ನಾಟಕದ ರಸದೌತಣ ನೀಡಿದ ರಂಗ ಪಂಚಮಿ
Team Udayavani, May 4, 2018, 6:00 AM IST
ಬೈಂದೂರಿನ “ಲಾವಣ್ಯ’ ರಂಗಸಂಸ್ಥೆ ಇತ್ತೀಚೆಗೆ ತನ್ನ ನಲವತ್ತೂಂದನೆಯ ವಾರ್ಷಿಕೋತ್ಸವವನ್ನು “ರಂಗ ಪಂಚಮಿ’ ಎಂಬ ಹೆಸರಿನಲ್ಲಿ ಐದು ದಿನದ ನಾಟಕೋತ್ಸವದ ಮೂಲಕ ಆಚರಿಸಿಕೊಂಡಿತು.
ಮೊದಲ ದಿನ ಆತಿಥೇಯ ತಂಡದ “ಗಾಂಧಿಗೆ ಸಾವಿಲ್ಲ’ ಪ್ರದರ್ಶನಗೊಂಡಿತು. ಹಿಂದಿಯಲ್ಲಿ ಅಸ್ಕರ್ ವಜಾಹತ್ ರಚಿಸಿರುವ ರಂಗ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಹಸನ್ ನಯೀಂ ಸುರಕೋಡ. ವಸಂತ ಬನ್ನಾಡಿಯವರ ಮಾರ್ಗದರ್ಶನದಲ್ಲಿ ನವೀನ ವಿನ್ಯಾಸಗಳೊಂದಿಗೆ ನಿರ್ದೇಶನಗೈದವರು ಗಿರೀಶ್ ಬೈಂದೂರು.ನಾಟಕದ ಹೆಸರೇ ರೂಪಕವಾಗಿ ಗಾಂಧಿಗಿರಿ ಎನ್ನುವುದು ಅಚಲವಾದ ಹಿಮಗಿರಿಯಂತೆ ತನ್ನ ಸಿದ್ಧಾಂತವನ್ನು ವಿಷಮ ಸನ್ನಿವೇಶದಲ್ಲೂ ಕೈಬಿಡದೆ ಅಹಿಂಸೆ, ಸಂಯಮ, ಸಹಿಷ್ಣುತೆ ಮೆರೆಯುವುದು; ಗೋಡ್ಸೆಯ ಮನಃ ಪರಿವರ್ತನೆ ಮಾಡುವುದು ಕೇವಲ ಗಾಂಧಿಗೆ ಮಾತ್ರ ಸಾಧ್ಯ ಎಂದು ತೋರಿಸಿಕೊಡುತ್ತದೆ.ಗೋಡ್ಸೆಯೊಂದಿಗೆ ಸಂವಾದ ನಡೆಸುವ ಗಾಂಧಿ ನ್ಯಾಯಾಲಯದಲ್ಲಿ ಕೇವಲ ಸಾಕ್ಷಿಯ ಮೇಲೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ; ಆದರೆ ಸೆರೆಮನೆಯಲ್ಲಿ ಆತ್ಮ ಸಂವಾದಕ್ಕೆ ತಡೆ ಇಲ್ಲ ಎಂದು ತೋರಿಸಿಕೊಡುತ್ತಾರೆ. ಗೋಡ್ಸೆಗಿರಿಯು ಗಾಂಧಿವಾದದ ಮುಂದೆ ಶರಣಾಗುವುದನ್ನು ನಿರ್ದೇಶಕರು ವಾಚ್ಯಕ್ಕೂ ನಿಲುಕದ ರಂಗತಂತ್ರದ ಮೂಲಕ ನಾಟಕದ ಆಶಯವನ್ನು ಎತ್ತಿ ಹಿಡಿದಿದ್ದಾರೆ.
