ಕುತೂಹಲಕಾರಿ ಮರ್ಡರ್ ಮಿಸ್ಟ್ರಿ ಆನಿದ ಮನದಾನಿ ಮರ್ಡರ್ ಮಿಸ್ಟ್ರಿ ಕತೆಯನ್ನು ರಂಗದ ಮೇಲೆ
Team Udayavani, Dec 13, 2019, 4:10 AM IST
ಮರ್ಡರ್ ಮಿಸ್ಟ್ರಿ ಕತೆಯನ್ನು ರಂಗದ ಮೇಲೆ ಪ್ರಯೋಗಿಸುವುದು ಅಷ್ಟು ಸುಲಭ ಮಾತಲ್ಲ.ಸಮಗ್ರ
ರಂಗಭೂಮಿ ನಿರ್ವಹಣೆಯ ಪರಿಕಲ್ಪನೆ, ಅನುಭವ, ರಂಗ ತಾಲೀಮು, ತಂತ್ರಗಾರಿಕೆಗಳಿಂದ ಮಾತ್ರ
ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳ್ಳುವುದು ಸಾಧ್ಯ. ಅಂತಹ ಮರ್ಡರ್ ಮಿಸ್ಟ್ರಿ ಕತೆಯನ್ನು
ಸವಾಲಾಗಿ ಸ್ವೀಕರಿಸಿ ರಂಗ ಪ್ರಯೋಗದ ಪ್ರಯತ್ನ ಮಾಡಿದವರು ಸೃಜನಶೀಲ ನಿರ್ದೇಶಕ ಸುರೇಶ್
ಶೆಟ್ಟಿ ಗುಂಡಿಬೈಲ್.ಇತ್ತೀಚೆಗೆ ಉಡುಪಿ ಮಥುರಾ ಛತ್ರದಲ್ಲಿ ಶ್ರೀ ಕೃಷ್ಣ ಕಲಾವಿದರು ಹವ್ಯಾಸಿ ತಂಡ
ಉಡುಪಿ ಪ್ರಸ್ತುತಪಡಿಸಿದ ತುಳುನಾಟಕ “ಆನಿದ ಮನದಾನಿ’. ಇತರ ಹಾಸ್ಯ ಪ್ರಧಾನ ನಾಟಕಗಳಿಗಿಂತ
ವಿಭಿನ್ನವಾಗಿ ಕೊಲೆಯ ಸುತ್ತ ಕೇಂದ್ರೀಕರಿಸಿದ ತಾರ್ಕಿಕ ಕಥಾನಕ.
ಸಮಾಜ ವಿರೋಧಿ ದಂಧೆಯ ಬೇರನ್ನು ಕಿತ್ತೂಗೆಯುವ ದಿಟ್ಟ ನಿರ್ಧಾರ ಒಂದು ಕೊಲೆಯಲ್ಲಿ ಪರ್ಯಾವಸಾನಗೊಂಡರೂ ಹಲವು ತಿರುವುಗಳನ್ನು ಪಡೆದುಕೊಳ್ಳುವ ನಿರೂಪಣಾ ಶೈಲಿ ಪ್ರೇಕ್ಷಕರನ್ನು ಕೊನೆವರೆಗೆ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಪ್ರತಿ ಫ್ಲ್ಯಾಶ್ಬ್ಯಾಕ್ನ ಒಂದೊಂದು ದೃಶ್ಯಗಳನ್ನು ನೋಡಬೇಕೆನಿಸುವ ಕೌತುಕತೆ ಜನರಲ್ಲಿ ಉಳಿಸುತ್ತದೆ. ಇಂತಹ ಸೂಕ್ಷ್ಮ ಕತೆಯನ್ನು ರಚಿಸಿದ ಸುರೇಶ್ ಶೆಟ್ಟಿಯವರು ಅನಿರೀಕ್ಷಿತವಾಗಿ ನಡೆವ ಕೊಲೆಯೊಂದನ್ನು ವಾಚ್ಯಾವಾಗಿಸುತ್ತಾ ಒಂದು ಉತ್ತಮ ಸಂದೇಶದೊಂದಿಗೆ ಕತೆಗೆ ಹೊಸ ಆಯಾಮ ನೀಡಿ ಕೊನೆಗೊಳಿಸಿದ ವಿಧಾನ ಅದ್ಭುತವಾಗಿತ್ತು.
