ಕುಂದಗನ್ನಡದ ಸೊಗಡಿನಲ್ಲಿ ನರ-ಹರಿ ಹೊಕೈ
ಯಕ್ಷದೀಪ ಕಲಾಟ್ರಸ್ಟ್ ಮಲ್ಯಾಡಿ ಪ್ರಸ್ತುತಿ
Team Udayavani, Aug 30, 2019, 5:00 AM IST
ಕುಂದಗನ್ನಡ ಕೇವಲ ಹಾಸ್ಯಕ್ಕಷ್ಟೆ ಅಲ್ಲ ನವರಸಾಭಿವ್ಯಕ್ತಿಗೂ ಸಮರ್ಥ ಭಾಷೆ ಎನ್ನುವುದನ್ನು ಈ ಪ್ರಯೋಗ ಸಾಕ್ಷೀಕರಿಸಿತು. ಸಂಪೂರ್ಣ ಕುಂದಗನ್ನಡ ಸಂಭಾಷಣೆ ಸನ್ನಿವೇಶಕ್ಕನುಗುಣವಾಗಿ ವ್ಯಕ್ತವಾಯಿತು. ಗಂಭೀರ ಸನ್ನಿವೇಶ, ಪಾತ್ರಗಳು ಮೂಲ ಚೌಕಟ್ಟಿನಲ್ಲಿಯೇ ಕಾಣಿಸಿದವು.
ಕನ್ನಡ, ತುಳು ಭಾಷೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಯಕ್ಷಗಾನ ಇಂಗ್ಲಿಷ್, ಹಿಂದಿ, ಕೊಂಕಣಿ, ಹವ್ಯಕ, ಸಂಸ್ಕೃತ ಭಾಷೆಗಳಲ್ಲಿಯೂ ಆಗಾಗ ಪ್ರದರ್ಶನಗೊಂಡಿದೆ. ಇದೀಗ ಆ ಸರದಿ ಕುಂದಗನ್ನಡಕ್ಕೆ. ಇಲ್ಲಿಯ ತನಕ ಕೆಲವೊಂದು ಪ್ರಸಂಗಗಳಲ್ಲಿ ಹಾಸ್ಯ ದೃಶ್ಯಕ್ಕೆ ಸೀಮಿತವಾಗಿದ್ದ ಕುಂದಗನ್ನಡ ಇಡೀ ಪ್ರಸಂಗವನ್ನೇ ಆಕ್ರಮಿಸಿಕೊಳ್ಳುವ ಮೂಲಕ ಕುಂದಗನ್ನಡದ ಪ್ರಬುದ್ಧತೆ ಎತ್ತಿ ಹಿಡಿದಿದೆ.
ಯಕ್ಷಗುರು, ಪ್ರಸಂಗಕರ್ತ ಎಂ.ಎಚ್.ಪ್ರಸಾದ್ ಕುಮಾರ್ ಮೊಗೆಬೆಟ್ಟು ಕುಂದಾಪುರ ಕನ್ನಡದಲ್ಲಿ ಯಕ್ಷಗಾನ ಪ್ರಸಂಗ ಬರೆಯುವ ಸಾಹಸ ಮಾಡಿ ಯಶಸ್ಸು ಸಾಧಿಸಿದ್ದಾರೆ. ಯಕ್ಷಲೋಕಕ್ಕೆ ಕೃಷ್ಣಾರ್ಜುನ ಕಾಳಗ ಪ್ರಸಂಗ ಸಮಗ್ರ ಕುಂದಗನ್ನಡ ಪದ್ಯ ಸಾಹಿತ್ಯದೊಂದಿಗೆ ನರ-ಹರಿ ಹೊ ಕೈ ಎಂಬ ಅಭಿನಾಮದಿಂದ ಸಮರ್ಪಣೆಯಾಗಿದೆ. ಪ್ರಥಮ ಪ್ರದರ್ಶನ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಕ್ಷದೀಪ ಕಲಾಟ್ರಸ್ಟ್ ಮಲ್ಯಾಡಿ ಸಂಯೋಜನೆಯಲ್ಲಿ ಯಶಸ್ವಿ ಕಲಾವೃಂದದ ಸಹಕಾರದಲ್ಲಿ ಪ್ರದರ್ಶಿತಗೊಂಡಿತು.
