ಗಣಪಯ್ಯ, ಗಣೇಶ್ ಭಟ್ಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ
Team Udayavani, May 24, 2019, 6:00 AM IST
ಯಕ್ಷಗಾನ ಕಲಾರಂಗದ ವಾರ್ಷಿಕ ತಾಳಮದ್ದಲೆ ಸಪ್ತಾಹದ ಮಟ್ಟಿ ಮುರಳಿಧರ ರಾವ್ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ.ವಿ. ಗಣಪಯ್ಯ,ಪೆರ್ಲ ಕೃಷ್ಣ ಭಟ್ ನೆನಪಿನ ಈ ಪ್ರಶಸ್ತಿಗೆ ನೀವಣೆ ಗಣೇಶ್ ಭಟ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಮೇ 25 ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.
ಕೆ. ವಿ. ಗಣಪಯ್ಯ
ಸುಳ್ಯದ ಎಡಮಂಗಲದ ಕೆ. ವಿ. ಗಣಪಯ್ಯ ನಿವೃತ್ತ ಹಿಂದಿ ಅಧ್ಯಾಪಕರು. 87ರ ಹರೆಯದ ಅವರು ಸ್ವರಭಾರ, ಪುರಾಣದ ಅನುಭವದಿಂದ ಪ್ರಸಿದ್ಧ ಅರ್ಥಧಾರಿಯಾಗಿ ಮಾನ್ಯರು.
ಗಣಪಯ್ಯನವರದ್ದು ಬಹು ಮುಖಿ ವ್ಯಕ್ತಿತ್ವ. ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಯುವಸಂಘಟನೆ, ಗ್ರಾಮೀಣಾಭಿವೃದ್ಧಿ, ಯಕ್ಷಗಾನ ಪುರಾಣ ಪ್ರವಚನ ಇವುಗಳಲ್ಲಿ ತೊಡಗಿಸಿ ಕೊಂಡವರು. ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನದತ್ತ ಒಲವು ಬೆಳೆಸಿ ಕೊಂಡವರು. ಕೊಳಂಬೆ ಪುಟ್ಟಣ್ಣಗೌಡರ ಮಾರ್ಗದರ್ಶನ ಇದಕ್ಕೆ ಪೂರಕವಾಯಿತು. ಅರ್ಥಧಾರಿಯಾಗಿ ಹಲವು ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ಚಿತ್ರಿಸಿದವರು. ಪಾತ್ರದ ಸ್ವಭಾವ ಅರಿತು ಅಭಿವ್ಯಕ್ತಿಸುವ ಕಲೆ ಅವರಿಗೆ ಕರಗತವಾಗಿತ್ತು. ಎಲ್ಲಾರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷ್ಣ, ಕೌರವ, ಮಾಗಧ, ಭೀಮ, ದಶರಥ, ಮೊದಲಾದ ಪಾತ್ರಗಳಲ್ಲಿ ಚಾಪು ಒತ್ತಿದ್ದರು. ಯಾವುದೇ ಶ್ರುತಿಗೆ ಅನುಕೂಲವಾಗಬಲ್ಲ ಸ್ವರ ಸಂಪತ್ತು ಅವರದಾಗಿತ್ತು. ಮೊದಮೊದಲು ದೀರ್ಘ ಪೀಠಿಕೆ ಅರ್ಥ ವಿಸ್ತಾರದಿಂದ ಕೂಡಿದ್ದ ಮಾತುಗಾರಿಕೆಯನ್ನು ಕಾಲಕ್ರಮೇಣ ಹೃಸ್ವಗೊಳಿಸಿ ಅಧಿಕ ಪರಿಣಾಮ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅವರಾಗಿ ಯಾರಮೇಲೂ ಸವಾರಿ ಮಾಡುತ್ತಿರಲಿಲ್ಲ. ಯಾರಾದರು ವಾದಕ್ಕೆ ಮುಂದಾದರೆ ಬಿಟ್ಟು ಕೊಡುತ್ತಿರಲಿಲ್ಲ. ಪಾತ್ರ ತನ್ಮಯತೆಯಿಂದ ಅರ್ಥ ಹೇಳುತ್ತಿದ್ದರು. ಕಾವ್ಯಾತ್ಮಕ ಶೈಲಿಯಲ್ಲಿ ಹೊಸಹೊಸ ಹೊಳಹು ಅನಾವರಣಗೊಳ್ಳುತ್ತಿತ್ತು.
