ಹೊಸ ಮೆರಗಿನಲ್ಲಿ ಬಂದ ಅರ್ಧ ಶತಮಾನ ಹಿಂದಿನ ಬಯ್ಯ ಮಲ್ಲಿಗೆ
Team Udayavani, Nov 30, 2018, 6:00 AM IST
ಹಾಸ್ಯ ಪ್ರಧಾನ ನಾಟಕಗಳದ್ದೇ ಪಾರಮ್ಯವಿರುವ ಈ ಕಾಲ ಘಟ್ಟದಲ್ಲಿ ಸಾಂಸಾರಿಕ ನಾಟಕಗಳಿಗೂ ಪ್ರೇಕ್ಷಕರಿದ್ದಾರೆ .ಅದನ್ನು ಕುಟುಂಬ ಸಮೇತರಾಗಿ ವೀಕ್ಷಿಸಲು ಬಯಸುವ ಪ್ರೇಕ್ಷಕರ ಸಂಖ್ಯೆ ಈಗಲೂ ಇದೆ. ಇಂಥ ನಾಟಕಗಳನ್ನು ಪ್ರದರ್ಶಿಸುವವರ ಕೊರತೆ ಮಾತ್ರವೇ ಇತ್ತು.ಎಂಬುದಕ್ಕೆ ಬಯ್ಯ ಮಲ್ಲಿಗೆ ಸಾಕ್ಷಿಯಾಯಿತು.
ತುಳು ನಾಟಕ ಎಂದರೆ ನಗಿಸಲಷ್ಟೇ ಸೀಮಿತ ಎಂದು ಭಾವಿಸಲಾಗುವ ಈ ದಿನಗಳಲ್ಲಿ ಹಿಂದಿನ ತುಳು ನಾಟಕದ ಘನತೆಯನ್ನು ಎತ್ತಿ ತೋರಿಸುವಂಥ ಒಂದು ಪ್ರಬುದ್ಧ ಸಾಂಸಾರಿಕ ನಾಟಕ ನ. 18ರಂದು ಸುರತ್ಕಲ್ಲಿನ ಬಂಟರ ಭವನದಲ್ಲಿ ಜರಗಿತು. ಪರದೆ ನಾಟಕಗಳು ಬಹುತೇಕ ನೇಪಥ್ಯಕ್ಕೆ ಸರಿದಿರುವ ಈ ದಿನಗಳಲ್ಲಿ 54 ವರ್ಷಗಳ ಹಿಂದೆ ಡಾ| ಸಂಜೀವ ದಂಡೆಕೇರಿ ಅವರು ಬರೆದಿರುವ, ಆ ಬಳಿಕ ಸಿನಿಮಾ ಕೂಡ ಆಗಿರುವ ಬಯ್ಯ ಮಲ್ಲಿಗೆ ನಾಟಕ ಪ್ರೇಕ್ಷಕರಿಂದ ತುಂಬಿದ್ದ ಸಭಾಂಗಣದಲ್ಲಿ ತುಳುವೆರೆ ಉಡಲ್ ಜೋಡು ಕಲ್ಲು ತಂಡದ ಕಲಾವಿದರಿಂದ ಪ್ರದರ್ಶನಗೊಂಡಿತು. ಈ ನಾಟಕದ ಕತೃ ಡಾ| ಸಂಜೀವ ದಂಡೆಕೇರಿ ಅವರ ಉಪಸ್ಥಿತಿಯೂ ಇತ್ತು.