ಇದಕ್ಕೆ ಪೂರಕವಾದ ಕಲಾವಿದರ ಸಮಯ ಪ್ರಜ್ಞೆ, ನಟನೆ, ಚಾಕಚಕ್ಯತೆ ಚೇತೋಹಾರಿ.
ನಾಟಕದ ಸಹಜತೆಗೆ ಕತ್ತಲೆ ಬೆಳಕಿನ ಅವಶ್ಯಕತೆಯು ಪರಿಣಾಮಕಾರಿಯಾಗಿ ಮೂಡಿಬರುವಂತೆ ಬೆಳಕಿನ ಸಂಯೋಜನೆಯಲ್ಲಿ ಸಂದೀಪ್ ಪಾಲನ್ ಮತ್ತು ಧ್ವನಿಯಲ್ಲಿ ಅನಿಲ್ ಸೌಂಡ್ಸ್ ಇವರ ತಾಂತ್ರಿಕತೆ ಗಮನಾರ್ಹವಾಗಿತ್ತು. ನಾಟಕಕ್ಕೆ ಪೂರಕವಾದ ಗೋಪಾಲಕೃಷ್ಣ ಶೆಟ್ಟಿಯವರ ಸಂಗೀತ ಸಿನೆಮಾ ಎಫೆಕ್
rನ ಅನುಭವ ನೀಡುತ್ತದೆ. ವಿಶೇಷವಾಗಿ ಹೊಸ ಕಲಾವಿದರ ಪ್ರಬುದ್ಧ ಅಭಿನಯವನ್ನು ಅನಾವರಣ ಗೊಳಿಸುವಲ್ಲಿ ನಿರ್ದೇಶಕರ ಪರಿಶ್ರಮ ಶ್ಲಾಘನೀಯ. ಅದರಲ್ಲೂ ನಾಯಕಿ ಪಾತ್ರಧಾರಿಯ (ನಿಖೀತಾ)
ಅಭಿನಯ ಮನೋಜ್ಞವಾಗಿತ್ತು. ಅಜಿತ್ ಶೆಟ್ಟಿ, ಸ್ನೇಹ, ಲಿಖೀತ್, ರಾಹುಲ್ ಇವರ ಕಾಂಬಿನೇಷನ್ನಲ್ಲಿ ಮೂಡಿದ ಹಾಸ್ಯ ಪುಷ್ಕಳವಾಗಿ ತ್ತು. ಉಳಿದಂತೆ ನಾಯಕ ವಿಕಾಸ್, ತಮ್ಮನಾಗಿ ಶ್ರೀಕಾಂತ್ ಶೆಟ್ಟಿ,
ಅಪ್ಪನಾಗಿ ಪ್ರವೀಣ್ ಆಚಾರ್ಯ, ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮನೋಜ್, ಅವಿನಾಶ್ ಮತ್ತು ಸಚಿನ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆಯಾಗಿ ಹಾಸ್ಯವನ್ನು ಹೊರತುಪಡುಸಿದರೆ ಈ ತುಳು
ನಾಟಕದ ಕಥಾ ನಿರೂಪಣೆ ಸಿನಿಮಾ ಸಾದೃಶ್ಯವಾಗಿದೆ ಎಂದರೂ ಅತಿಶಯವಿಲ್ಲ.
ಉಮೇಶ್ ಆಚಾರ್ಯ, ಕೊಳಂಬೆ