ಸಾಂದರ್ಭಿಕವಾಗಿ ಬರುವ ಪ್ರೇಮಿಗಳಾದ ಸುಷ್ಮಾ ಮತ್ತು ನವೀನ ಜೋಶಿ ಗಾಂಧೀಜಿಯ ಇನ್ನೊಂದು ಮುಖದ ದರ್ಶನ ಮಾಡಿಸುತ್ತಾರೆ. ಬೆಳಕಿನ ಗುಣಮಟ್ಟ ಚೆನ್ನಾಗಿದ್ದರೂ ನಿಖರತೆಯ ಕಡೆಗೆ ಇನ್ನಷ್ಟು ಶ್ರಮವಹಿಸಬೇಕು. ಉತ್ತಮ ವೇಷಭೂಷಣ, ರಂಗಪರಿಕರಗಳು ಪ್ರಭಾವಿ ಎನಿಸಿವೆ. ಒಟ್ಟಿನಲ್ಲಿ ಸವಾಲಿನ ನಾಟಕವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು. ನಾಟಕದ ಒಟ್ಟು ಅವಧಿಯಲ್ಲಿ ಇನ್ನಷ್ಟು ಸಂಕ್ಷೇಪಿಸುವತ್ತ ಗಮನಹರಿಸಬಹುದು.
ದ್ವಿತೀಯ ದಿನದ ನೃತ್ಯರೂಪಕ ಗೋಕುಲ ನಿರ್ಗಮನ, ರಚನೆ- ಪು.ತಿ.ನ., ನಿರ್ದೇಶನ- ವಿದ್ದು ಉಚ್ಚಿಲ. ತಂಡ ಅರೆಹೊಳೆ ಪ್ರತಿಷ್ಠಾನ, ಮಂಗಳೂರು ಇದರ ನಂದಗೋಕುಲ ಕಲಾವಿದೆಯರು. ಗೋಕುಲದಲ್ಲಿ ವೇಣುವಾದನದ ಮೂಲಕ ಎಲ್ಲರನ್ನೂ ಮೋಹಿಸಿ ಬ್ರಹ್ಮಾನಂದದಲ್ಲಿ ತೇಲಿಸುತ್ತಿದ್ದ ಕೃಷ್ಣ, ಅಣ್ಣನ ಒತ್ತಡಕ್ಕೆ ಒಪ್ಪಿ ಒಲ್ಲದ ಮನದಿಂದ ವೇಣು ವಿಸರ್ಜಿಸಿ ಗೋಕುಲವನ್ನು ಬಿಟ್ಟು ಕಂಸನ ಬಿಲ್ಲ ಹಬ್ಬದ ಕಡೆಗೆ ಶೃಂಗಾರ ರಸ ತೊರೆದು ವೀರರಸದತ್ತ ಹೊರಳುವಲ್ಲಿನ ತಲ್ಲಣಗಳೇ ಇಲ್ಲಿನ ಕಥಾವಸ್ತು. ಬಾನ್ಸುರಿಯಲ್ಲಿ ಪಹಾಡಿ ಧುನ್, ದೇಶ್, ಭೂಪಾಲಿ, ದುರ್ಗಾ ರಾಗ ಬಳಸಿಕೊಳ್ಳಬಹುದಿತ್ತು. ಒಟ್ಟಾರೆ ಮಕ್ಕಳನ್ನೇ ಪ್ರಧಾನವಾಗಿಸಿಕೊಂಡು ಹಳೆಗನ್ನಡ ಶೈಲಿಯ ನೃತ್ಯ ರೂಪಕಕ್ಕೆ ಪಟ್ಟ ಶ್ರಮ ತಕ್ಕಮಟ್ಟಿಗೆ ಯಶಕಂಡಿದೆ.