ರಂಗ ಚಾವಡಿ ಮಂಗಳೂರು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆಯ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಒಂದು ಹೊಸ ಆಕರ್ಷಣೆ ಬೇಕು ಮತ್ತು ಹಿಂದಿನ ನಾಟಕದ ಭವ್ಯತೆಯನ್ನು ಈಗಿನ ತಲೆಮಾರಿಗೆ ತೋರಿಸಬೇಕು ಎಂಬ ಕಾರಣಕ್ಕಾಗಿ ಅರ್ಧ ಶತಮಾನದ ಹಿಂದಿನ ನಾಟಕವನ್ನು ಮತ್ತೆ ಅದೇ ಶೈಲಿಯಲ್ಲಿ ಪ್ರದರ್ಶಿಸಲಾಯಿತು. 5 ದಶಕಗಳ ಹಿಂದೆ ರಚಿತವಾದ ಕಾರಣದಿಂದ ಕೆಲವು ಅಂಶಗಳು ಈಗಿನ ದಿನ ಮಾನಕ್ಕೆ ಹೊಂದಿಕೊಳ್ಳುವುದಿಲ್ಲವಾದರೂ ಇಡೀ ನಾಟಕವು ಪ್ರೇಕ್ಷಕರನ್ನು ಸೆಳೆದು ನಿಲ್ಲಿಸುವಲ್ಲಿ ಸಫಲವಾಯಿತು. ಸುಮಾರು 3 ತಾಸು ಪ್ರದರ್ಶನಗೊಂಡ ಬಯ್ಯ ಮಲ್ಲಿಗೆಯಲ್ಲಿ ಕಥಾನಾಯಕಿ ಶಾಂತಿಯ ಪಾತ್ರದಲ್ಲಿ ಸುರೇಶ್ ಶೆಟ್ಟಿ ಜೋಡು ಕಲ್ಲು ಕಣ್ಣು ಒದ್ದೆಯಾಗುವಂತೆ ಮಾಡಿದರು. ರವಿಯ ಪಾತ್ರದಲ್ಲಿ ವಿಶ್ವ ಶೆಟ್ಟಿ ತೋಡಾರ್ ಉತ್ತಮವಾಗಿ ನಟಿಸಿದರು. ಯಾವ ಕಷ್ಟ ಬಂದರೂ ಹೇಗೆ ಎದೆಯೊಡ್ಡಿ ಎದುರಿಸಬೇಕು ಎಂಬುದನ್ನು ಅವರು ಮನೋಜ್ಞ ಅಭಿನಯ ಮತ್ತು ಅರಳು ಹುರಿದಂಥ ಮಾತುಗಾರಿಕೆಯಿಂದ ತೋರಿಸಿದರು. ಖಳ ನಾಯಕ ಸುಂದರನ ಪಾತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ ನಟನೆಯೂ ಅದ್ಭುತವಾಗಿತ್ತು. ಪ್ರತಿಯೊಂದು ಸಂಚು ಹೂಡಿದಾಗಲೂ ಹೆಬ್ಬೆರಳೆತ್ತಿ ಯಶಸ್ಸಿನ ಸಂಕೇತ ತೋರಿಸುತ್ತಿದ್ದ ಶೈಲಿ ಖುಷಿ ಕೊಟ್ಟಿತು. ಸಣ್ಣ ಪಾತ್ರ ವಾದರೂ ರಾಮಯ್ಯನ ಪಾತ್ರದಲ್ಲಿ ಸದಾನಂದ ಆರಿಕ್ಕಾಡಿ ಅವರ ಅಭಿನಯ ಮನ ಸ್ಪರ್ಶಿಯಾಗಿತ್ತು. ಮಲ ಮಕ್ಕಳು ಶಾಂತಿ ಮತ್ತು ರವಿಗೆ ಕಾಟ ಕೊಡುವ ಸುಮತಿ ಪಾತ್ರದಲ್ಲಿ ಬಾಲಕೃಷ್ಣ ರೈ ಮಜಿ ಬೈಲು ಅವರು ಕೂಡ ಪಾತ್ರಕ್ಕೆ ಸೂಕ್ತ ನ್ಯಾಯ ನೀಡುವಲ್ಲಿ ಸಫಲರಾದರು. ಹಿಂದಿನ ನಾಟಕದಲ್ಲಿರುತ್ತಿದ್ದ ಮೂರ್ನಾಲ್ಕು ಹಾಸ್ಯ ದೃಶ್ಯಗಳಿದ್ದವು.
