚ್ಚುಕಟ್ಟಾದ ಸ್ವರಕಲ್ಪನೆಯೊಂದಿಗೆ ಸಮರ್ಥವಾಗಿ ಮೂಡಿ ಬಂತು. ಬಳಿಕ ರೇವತಿ ರಾಗದ ಸುಮನಸ ವಂದಿತ ಎಂಬ ದೇವರನಾಮ ಹಾಗೂ ಶಂಕರ ಶಿವ ಎಂಬ ಭಜನ್ ಮೂಲಕ ಕಛೇರಿಯು ಕೇಳುಗರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಸಂಧ್ಯಾ