ಚಂದ್ರಗಿರಿ ತೀರದಲ್ಲಿ ಪ್ರದರ್ಶನಗೊಂಡ ಮೂರನೇ ನಾಟಕ. ರಚನೆ – ಸಾರಾ ಅಬೂಬಕರ್, ರಂಗ ರೂಪ ನೀಡಿದವರು ರೂಪ ಕೋಟೇಶ್ವರ, ನಿರ್ದೇಶನ ನಯನ ಜೆ. ಸೂಡ. ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಬೇಗುದಿಯನ್ನು ಅಬ್ಬರಿಸದೆ ಶಾಂತವಾಗಿ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಸಾಗಿ ಧರ್ಮ ಸಂಕಟಕ್ಕೆ ಸಿಲುಕಿದ ಅಮಾಯಕ ನಾದಿರಾ ಆಹುತಿಯಾಗುವುದೇ ಇಲ್ಲಿನ ಕಥಾವಸ್ತು. ಅತ್ಯಂತ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡು ಕಲಾತ್ಮಕತೆಯನ್ನು ಉಳಿಸಿಕೊಂಡ ನಾಟಕ ಇದಾಗಿದೆ.ನಾದಿರಾಳ ವಿವಾಹ ಸಮಾರಂಭದ ನೃತ್ಯಗಳು ಮುಸ್ಲಿಮ್ ಸಮುದಾಯದ ಸಂಸ್ಕೃತಿಯನ್ನು ಸೊಗಸಾಗಿ ಸಾದರಪಡಿಸಿತು. ಜೀವನವನ್ನು ಸುಗಮವಾಗಿಸುವ, ಸಹ್ಯವಾಗಿಸುವ ಧರ್ಮವೇ ಬದುಕಿಗೆ ಮುಳುವಾದಾಗ ದಿಕ್ಕು ಕಾಣದೆ ಮರುಮದುವೆಯ ರಾತ್ರಿಯೇ, ಧರ್ಮ, ಶಾಸ್ತ್ರ, ತಲಾಖ್ಗಳನ್ನು ಕ್ರೂರವಾಗಿ ವಿಡಂಬಿಸುವಂತೆ ಚಂದ್ರಗಿರಿ ನದಿಗೆ ಹಾರಿ ಪ್ರಾಣಾರ್ಪಣೆ ಮಾಡುತ್ತಾಳೆ.
ನಾಲ್ಕನೆಯ ದಿನ ಪ್ರದರ್ಶಿತಗೊಂಡ ಗುಲಾಬಿ ಗ್ಯಾಂಗ್ ಅನ್ಯಾಯದ ವಿರುದ್ಧ ಸಿಡಿದೇಳುವ ಧೋರಣೆಯನ್ನೇ ಬಂಡವಾಳವಾಗಿಸಿಕೊಂಡ ನಾಟಕ. ರಂಗ ರೂಪ ಪ್ರವೀಣ ಸೂಡಾ. ಉತ್ತರ ಪ್ರದೇಶದ ಬಂದೇಲ್ಖಂಡ ಜಿಲ್ಲೆ ಬಡೋಸಾ ಗ್ರಾಮದ ಸಂಪತ್ ಪಾಲ್ ದೇವಿ ಇಲ್ಲಿ ಕಮಲಾಬಾಯಿಯಾಗಿ ಕಾಣಿಸಿಕೊಂಡು ಸ್ತ್ರೀಯರ ಬದುಕಿನ ಹಕ್ಕನ್ನು ಹಂತಹಂತದಲ್ಲೂ ಭೌತಿಕ ಹಾಗೂ ಬೌದ್ಧಿಕ ಚಾತುರ್ಯದಿಂದ ಪಡೆದುಕೊಳ್ಳುವ ಯಶೋಗಾಥೆಯೇ ಇಲ್ಲಿನ ಕಥಾವಸ್ತು.
ದೃಶ್ಯದಿಂದ ದೃಶ್ಯಕ್ಕೂ ಅಸಹಾಯಕ ಸನ್ನಿವೇಶದಲ್ಲೂ, ಧ್ವನಿ ಏರುಗತಿಯಲ್ಲಿ ಮುಂದುವರಿದು, ರಂಗ ಚಲನೆ ಕೂಡಾ ಪ್ರತಿಭಟನೆಯ ಪ್ರಖರತೆಯ ಅಭಿವ್ಯಕ್ತಿಗೆ ಪೂರಕವಾಗಿ ನಡೆಯುತ್ತದೆ. ಇಡೀ ನಾಟಕದಲ್ಲಿ ಗಟ್ಟಿ ಧ್ವನಿ, ಗಟ್ಟಿ ಹೆಜ್ಜೆ, ಗಟ್ಟಿ ನಡೆ, ತಾರಕ ಶೃತಿಯನ್ನು ಕೊನೆವರೆಗೂ ಏರುಗತಿಯಲ್ಲಿ ಉಳಿಸಿಕೊಂಡು ಮೈಮರೆತು ಪಾತ್ರವೇ ತಾವಾಗಿ ಅದ್ಭುತ ನಟನೆ ನೀಡಿದ ನಯನ ಜೆ. ಸೂಡ ಅವರ ನಿರ್ವಹಣೆ ಅಮೋಘವಾದುದು.
ಮಂಜುನಾಥ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