ಉಳಿದಂತೆ ಡಾ| ಮಧು ಪಾತ್ರದಲ್ಲಿ ರಮೇಶ್ ಶೆಟ್ಟಿ ಬೆದ್ರ, ಗೋವಿಂದನಾಗಿ ಪುಷ್ಪ ರಾಜ್ ಶೆಟ್ಟಿ ತಲೇಕಳ, ಶಂಕ್ರಯ್ಯನಾಗಿ ವಿಘ್ನೇಶ್ ಭಟ್ ಮದಂಗಲ್ಲು, ಕಮಲಾ ಪಾತ್ರದಲ್ಲಿ ಬಾಲಕೃಷ್ಣ ಶೆಟ್ಟಿ, ಭವ್ಯಾ ಪಾತ್ರದಲ್ಲಿ ಮನೀಶ್ ಶೆಟ್ಟಿ ಸಾಂತಡ್ಕ, ಗುಮಾಸ್ತನಾಗಿ ಗಣೇಶ್ ದೇವಿಪುರ, ಶ್ಯಾಮಣ್ಣನಾಗಿ ಜಿತೇಂದ್ರ ಪಿಲಿ ಕೂರುಶಹ ಬ್ಟಾಸ್ ಎನಿಸಿಕೊಂಡರು. ನಾಟಕಕ್ಕೆ ಪೂರಕವಾದ ಕೆಲವು ಹಾಡುಗಳು ಕೂಡ ಮನ ಸ್ಪರ್ಶಿಯಾಗಿದ್ದವು. ನಾಟಕ ವೀಕ್ಷಿಸುತ್ತಿದ್ದಂತೆ ದಶಕಗಳ ಹಿಂದಿನ ಬಾಲ್ಯದ ನೆನಪಾಯಿತು. ಜಾತ್ರೆ, ಉತ್ಸವಗಳಲ್ಲಿ ಇಂಥದ್ದೇ ನಾಟಕಗಳು ಪ್ರದರ್ಶನವಾಗುತ್ತಿದ್ದ ಕಾಲಕ್ಕೆ ಮನಸ್ಸು ಹೊರಳಿತು. ಶಿವಗಿರಿ ಕಲ್ಲಡ್ಕ ಅವರ ಸಂಗೀತ ಮತ್ತು ಸ್ನೇಹ ಉಚ್ಚಿಲ ತಂಡದ ಬೆಳಕಿನ ವ್ಯವಸ್ಥೆಗೆ ನಾಟಕದ ಯಶಸ್ಸಿನಲ್ಲಿ ವಿಶೇಷ ಕೊಡುಗೆ ನೀಡಿದೆ.
ಗಮನಿಸಬೇಕಾದ ಅಂಶವೆಂದರೆ – ರಂಗಭೂಮಿ ಮತ್ತೆ ಹಿಂದಿನ ವೈಭವಕ್ಕೆ ಮರಳುವ ಸಿದ್ಧತೆಯಲ್ಲಿದೆಯೇ ಎಂಬುದು. ಈ ನಾಟಕದ ಯಶಸ್ಸು ಸೇರಿದ್ದ ಪ್ರೇಕ್ಷಕರು, ಸಿಕ್ಕಿದ ಪ್ರತಿಕ್ರಿಯೆ ಮುಂತಾದವುಗಳಿಂದ ಈ ತಂಡಕ್ಕೆ ಇದೇ ನಾಟಕವನ್ನು ಪ್ರದರ್ಶಿಸಲು ಮೂರ್ನಾಲ್ಕು ಕಡೆಗಳಿಂದ ಆಫರ್ ಬಂದಿದೆ. ಹಾಸ್ಯ ಪ್ರಧಾನ ನಾಟಕಗಳದ್ದೇ ಪಾರಮ್ಯವಿರುವ ಈ ಕಾಲಘಟ್ಟದಲ್ಲಿ ಇಂಥ ಸಾಂಸಾರಿಕ ಮತ್ತು ದುರಂತ ನಾಟಕಗಳಿಗೂ ಪ್ರೇಕ್ಷಕರಿದ್ದಾರೆ ಮತ್ತು ಅದನ್ನು ಕುಟುಂಬ ಸಮೇತರಾಗಿ ವೀಕ್ಷಿಸಲು ಬಯಸುವ ಪ್ರೇಕ್ಷಕರ ಸಂಖ್ಯೆ ಈಗಲೂ ಇದೆ. ಇಂಥ ನಾಟಕಗಳನ್ನು ಪ್ರದರ್ಶಿಸುವವರ ಕೊರತೆ ಮಾತ್ರವೇ ಇತ್ತು ಹೊರತು ಪ್ರೇಕ್ಷಕರ ಕೊರತೆ ಇಲ್ಲ ಎಂಬುದಕ್ಕೆ ಸುರತ್ಕಲ್ಲಿನಲ್ಲಿ ಪ್ರದರ್ಶನಗೊಂಡ ಬಯ್ಯ ಮಲ್ಲಿಗೆ ಸಾಕ್ಷಿಯಾಯಿತು.
ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