ನೀವಣೆ ಗಣೇಶ್ ಭಟ್
ಎಪ್ಪತ್ತೈದರ ಹರಯದ ಗಣೇಶ್ ಭಟ್ಟರು ಶಿವಮೊಗ್ಗದ ನೀವಣೆಯವರು. ಎಸ್.ಎಸ್.ಎಲ್.ಸಿ ಬಳಿಕ ಹಿಂದಿರತ್ನ ತೇರ್ಗಡೆಯಾಗಿ ನಾಲ್ಕುವರ್ಷ ಬಂಟ್ವಾಳದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಅನಂತರ ವೃತ್ತಿ ತ್ಯಜಿಸಿ ಹರಿಕಥೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಅಣ್ಣನಿಂದ ಸಂಗೀತಾಭ್ಯಾಸ, ಅರಣ್ಯಕ ಪರ್ಯಂತ ವೇದಾಧ್ಯಯನ ಸಂಸ್ಕೃತ ಮತ್ತು ವೇದಾಂತ ಅಧ್ಯಯನ ನಡೆಸಿದರು. ಬಹುಭಾಷಾ ವಿದ್ವಾಂಸರು.
ಹರಿದಾಸರಾಗಿ, ಯಕ್ಷಗಾನ ವೇಷಧಾರಿಯಾಗಿ, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ, ಪ್ರವಚನಕಾರರಾಗಿ ಪ್ರಸಿದ್ಧರು. ಸಾಮಗ ನಾಗಾಭಟ್ಟರಿಂದ ಹರಿಕಥಾ ಉಪದೇಶ ಪಡೆದು ನಲವತ್ತೈದು ವರ್ಷಗಳಿಂದ ಹರಿದಾಸರಾಗಿ ಆಧ್ಯಾತ್ಮಿಕ ಅನುಸಂಧಾನ ನಡೆಸುತ್ತಾ ಬಂದವರು. ಪ್ರವಚನಕಾರರಾಗಿ, ಭಾಗವತ, ರಾಮಾಯಣ, ಮಹಾಭಾರತ, ಭಗವದ್ಗೀತೆ ಹಾಗೂ ಶಾಂಕರ ತತ್ವಗಳನ್ನಾಧರಿಸಿ ಪ್ರವಚನ ನೀಡುತ್ತಾ ಆಸ್ತಿಕ ಮನಸ್ಸುಗಳನ್ನು ಬೆಳೆಸಿದವರು. ಯಕ್ಷಗಾನ ವೇಷಧಾರಿಯಾಗಿ ನಾಗರಕೋಡಿಗೆ, ಇಡಗುಂಜಿ, ಕರ್ನಾಟಕ ಮೇಳಗಳಲ್ಲಿ ಐದು ವರ್ಷ ತಿರುಗಾಟ ಮಾಡಿದ್ದಾರೆ. ಮಾತುಗಾರಿಕೆಯಿಂದ ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.
ಸರಸ ಸಂವಾದದ ಮೂಲಕ ಆಟ ಕಳೆಗಟ್ಟಲು ಕಾರಣರಾಗಿದ್ದಾರೆ. ತಾಳಮದ್ದಲೆ ಅರ್ಥಧಾರಿಯಾಗಿ ಅವರ ಕೊಡುಗೆ ಅನನ್ಯ. ಹರಿಕಥಾ ಕಾಲಕ್ಷೇಪದ ವಿಪುಲ ಅನುಭವದಿಂದ ಅರ್ಥವಿಸ್ತಾರ ಮತ್ತು ಸರಸ ಸಂವಾದದಿಂದ ಶ್ರೋತೃಗಳ ಪುರಾಣಜ್ಞಾನ ಹೆಚ್ಚಿಸಲು ಕಾರಣರಾಗಿದ್ದಾರೆ. ಶಾಸ್ತ್ರದ ಶಿಸ್ತು ಪಾತ್ರ ನಿರ್ವಹಣೆಗೆ ಸಂಬಂಧಿಸಿ ಪೂರಕ ಪೌರಾಣಿಕ ಮಾಹಿತಿ ಇವರ ಅರ್ಥಗಾರಿಕೆಯ ಇನ್ನೊಂದು ಧನಾತ್ಮಕ ಅಂಶ.
– ಪೊ| ನಾರಾಯಣ ಎಂ. ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