ಕುಂದಗನ್ನಡ ಕೇವಲ ಹಾಸ್ಯಕ್ಕಷ್ಟೆ ಅಲ್ಲ ನವರಸಾಭಿವ್ಯಕ್ತಿಗೂ ಸಮರ್ಥ ಭಾಷೆ ಎನ್ನುವುದನ್ನು ಈ ಪ್ರಯೋಗ ಸಾಕ್ಷೀಕರಿಸಿತು. ಸಂಪೂರ್ಣ ಕುಂದಗನ್ನಡ ಸಂಭಾಷಣೆ ಸನ್ನಿವೇಶಕ್ಕನುಗುಣವಾಗಿ ವ್ಯಕ್ತವಾಯಿತು. ಗಂಭೀರ ಸನ್ನಿವೇಶ, ಪಾತ್ರಗಳು ಮೂಲ ಚೌಕಟ್ಟಿನಲ್ಲಿಯೇ ಕಾಣಿಸಿದವು. ಕಲಾವಿದರೂ ಕೂಡ ಸನ್ನಿವೇಶದೊಳಗೆ ಅನಗತ್ಯ ಹಾಸ್ಯ ಸಂಭಾಷಣೆಯನ್ನು ಎಳೆದು ತರಲಿಲ್ಲ. ವಾಲೆ ಭಾಗ್ಯವ ಉಳಿಸಿಕೊಡು ಎಂದು ಅಣ್ಣನಲ್ಲಿ ಮೊರೆ ಇಡುವ ಸಹೋದರಿ, ಗಂಡ ಕಾಡಿನಲ್ಲಿದ್ದಾನೆ ಹೆಂಡತಿ ಸುಖದ ಸುಪತ್ತಿಗೆಲ್ಲಿ ತವರಿನಲ್ಲಿದ್ದಾಳೆ ಎಂದು ಜರಿಯುವ ರುಕ್ಮಿಣಿ, ಕೊಟ್ಟ ವಚನವೇ ಶ್ರೇಷ್ಠ ಎಂದು ವಾದಿಸುವ ಅಭಿಮನ್ಯುವಾಗಲಿ, ಸತಿಯ ಕೋರಿಕೆ ನಯವಾಗಿ ಧಿಕ್ಕರಿಸುವ ಅರ್ಜುನನಾಗಲಿ, ತಮ್ಮನ ಸಮರ್ಥಿಸಿಕೊಳ್ಳುವ ಅಣ್ಣ ಭೀಮ ಹೀಗೆ ಸನ್ನಿವೇಶದಲ್ಲಿ ಪೂರ್ತಿ ಕುಂದಾಪ್ರ ಕನ್ನಡ ಬಳಕೆ ಇತ್ತು.
ಕವಿ ಪದ್ಯದಲ್ಲಿ ಛಂದಸ್ಸುಗಳನ್ನು ಬಳಸಿಕೊಂಡ ಬಗೆ ಅಚ್ಚರಿ ಎನಿಸುತ್ತದೆ. ಕುಂದಾಪ್ರ ಕನ್ನಡ ಹೃದಯ ಭಾಷೆ. ಭಾವನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಇಲ್ಲಿ ಸೂಚಿಸಬಹುದು. ಆದರೆ ಬರೆಯುವಾಗ, ಅದರಲ್ಲಿ ಯಕ್ಷಸಾಹಿತ್ಯಕ್ಕೆ ಹೊಂದಿಸುವಾಗ ಮಾತ್ರಾಗಣಗಳನ್ನು ಜೋಡಿಸುವುದು ಪಂಥವೇ ಸರಿ. ಯಕ್ಷಛಂದಸ್ಸಿನ ಹಿಡಿತವಿರುವ ಪ್ರಸಾದ ಕುಮಾರ್ ಹೃದ್ಯಭಾವವನ್ನು ಕಡೆದುಕೊಡುವುದು ಹೇಗೆಂದರೆ ಪಣ್ಕ್ ಗಯನ ದೆಶಿಯಿಂದ ಕಾಲ್ ಕೆದ್ರುತ್ತ| ಕೊಣ ಬಂದ್ಯನಾ ಅರ್ಜುನ|| ಕುಣಿಕೆಯು ಅವ ನಿಮ್ಗೆ| ಎಣ್ಸೆ ನೀ ಕ್ಯಾಂಬಲೆ| ಹಣಿಕೆ ಮಾಡುವೆ ವಂದನೆ||. ಈ ಒಂದೇ ಪದ್ಯದಲ್ಲಿ ಪಣ್ಕ್, ಕೊಣಕ್, ಕುಣಿಕ್, ಹಣಿಕ್ ಪ್ರಯೋಗಗಳ ಬಳಕೆ ಕಾಣಬಹುದು.
ಪ್ರಾರಂಭದಲ್ಲಿ ಭಾಗವತ ಲಂಭೋದರ ಹೆಗಡೆ ಅವರು ಕಾಂಬ್ರಲೆ ಶ್ರೀ-ಹರಿ ಬಂದ| ತ| ನ್ನಂಬ್ದರ ಕಾಯುವೆನೆಂದ || ಚಂದಗ್ವಾಂಪಿಯು ಕಿಟ್ಟ| ಪದ್ಯದೊಂದಿಗೆ ಹೊಸ ಸಂಚಲನ ಮೂಡಿಸಿದರು. ರುಕ್ಮಿಣಿ-ಸುಭದ್ರೆಯರ ಮಾತಿನ ಚಕಮಕಿಯ ಪದ್ಯಗಳಿಗೆ ಹೊಸ ಜೋಶ್ ನೀಡಿದರು. ಪ್ರಸಾದ್ ಕುಮಾರ್ ಅವರ ಕಂಠಸಿರಿಯಲ್ಲಿ ಪುಣ್ಯಾಸ್ತ್ರಿ ಬಾರೆ ಜಾಣೆ|ಮನ್ಸಂಗ್ ಇಪ್ª| ನಿನ್ನಲ್ಲಿ ಹೇಳ್ತೆ ಕೇಣೆ||, ದ್ವಂದ್ವ ಸಂಕಟಕ್ಕೆ ಸಿಲುಕಿದೆ ಎನ್ನುವುದನ್ನು ಪಾರ್ಥ ಸತಿ-ಸುತನಲ್ಲಿ ಅರುಹುದನ್ನು ಹೇಳ್ ಅಪ್ಪ ಅಬ್ಬಿಗೆ ಹೊಡಿತಾ| ಹೇಳ್ದಿರೆ ಅಪ್ಪ ನಾಯಿತಿಂತಾ…ಪದ್ಯ ಭಾರಿ ಕರತಾಡನ ಪಡೆದುಕೊಂಡಿತು. ಹಿರಿಯ ಭಾಗವತ ಕೆ.ಪಿ ಹೆಗಡೆಯವರು ಆಟಕ್ಕೊಂದು ಹೊಸ ಹುರುಪು ನೀಡಿದರು. ಗಿರಿಗಿಂಟಿ ಗೋಪಾಲ ಭಾವಯ್ಯ| ಹಾಗೂ ಕೃಷ್ಣ ಅರ್ಜುನನಿಗೆ ಹೇಳುವ ಬಿಲ್ಗಾರ ನಾನೆಂಬ ಹಂಸಾಣಿ ನಿನಗುಂಟು| ಅದ್ಭುತವಾಗಿ ಮೂಡಿ ಬಂತು. ಮದ್ದಳೆಯಲ್ಲಿ ಎನ್.ಜಿ.ಹೆಗಡೆ, ದೇವದಾಸ್ ರಾವ್ ಕೂಡ್ಲಿ, ಚಂಡೆಯಲ್ಲಿ ಕೃಷ್ಣಾನಂದ ಶೆಣೈ, ಲೋಹಿತ್, ಭರತ್ ಚಂದನ್ ಸಾಥ್ ಉತ್ತಮವಾಗಿತ್ತು.ಆಖ್ಯಾನದಲ್ಲಿರುವ 40 ಪದ್ಯಗಳು ತೀರ ಅಪರೂಪವಾದ ಪದಗಳನ್ನು, ಪದ್ಯಗಳಾಗಿ ಯಕ್ಷ ಛಂದಸ್ಸಿನೊಳಗೆ ಹದವಾಗಿ ಕೆತ್ತಿಡುವಲ್ಲಿ ಕವಿ ಇಲ್ಲಿ ಶಿಲ್ಪಿ ಎಂದೆನಿಸಿಕೊಂಡಿದ್ದಾರೆ. ಶಶಿಕಾಂತ ಶೆಟ್ಟರು ಕೃಷ್ಣನಾಗಿ ಅದ್ಬುತ ಅಭಿನಯ ನೀಡಿದರು. ಅರ್ಜುನನಾಗಿ ಕಾಣಿಸಿಕೊಂಡವರು ಉಪ್ಪುಂದ ನಾಗೇಂದ್ರ ರಾವ್. ಸುಭದ್ರೆಯಾಗಿ ಹೆನ್ನಾಬೈಲ್ ಸಂಜೀವ ಶೆಟ್ಟಿ, ರುಕ್ಮಿಣಿಯಾಗಿ ಉಪ್ಪುಂದ ಗಣೇಶ ಭಾವನೆಗಳನ್ನು ಅಚ್ಚುಕಟ್ಟಾಗಿ ತೆರೆದಿಟ್ಟರು. ಅಭಿಮನ್ಯು ಹರೀಶ ಮೊಗವೀರ ಜಪ್ತಿ ತಾಯಿಯೊಂದಿಗಿನ ಬಾಲತನ, ತಂದೆ ಜೊತೆ ಸಂವಾದ ಎಲ್ಲವೂ ಉತ್ತಮ. ಭೀಮನಾಗಿ ಶ್ರೀಧರ ಭಂಡಾರಿ ಭದ್ರಾಪುರ ಭೇಷ್ ಎನಿಸಿಕೊಂಡರೆ, ದಾರುಕನಾಗಿ ಶಿವಾನಂದ ಕೋಟ ನಗೆಯ ಹೊನಲನ್ನು ಹರಿಸಿದರು.
ನಾಗರಾಜ್ ಬಳಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